ಈ ಬೌಲರ್‌ ರಸೆಲ್‌ ಅಬ್ಬರಕ್ಕೆ ಬ್ರೇಕ್ ಹಾಕಬಹುದು ಎಂದ ಕೆಕೆಆರ್ ಮಾಜಿ ನಾಯಕ..!

By Suvarna NewsFirst Published Sep 8, 2020, 4:42 PM IST
Highlights

ಕೆಕೆಆರ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ರಸೆಲ್ ಅವರನ್ನು ಎರಡು-ಮೂರು ಬೌಲರ್‌ಗಳು ಮಾತ್ರ ಕಟ್ಟಿ ಹಾಕಲು ಸಾಧ್ಯವೆಂದು ಕೆಕೆಆರ್ ಮಾಜಿ ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.08): ಕೋಲ್ಕತ ನೈಟ್‌ ರೈಡರ್ಸ್ ತಂಡದ ಆ್ಯಂಡ್ರೆ ರಸೆಲ್ ಕಳೆದ ಆವೃತ್ತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ಆದರೆ ರಸೆಲ್ ಅಬ್ಬರಕ್ಕೆ ಭಾರತದ ವೇಗಿಯೊಬ್ಬರು ಬ್ರೇಕ್ ಹಾಕಬಲ್ಲರು ಎಂದು ಕೆಕೆಆರ್ ಮಾಜಿ ನಾಯಕ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಹೌದು, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆ್ಯಂಡ್ರೆ ರಸೆಲ್ ಅಮೋಘ ಪ್ರದರ್ಶನ ತೋರಿದ್ದರು. 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 204.81ರ ಸರಾಸರಿಯಲ್ಲಿ 510 ರನ್ ಬಾರಿಸಿದ್ದರು. ಇನ್ನು 52 ಮನಮೋಹಕ ಸಿಕ್ಸರ್‌ಗಳು ಕೆಕೆಆರ್ ತಂಡದ ಫಲಿತಾಂಶವನ್ನೇ ಬದಲಿಸಿದ್ದವು. ಹೀಗಾಗಿ ರಸೆಲ್ ಅಬ್ಬರಕ್ಕೆ ಈ ಸಲ ಕಡಿವಾಣ ಹಾಕುವುದು ಹೇಗೆ ಎಂದು ಹಲವು ತಂಡಗಳು ಸಾಕಷ್ಟು ತಲೆ ಕೆಡಿಸಿಕೊಂಡಿವೆ. ಇದೀಗ ರಸೆಲ್‌ಗೆ ಮುಂಬೈ ಇಂಡಿಯನ್ಸ್ ತಂಡದ ಮಾರಕ ವೇಗಿ ಜಸ್ಪ್ರಿತ್ ಬುಮ್ರಾ ಸವಾಲಾಗಬಹುದು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. 

ಜಸ್ಪ್ರೀತ್ ಬುಮ್ರಾ ತಮ್ಮ ವೇಗದ ಬೌಲಿಂಗ್‌ನಲ್ಲಿ ವೇರಿಯೇಷನ್‌ ಹಾಗೂ ಯಾರ್ಕರ್ ಬೌಲಿಂಗ್ ದಾಳಿ ನಡೆಸುವ ಮೂಲಕ ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್‌ಮನ್ ರಸೆಲ್ ಅವರನ್ನು ಕಾಡಬಹುದು ಎಂದು ಗಂಭೀರ್ ಹೇಳಿದ್ದಾರೆ.

ಹೆಚ್ಚೆಂದರೆ ಎರಡರಿಂದ ಮೂರು ಬೌಲರ್‌ಗಳು ರಸೆಲ್ ಅವರನ್ನು ಕಾಡಬಹುದು. ಅದಕ್ಕಿಂತ ಜಾಸ್ತಿ ರಸೆಲ್‌ ಅವರನ್ನು ಕಾಡುವಂತಹ ಬೌಲರ್‌ಗಳು ಐಪಿಎಲ್‌ನಲ್ಲಿ ಇಲ್ಲ. ಆ ಪೈಕಿ ಬುಮ್ರಾ ಕೂಡಾ ಒಬ್ಬರು ಎಂದು ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

IPL 2020: 6 ಬೌಲರ್‌ಗಳ ಆ್ಯಕ್ಷನ್ ಅನುಕರಣೆ ಮಾಡಿದ ಜಸ್ಪ್ರೀತ್ ಬುಮ್ರಾ..! ವಿಡಿಯೋ ವೈರಲ್

ರಸೆಲ್ ಅವರನ್ನು ಅಗ್ರಕ್ರಮಾಂಕದಲ್ಲೇ ಆಡಿಸಬೇಕು. ಅಂದರೆ ಐದನೇ ಕ್ರಮಾಂಕಕ್ಕಿಂತ ಮೇಲೆಯೇ ರಸೆಲ್ ಅವರನ್ನು ಬ್ಯಾಟಿಂಗ್ ಮಾಡಲು ಕೆಕೆಆರ್ ಕಳಿಸಬೇಕು. ಒಂದು ಓವರ್ ಟಿ20 ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿ ಬಿಡಬಹುದು. ಅಗತ್ಯಬಿದ್ದರೆ ಇಯಾನ್‌ ಮಾರ್ಗನ್ ಅವರಿಗಿಂತ ಮುಂಚಿತವಾಗಿ ಅಂದರೆ ನಾಲ್ಕನೇ ಕ್ರಮಾಂಕದಲ್ಲಿ ರಸೆಲ್ ಅವರಿಗೆ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಡಬೇಕು ಎಂದು ಗಂಭೀರ್ ಹೇಳಿದ್ದಾರೆ.

ಗೌತಮ್‌ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡವು ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

click me!