
ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆ ಆಪರೇಷನ್ ಸಿಂದೂರ್, ಪಾಕಿಸ್ತಾನದ ಸೈನ್ಯ ಹಾಗೂ ವಾಯುಪಡೆಗೆ ಭಾರೀ ಆರ್ಥಿಕ ಹಾಗೂ ತಾಂತ್ರಿಕ ನಷ್ಟವನ್ನು ಉಂಟುಮಾಡಿದೆ. ಈ ಕುರಿತು ವಿಶ್ಲೇಷಣೆ ನಡೆಸಿದ ಚಕ್ರ ಡೈಲಾಗ್ಸ್ ಫೌಂಡೇಶನ್ (CDF) ಎಂಬ ಥಿಂಕ್ ಟ್ಯಾಂಕ್, ನಿಖರ ಮಾಹಿತಿ ಹಾಗೂ ಅಂದಾಜುಗಳ ವರದಿ ಬಿಡುಗಡೆ ಮಾಡಿದೆ. ಭಾರತೀಯ ವಾಯುಪಡೆಯ (IAF) ಮಾಜಿ ವಿಂಗ್ ಕಮಾಂಡರ್ ಸತ್ಯಂ ಕುಶ್ವಾಹ (ನಿವೃತ್ತ) ಅವರ ನೇತೃತ್ವದಲ್ಲಿ ಸ್ಥಾಪಿತವಾಗಿರುವ ಚಕ್ರ ಡೈಲಾಗ್ಸ್ ಫೌಂಡೇಶನ್ (CDF) ಎಂಬ ಯೋಚನಾ ಸಂಸ್ಥೆ, ಭಾರತದ ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನ ವಾಯುಪಡೆ (PAF) ಅನುಭವಿಸಿದ ತಾತ್ವಿಕ ಹಾಗೂ ಕಾರ್ಯಾಚರಣಾತ್ಮಕ ನಷ್ಟಗಳ ಬಗ್ಗೆ ವಿವರವಾದ ವರದಿಯನ್ನು ಬಿಡುಗಡೆ ಮಾಡಿದ್ದು, ಇದು ನೈಜ ಸಮಯದ ಗುಪ್ತಚರ, ನಿಗಾವಹಿ ಮತ್ತು ಶೋಧನಾ (ISR) ಮಾಹಿತಿಗಳು, ಪರಿಶೀಲಿತ ಮಾಧ್ಯಮ ವರದಿಗಳು ಹಾಗೂ ಗುಪ್ತ ಬಜೆಟ್ ಟೆಂಡರ್ಗಳ ಆಧಾರದ ಮೇಲೆ ಸಿದ್ಧಪಡಿಸಲಾದ ವಿಶ್ಲೇಷಣಾತ್ಮಕ ಅಧ್ಯಯನವಾಗಿದ್ದು, ಪಾಕಿಸ್ತಾನದ ಪಿಎಎಫ್ ಒಟ್ಟು ಆರ್ಥಿಕ ನಷ್ಟ $3.35732 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಿದೆ.
ಪಾಕಿಸ್ತಾನಿ ವಾಯುಪಡೆಯ ಪ್ರಮುಖ ಶಕ್ತಿಯಾದ F-16 ಬ್ಲಾಕ್ 52 ಯುದ್ಧ ವಿಮಾನಗಳಲ್ಲಿ ನಾಲ್ಕು ಘಟಕಗಳು ನಾಶವಾಗಿವೆ. ಇದರ ಒಟ್ಟು ಮೌಲ್ಯ ಸುಮಾರು ₹4,500 ಕೋಟಿ (ಅಂದಾಜು $350 ಮಿಲಿಯನ್). ಈ ವಿಮಾನಗಳು ಪಾಕಿಸ್ತಾನದ ರಕ್ಷಣಾ ಸಾಮರ್ಥ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು.
ಪಾಕಿಸ್ತಾನವು ತಮ್ಮ ಗಗನ ನಿಗಾವಣಾ ವ್ಯವಸ್ಥೆಗೆ ಬಳಸುತ್ತಿದ್ದ SAAB Erieye AWACS ವಿಮಾನವೊಂದನ್ನು ಕಳೆದುಕೊಂಡಿದೆ. ಈ ವಿಮಾನವು ಗಗನದಲ್ಲಿ ಶತ್ರು ಚಟುವಟಿಕೆಗಳನ್ನು ಪತ್ತೆಹಚ್ಚಲು ಮತ್ತು ಮಾರ್ಗದರ್ಶನ ನೀಡಲು ಉಪಯೋಗವಾಗುತ್ತಿತ್ತು. ಇದರ ಮೌಲ್ಯ ಅಂದಾಜು ₹290 ಕೋಟಿ ($35 ಮಿಲಿಯನ್).
ಭಾರತ ನಡೆಸಿದ ನಿಖರ ದಾಳಿಗಳಿಂದಾಗಿ ಶಾಹೀನ್ ಶ್ರೇಣಿಯ ಕ್ಷಿಪಣಿಗಳು ಎರಡು ನಾಶವಾಗಿವೆ. ಪ್ರತಿ ಕ್ಷಿಪಣಿಯ ಮೌಲ್ಯ ಸುಮಾರು ₹66 ಕೋಟಿ ($8 ಮಿಲಿಯನ್). ಜೊತೆಗೆ, ಪಾಕಿಸ್ತಾನ ಬಳಸದಿದ್ದ IL-78 ಇಂಧನ ತುಂಬುವ ಟ್ಯಾಂಕರ್ ಅನ್ನು ಕೂಡ ಕಳೆದುಕೊಂಡಿದೆ. ಇದರ ಮೌಲ್ಯ ₹290 ಕೋಟಿ ($35 ಮಿಲಿಯನ್).
ಪಾಕಿಸ್ತಾನವು ಟರ್ಕಿಯಿಂದ ಖರೀದಿಸಿದ ಬೈರಕ್ತಾರ್ TB2 UCAV ಡ್ರೋನ್ಗಳು ಭಾರತದ ಗಗನ ವಿಮಾನ ಭದ್ರತಾ ವ್ಯವಸ್ಥೆಯು ತಟಸ್ಥಗೊಳಿಸಿದೆ. ಈ ಡ್ರೋನ್ ಪ್ರತಿ ಘಟಕವೂ ₹50 ಕೋಟಿ ($6 ಮಿಲಿಯನ್) ಮೌಲ್ಯದದ್ದಾಗಿತ್ತು.
ಭಾರತದ ನೆಲದಿಂದ ಹಾರುವ ಕ್ಷಿಪಣಿ ಭದ್ರತಾ ವ್ಯವಸ್ಥೆ (Surface-to-Air Missiles), ಎಫ್-16 ಯುದ್ಧ ವಿಮಾನಗಳಲ್ಲಿ ಎರಡನ್ನು ಉಡಾಯಿಸಿ ಪತನಗೊಳಿಸಿದೆ. ಪಾಕಿಸ್ತಾನದ ಪ್ರಮುಖ ಗಗನನೆಲೆಗಳಲ್ಲೊಂದು ಸರ್ಗೋಧಾ ಏರ್ಬೇಸ್ ಮೇಲೆ ದಾಳಿ ನಡೆಸಿದೆ. ಇದರಿಂದ ₹830 ಕೋಟಿ (ಅಂದಾಜು $100 ಮಿಲಿಯನ್) ಮೌಲ್ಯದ ಹಾನಿ ಉಂಟಾಗಿದೆ.
ಪಾಕಿಸ್ತಾನವು ಈ ಕಾರ್ಯಾಚರಣೆಯ ಫಲವಾಗಿ, ₹29,000 ಕೋಟಿ (ಸುಮಾರು $3.4 ಬಿಲಿಯನ್) ಮೌಲ್ಯದ ಸೇನಾ ಹಾಗೂ ತಾಂತ್ರಿಕ ಸಂಪತ್ತನ್ನು ಕಳೆದುಕೊಂಡಿದೆ. ಇದರಲ್ಲಿ ಯುದ್ಧವಿಮಾನಗಳು, ಡ್ರೋನ್ಗಳು, ಕ್ಷಿಪಣಿಗಳು, ಭದ್ರತಾ ಸೌಲಭ್ಯಗಳು ಮತ್ತು ಇಂಧನ ವ್ಯವಸ್ಥೆಗಳು ಸೇರಿವೆ.
ಈ ಮೂಲಕ ಆಪರೇಷನ್ ಸಿಂಧೂರ್ವೊಂದರ ಮೂಲಕ ಭಾರತ ತನ್ನ ತಾಂತ್ರಿಕ ಶಕ್ತಿ, ಗಗನ ರಕ್ಷಣಾ ಸಾಮರ್ಥ್ಯ ಮತ್ತು ನಿಖರ ಗುರಿಯನ್ನು ಸಾಧಿಸುವ ಸಾಮರ್ಥ್ಯವನ್ನು ತೋರಿಸಿದೆ. ಪಾಕಿಸ್ತಾನವು ಅನುಭವಿಸಿದ ನಷ್ಟ, ಕೇವಲ ಆರ್ಥಿಕವಷ್ಟೇ ಅಲ್ಲ, ತಾಂತ್ರಿಕ ಶಕ್ತಿ ಹಾಗೂ ರಕ್ಷಣಾ ವ್ಯವಸ್ಥೆಯಲ್ಲಿಯೂ ದೊಡ್ಡ ಹಾನಿಯಾಗಿದೆಯೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಕಾರ್ಯಾಚರಣೆಗಳು ಭವಿಷ್ಯದಲ್ಲಿಯೂ ಭಾರತ ತನ್ನ ಗಡಿಗಳ ಭದ್ರತೆಗೆ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಂಬುದನ್ನು ಸಾರುತ್ತವೆ.