
ಭುವನೇಶ್ವರ: ತಾಂತ್ರಿಕ ದೋಷದ ಕಾರಣದಿಂದ ವಿಮಾನ ರದ್ದಾಗಿದ್ದಕ್ಕೆ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ನಿರ್ಗಮನ (Departure) ಕೋಣೆಯಲ್ಲಿ ತೀವ್ರ ಗದ್ದಲ ಸೃಷ್ಟಿಸಿ, ಕಂಪ್ಯೂಟರ್ ಉಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಇಲ್ಲಿನ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BPIA) ನಡೆದ ಈ ಅಶಿಸ್ತಿನ ವರ್ತನೆ ಹಾಗೂ ಆಸ್ತಿಗೆ ಹಾನಿ ಉಂಟುಮಾಡಿದ ಆರೋಪದ ಮೇಲೆ ಅಧಿಕಾರಿಗಳು ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಏರ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ದೂರಿನ ಪ್ರಕಾರ, ಮಾಮೋನಿ ಖರತ್ ಎಂದು ಗುರುತಿಸಲಾದ ಮಹಿಳಾ ಪ್ರಯಾಣಿಕಳು 'ಇಂಡಿಗೋ 6E 7352' ವಿಮಾನದ ಮೂಲಕ ಭುವನೇಶ್ವರದಿಂದ ಕೋಲ್ಕತ್ತಾಗೆ ಪ್ರಯಾಣಿಸಬೇಕಿತ್ತು.
ಆಗಸ್ಟ್ 13 (ಗುರುವಾರ) ಸಂಜೆ ಸುಮಾರು 6 ಗಂಟೆಯ ವೇಳೆಗೆ, ತಾಂತ್ರಿಕ ಕಾರಣಗಳಿಂದಾಗಿ ವಿಮಾನ ರದ್ದುಗೊಂಡಿದೆ ಎಂದು ಘೋಷಿಸಲಾಯಿತು. ಈ ವೇಳೆ ತಾಳ್ಮೆ ಕಳೆದುಕೊಂಡ ಮಹಿಳೆ ಇಂಡಿಗೋ ಏರ್ಲೈನ್ಸ್ ಕೌಂಟರ್ನಲ್ಲಿದ್ದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ವಿಮಾನಕ್ಕೆ ಕಾದು ಕಾದು ಪ್ರಯಾಣಿಕರು ಸುಸ್ತಾಗಿದ್ದರು. ರದ್ದಾದ 3 ಗಂಟೆಯ ಬಳಿಕ ಸಂಸ್ಥೆ ಘೋಷಿಸಿತ್ತು ಎಂದು ತಿಳಿದುಬಂದಿದೆ. ಸಿಟ್ಟಿಗೆದ್ದ ಮಹಿಳೆ ಸಿಬ್ಬಂದಿ ಬಳಿ ಜಗಳ ಮಾಡಿ ತಾಳ್ಮೆ ಕಳೆದುಕೊಂಡಿದ್ದಾಳೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಇಂಡಿಗೋ ಅಧಿಕಾರಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಸಿಬ್ಬಂದಿ ಕಣ್ಣೆದುರೇ ಮಹಿಳೆ ಆಕ್ರೋಶದಿಂದ ಚೆಕ್-ಇನ್ ಕೌಂಟರ್ನಲ್ಲಿದ್ದ ಕಂಪ್ಯೂಟರ್ ಮಾನಿಟರ್, ಕೀಬೋರ್ಡ್ ಹಾಗೂ ಪಾಸ್ಪೋರ್ಟ್-ಸ್ವೈಪಿಂಗ್ ಯಂತ್ರವನ್ನು ಎಸೆದು ಧ್ವಂಸಗೊಳಿಸಿದ್ದಾಳೆ. ಈ ಕೃತ್ಯದಿಂದ ವಿಮಾನ ನಿಲ್ದಾಣಕ್ಕೆ ಅಂದಾಜು ₹49,000 ನಷ್ಟ ಉಂಟಾಗಿದೆ ಎಂದು AAI ದೂರಿನಲ್ಲಿ ಉಲ್ಲೇಖಿಸಿದೆ.
ವಿಮಾನ ನಿಲ್ದಾಣದಲ್ಲಿ ಮಹಿಳೆ ಅಶಿಸ್ತಿನಿಂದ ವರ್ತಿಸುತ್ತಾ, ಕೌಂಟರ್ ಉಪಕರಣಗಳನ್ನು ಧ್ವಂಸಗೊಳಿಸುವ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಇತರ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿವೆ. ಈ ವೀಡಿಯೊದಲ್ಲಿ ಮಹಿಳೆಯು ಸಿಬ್ಬಂದಿಯೊಂದಿಗೆ ತೀವ್ರವಾಗಿ ಜಗಳವಾಡುತ್ತಾ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಘಟನೆಯ ಕುರಿತು ಅಧಿಕೃತ ಸ್ಪಷ್ಟನೆ ನೀಡಿರುವ ಇಂಡಿಗೋ ಏರ್ಲೈನ್ಸ್ ವಕ್ತಾರರು, ಆಗಸ್ಟ್ 13 ರಂದು ಭುವನೇಶ್ವರದಿಂದ ಕೋಲ್ಕತ್ತಾಗೆ ನಿರ್ಗಮಿಸಬೇಕಿದ್ದ ಇಂಡಿಗೋ 6E 7352 ವಿಮಾನದಲ್ಲಿ, ನಿರ್ಗಮನ ಪೂರ್ವ ತಪಾಸಣೆಯ (Pre-flight inspection) ವೇಳೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ವಿಮಾನವನ್ನು ರದ್ದುಗೊಳಿಸಬೇಕಾಯಿತು. ಇದರಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ನಿಯಮಿತ ಮಾಹಿತಿಯ ಜೊತೆಗೆ ಉಪಾಹಾರ, ವಸತಿ ವ್ಯವಸ್ಥೆ ಹಾಗೂ ಪರ್ಯಾಯ ವಿಮಾನ ಅಥವಾ ಪೂರ್ಣ ಹಣ ಮರುಪಾವತಿ (Full Refund) ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು ಎಂದಿದ್ದಾರೆ.
"ಈ ವೇಳೆ ವಿಮಾನ ನಿಲ್ದಾಣದ ಆಸ್ತಿಗೆ ಹಾನಿ ಮಾಡಿದ ಗ್ರಾಹಕಿಯನ್ನು ನಿಯಮಾವಳಿಗಳ ಪ್ರಕಾರ 'ಅಶಿಸ್ತಿನ ಪ್ರಯಾಣಿಕಳು' (Unruly Passenger) ಎಂದು ಘೋಷಿಸಲಾಯಿತು. ನಂತರ ಅವರನ್ನು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳ (SOP) ಪ್ರಕಾರ ಸಂಬಂಧಿತ ಭದ್ರತಾ ಸಂಸ್ಥೆಗಳಿಗೆ (CISF) ಹಸ್ತಾಂತರಿಸಲಾಯಿತು. ನಮಗೆ ಗ್ರಾಹಕರು ಹಾಗೂ ಸಿಬ್ಬಂದಿಯ ಭದ್ರತೆ ಮತ್ತು ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ" ಎಂದು ತಿಳಿಸಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಭುವನೇಶ್ವರದ ಏರ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ನಾಶವಾದ ₹49,000 ಮೌಲ್ಯದ ಉಪಕರಣಗಳ ವೆಚ್ಚವನ್ನು ಆಕೆಯಿಂದಲೇ ವಸೂಲಿ ಮಾಡುವಂತೆ ಪೊಲೀಸರಿಗೆ ವಿನಂತಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ