Latest Videos

ಟಿಡಿಪಿ ಅಭ್ಯರ್ಥಿ ಸ್ಪೀಕರ್‌ ಸ್ಥಾನಕ್ಕೆ ಕಣಕ್ಕಿಳಿದರೆ ಬೆಂಬಲ: ಇಂಡಿಯಾ ಕೂಟ

By Suvarna NewsFirst Published Jun 17, 2024, 12:24 PM IST
Highlights

ಲೋಕಸಭೆಯಲ್ಲಿ ಸ್ಪೀಕರ್‌ ಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಇಂಡಿಯಾ ಕೂಟದ ಎಲ್ಲ ಸದಸ್ಯರು ಒಮ್ಮತದಿಂದ ಬೆಂಬಲಿಸುವುದಾಗಿ ಶಿವಸೇನಾ (ಉದ್ಧವ್‌ ಬಣ) ವಕ್ತಾರ ಸಂಜಯ್‌ ರಾವುತ್‌ ತಿಳಿಸಿದ್ದಾರೆ.

ಮುಂಬೈ: ಲೋಕಸಭೆಯಲ್ಲಿ ಸ್ಪೀಕರ್‌ ಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಇಂಡಿಯಾ ಕೂಟದ ಎಲ್ಲ ಸದಸ್ಯರು ಒಮ್ಮತದಿಂದ ಬೆಂಬಲಿಸುವುದಾಗಿ ಶಿವಸೇನಾ (ಉದ್ಧವ್‌ ಬಣ) ವಕ್ತಾರ ಸಂಜಯ್‌ ರಾವುತ್‌ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್‌, ಬಿಜೆಪಿಗೆ ತನ್ನ ಮಿತ್ರಪಕ್ಷಗಳಿಗೆ ದ್ರೋಹ ಬಗೆಯುವುದು ಚಾಳಿಯಾಗಿದೆ. ಬಿಜೆಪಿಗೆ ಲೋಕಸಭಾ ಸ್ಪೀಕರ್‌ ಪಟ್ಟ ಸಿಕ್ಕಲ್ಲಿ ಕುತಂತ್ರದಿಂದ ಟಿಡಿಪಿ, ಜೆಡಿಯು, ಜಯಂತ್‌ ಚೌಧರಿ, ಚಿರಾಗ್‌ ಪಾಸ್ವಾನ್‌ರ ಪಕ್ಷಗಳನ್ನು ಒಡೆಯುತ್ತದೆ. ಹಾಗಾಗಿ ಟಿಡಿಪಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದಲ್ಲಿ ಇಂಡಿಯಾ ಕೂಟ ಒಕ್ಕೊರಲಾಗಿ ಬೆಂಬಲಿಸಲಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೇರಿರುವ ಎನ್‌ಡಿಎ ಸರ್ಕಾರದಲ್ಲಿ  ಕಿಂಗ್ ಮೇಕರ್‌ಗಳಾಗಿರುವ ಮಿತ್ರಪಕ್ಷಗಳಾದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳು ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನವನ್ನು ತಮಗೆ ನೀಡಬೇಕು ಎಂಬ ಬೇಡಿಕೆ ಇರಿಸಿದ್ದವು. ಆದರೆ ಲೋಕಸಭೆ ಸ್ಪೀಕರ್‌ ಯಾರಾಗಲಿದ್ದಾರೆ ಎಂಬ ಬಗ್ಗೆ ಇನ್ನು ನಿರ್ಧಾರವಾಗಿಲ್ಲ,

ಕಾರ್ಯಕರ್ತನ ಗುರುತಿಸಿ ಸಚಿವನನ್ನಾಗಿ ಮಾಡಿದ ಬಿಜೆಪಿಯನ್ನು ಶ್ಲಾಘಿಸಿದ ನಾಯ್ಡು: ವೀಡಿಯೋ ವೈರಲ್‌

ಜೂನ್ 9 ರಂದು ನಡೆದ ಪ್ರಧಾನಿ ಮೋದಿ ಹಾಗೂ ಸಂಪುಟ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಒಟ್ಟು 71 ಜನ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಲ್ಲಿ 60 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಇನ್ನು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ ಮತ್ತು ಜೆಡಿಯುನ ತಲಾ ಇಬ್ಬರು ಇದ್ದಾರೆ. ಜೆಡಿಎಸ್, ಹಿಂದೂಸ್ತಾನಿ ಅವಾಮ್ ಮೋರ್ಚಾ (ಹಮ್), ಶಿವಸೇನೆ (ಶಿಂಧೆ ಬಣ), ಅಪ್ಪಾ ದಳ, ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಎಲ್‌ಜೆಪಿ(ರಾಮವಿಲಾಸ್ ಪಾಸ್ವಾನ್) ಮತ್ತು ರಿಪ ಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ತಲಾ ಒಬ್ಬರಿದ್ದಾರೆ. 

7 ಹಂತಗಳಲ್ಲಿ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಿಜೆಪಿ 240, ಟಿಡಿಪಿ16, ಜೆಡಿಯು 12, ಎಲ್‌ಜೆಪಿ 5, ಶಿವ ಸೇನೆ 1, ಜೆಡಿಎಸ್ 2, ಹಮ್ 1, ಆರ್‌ಎಲ್‌ಡಿ 2, ಆರ್‌ಪಿಐ 1, ಅಪ್ಪಾದಳ 1 ಸೀಟು ಗೆದ್ದಿದ್ದವು.

News Hour: ಮೋದಿಗೆ ಶುರುವಾಯ್ತಾ ಎನ್‌ಡಿಎ ಮೈತ್ರಿಪಕ್ಷಗಳ ಟೆನ್ಶನ್‌!

ಲೋಕಸಭೆ ಸ್ಪೀಕರ್ ಹುದ್ದೆ ಮೇಲೇಕೆ ಮಿತ್ರಪಕ್ಷಗಳ ಕಣ್ಣು?

ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಮೈತ್ರಿಕೂಟದ ಪಾಲುದಾರರಿಗೆ ನೀಡಬೇಕು ಎಂದು ಎರಡೂ ಪಕ್ಷಗಳು ಬಿಜೆಪಿ ನಾಯಕರಿಗೆ ಈಗಾಗಲೇ ತಿಳಿಸಿವೆ ಇಲ್ಲಿ ಸ್ಪೀಕರ್ ಹುದ್ದೆಗೆ ಈ ಮೈತ್ರಿಕೂಟದ ನಾಯಕರು ಏಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬುದೇ ಬಹಳ ಮುಖ್ಯವಾದ ವಿಚಾರ, ಭವಿಷ್ಯದಲ್ಲಿ ಪಕ್ಷಾಂತರವಾಗುವಂತಹ ಸಂದರ್ಭ ಬಂದಲ್ಲಿ ಸ್ಪೀಕರ್ ಪಾತ್ರವೂ ನಿರ್ಣಾಯಕವಾಗಿರುತ್ತದೆ. ಅಲ್ಲದೇ ಭವಿಷ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರವೂ ರಚನೆ ಆಗುವ ಸಾಧ್ಯತೆ ಇರುತ್ತದೆ. ಈ ವೇಳೆ ಪಕ್ಷಾಂತರಗೊಂಡವರ ಅಮಾನತು ಮಾಡುವ ಅವರ ಅರ್ಹತೆಯನ್ನು ರದ್ದು ಮಾಡುವ ಅವಕಾಶ ಸ್ಪೀಕರ್‌ಗೆ ಇರುತ್ತದೆ. ಇದೇ ಕಾರಣಕ್ಕೆ ಈ ಉಭಯ ನಾಯಕರು ಲೋಕಸಭೆಯ ಸ್ಪೀಕರ್ ಹುದ್ದೆ ಮೇಲೆ ಭಾರಿ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. 

click me!