
ಚೆನ್ನೈ (ಸೆಪ್ಟೆಂಬರ್ 5, 2023): ಸನಾತನ ಧರ್ಮವನ್ನು ಡೆಂಘೀ, ಮಲೇರಿಯಾ ರೀತಿ ನಿರ್ಮೂಲನೆ ಮಾಡಬೇಕು ಎಂದು ಹೇಳಿ ವಿವಾದಕ್ಕೀಡಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಈ ಹೇಳಿಕೆ ನೀಡಿದ ಸಮಾರಂಭದಲ್ಲೇ ಆರೆಸ್ಸೆಸ್ ಕುರಿತ ವಿವಾದಾತ್ಮಕ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಪುಸ್ತಕದಲ್ಲಿ ಕೆಲ ಚಿತ್ರಗಳು ಆರ್ಎಸ್ಎಸ್ ಸಂಘಟನೆಯನ್ನು ಅವಹೇಳನ ಮಾಡುವ ರೀತಿಯಲ್ಲಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
‘ಸನಾತನ ಧರ್ಮ ನಿರ್ಮೂಲನೆ’ ಎಂಬ ವಿಷಯ ಕುರಿತು ಶನಿವಾರ ನಡೆದ ಸಮಾರಂಭದಲ್ಲಿ ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಪಾತ್ರ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅದರ ಮೊದಲ ಪುಟದಲ್ಲಿ ಆರ್ಎಸ್ಎಸ್ ಸಮವಸ್ತ್ರಧಾರಿಗಳನ್ನು ಹೋಲುವ ಕಪ್ಪು ಟೋಪಿಧಾರಿ ವ್ಯಕ್ತಿಯೊಬ್ಬನು ಖಾಕಿ ಪ್ಯಾಂಟ್ ಹಾಕಿರುವ ಇನ್ನೊಬ್ಬ ವ್ಯಕ್ತಿಯ ಬೂಟು ನೆಕ್ಕುವಂತೆ ತೋರಿಸಲಾಗಿದೆ. 2ನೇ ಪುಟದಲ್ಲಿ ಗಾಂಧಿ ಹತ್ಯೆಯ ಬಗ್ಗೆ ಬರೆಯಲಾಗಿದೆ. ಪುಸ್ತಕ ಉಳಿದ ಅಷ್ಟೂ ಹಾಳೆಗಳನ್ನು ಖಾಲಿ ಬಿಡುವ ಮೂಲಕ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್ಎಸ್ಎಸ್ ಪಾತ್ರ ಶೂನ್ಯ ಎಂದು ಬಿಂಬಿಸುವ ಯತ್ನ ಮಾಡಲಾಗಿದೆ.
ಇದನ್ನು ಓದಿ: ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್ ಪುತ್ರ
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಬಳಿಕ, ಈ ಖಾಲಿ ಬಿಟ್ಟ ಪುಟವನ್ನು ತುಂಬಲು ಉದಯನಿಧಿ ಅವರಿಗೆ ಸಮಾರಂಭದಲ್ಲಿ ಕೋರಲಾಯಿತು. ಆ ಪುಟದಲ್ಲಿ ಅವರು ಮೂರನೇ ಪುಟದಲ್ಲಿ ‘000’ ಎಂಬ 3 ಶೂನ್ಯಗಳನ್ನು ಬರೆದರು. ಈ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ‘3 ಸೊನ್ನೆ’ ಎಂದು ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ನಾನು ಮತ್ತೆ ಮತ್ತೆ ಅದನ್ನೇ ಹೇಳುವೆ: ಉದಯನಿಧಿ
‘ಸನಾತನ ಧರ್ಮವು ಡೆಂಘೀ ಹಾಗೂ ಮಲೇರಿಯಾ ರೋಗಗಳ ರೀತಿ ನಿರ್ಮೂಲನೆ ಆಗಬೇಕು’ ಎಂದು ಹೇಳಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ‘ನಾನು ಮತ್ತೆ ಮತ್ತೆ ಅದನ್ನೇ ಹೇಳುತ್ತೇನೆ’ ಎಂದು ಪುನರುಚ್ಚರಿಸಿದ್ದಾರೆ. ಆದರೆ ಇದೇ ವೇಳೆ, ‘ನಾನು ಎಲ್ಲ ಧರ್ಮಗಳಲ್ಲಿನ ಜಾತಿ ತಾರತಮ್ಯ ಖಂಡಿಸುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: Love Marriage: ಇಶಿಕಾ ಆದ ಇಕ್ರಾ; ಮದುವೆಗಾಗಿ ಸನಾತನ ಧರ್ಮಕ್ಕೆ ಸೇರಿದ ಮುಸ್ಲಿಂ ಯುವತಿ..!
ತಮ್ಮ ಹೇಳಿಕೆ ವಿವಾದಕ್ಕೆ ನಾಂದಿ ಹಾಡಿರುವ ಬಗ್ಗೆ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಮೊನ್ನೆ ನಾನು ಒಂದು ಸಮಾರಂಭದಲ್ಲಿ ಅದರ ಬಗ್ಗೆ (ಸನಾತನ ಧರ್ಮ) ಮಾತನಾಡಿದ್ದೆ. ನಾನು ಏನು ಹೇಳಿದ್ದೇನೋ ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುತ್ತೇನೆ. ಕೇವಲ ಹಿಂದೂ ಧರ್ಮವನ್ನಷ್ಟೇ ಅಲ್ಲ, ಎಲ್ಲ ಧರ್ಮಗಳಲ್ಲಿನ ಜಾತಿ ತಾರತಮ್ಯವನ್ನು ಖಂಡಿಸಿ ನಾನು ಮಾತನಾಡಿದ್ದೇನೆ’ ಎಂದರು. ಭಾನುವಾರ ಕೂಡ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾಗಿ ಅವರು ಹೇಳಿದ್ದರು.
ಇದನ್ನೂ ಓದಿ: ಸನ್ನಡತೆ ಅಡಿ ಸ್ಫೋಟ ರೂವಾರಿ ಉಗ್ರನ ಬಿಡುಗಡೆಗೆ ಸರ್ಕಾರ ಸಿದ್ಧತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ