
ಹನಿಮೂನ್ ವೇಳೆ ಗಂಡನ ಕೊಲೆ ಮಾಡಿ ಬಳಿಕ ನಾಟಕವಾಡಿ ದೇಶದೆಲ್ಲೆಡೆ ಸುದ್ದಿಯಾಗಿದ್ದ ಮೇಘಾಲಯ ಹನಿಮೂನ್ ಪ್ರಕರಣದ ಆರೋಪಿ ಸೋನಮ್ ರಘುವಂಶಿ ಘಟನೆ ನಡೆದು 10 ತಿಂಗಳ ಬಳಿಕ ಜೈಲಿನಿಂದ ಹೊರ ಬಂದಿದ್ದಾಳೆ. ಹನಿಮೂನ್ಗೆಂದು ಗಂಡ ರಾಜ ರಘುವಂಶಿ ಜೊತೆ ಮೇಘಾಲಯಕ್ಕೆ ಹೋಗಿದ್ದ ಸೋನಮ್ ಅಲ್ಲಿ ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಗಂಡನ ಕತೆ ಮುಗಿಸಿದ್ದಳು.ಈ ಪ್ರಕರಣ ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಎಂದು ದೇಶದೆಲ್ಲೆಡೆ ಕುಖ್ಯಾತಿ ಗಳಿಸಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸೋನಮ್ಗೆ ಈಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೇಘಾಲಯದ ಶಿಲ್ಲಾಂಗ್ ನ್ಯಾಯಾಲಯ ಈಕೆಗೆ ಜಾಮೀನು ನೀಡಿದೆ. ಇದಕ್ಕೂ ಮೊದಲೂ ಮೂರು ಬಾರಿ ನ್ಯಾಯಾಲಯ ಆಕೆಯ ಜಾಮೀನು ನಿರಾಕರಿಸಿತ್ತು. ಆದರೆ ಈಗ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಹೊರ ಬಂದಿದ್ದಾಳೆ. ಆಕೆಯ ಕುಟುಂಬ ಬಿಡುಗಡೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಸೋನ್ ಜೈಲಿನಿಂದ ಬಿಡುಗಡೆಯಾಗಿದ್ದಾಳೆ. ಹನಿಮೂನ್ನಲ್ಲೇ ಗಂಡನ ಕೊಲೆ ಮಾಡಿದ ಸೋನಮ್ ಕಳೆದ 10 ತಿಂಗಳಿನಿಂದ ಜೈಲಿನಲ್ಲಿದ್ದಳು.
ಮೇ 2025ರಲ್ಲಿ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ನಲ್ಲಿ ರಾಜಾ ರಘುವಂಶಿ ಕೊಲೆ ನಡೆದಿತ್ತು. ಪತ್ನಿಯೊಂದಿಗೆ ಹನಿಮೂನ್ ಹೋಗಿದ್ದ ರಾಜಾ ರಘುವಂಶಿ ಸೊಹ್ರಾ ಪ್ರದೇಶದಿಂದ ನಾಪತ್ತೆಯಾಗಿದ್ದರು. ಅವರ ಶವ ಅಲ್ಲಿನ ಕಂದಕವೊಂದರಲ್ಲಿ ಪತ್ತೆಯಾಗಿತ್ತು. ನಂತರ ಸೋನಮ್ನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ತನ್ನ ಗೆಳೆಯ ರಾಜಾ ಕುಶ್ವಾಹ್ ಜೊತೆ ಸೇರಿ ಗಂಡನ ಕೊಲೆ ಮಾಡಿದ ಆರೋಪದ ಮೇಲೆ ಸೋನಮ್ ಬಂಧನ ನಡೆದಿತ್ತು. ಆದರೆ ಈಗ ಸೋನಮ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾಳೆ. ಆದರೆ ಆಕೆಯ ಪ್ರಿಯಕರ ರಾಜ್ ಕುಶ್ವಾಹ್ ಸೇರಿದಂತೆ ಮೂವರು ಆರೋಪಿಗಳು ಇನ್ನೂ ಜೈಲಿನಲ್ಲೇ ಇದ್ದಾರೆ.
ತನಿಖೆ ಮುಗಿದಿದ್ದು, ಆರೋಪಪಟ್ಟಿ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದ ಕಾನೂನು ನೆರವು ಘಟಕವು ಜಾಮೀನು ಅರ್ಜಿಯನ್ನು ಸಲ್ಲಿಸಿತ್ತು. ತನಿಖೆಗೆ ತಾನು ಸಂಪೂರ್ಣವಾಗಿ ಸಹಕರಿಸಿದ್ದೇನೆ ಮತ್ತು ಭವಿಷ್ಯದಲ್ಲಿಯೂ ಸಹ ಇದನ್ನು ಮುಂದುವರಿಸುತ್ತೇನೆ ಎಂದು ಸೋನಮ್ ಹೇಳಿದ ನಂತರ ಆಕೆಗೆ ಜಾಮೀನು ನೀಡಲಾಗಿದೆ. ಈಗಾಗಲೇ ಸೋನಮ್ 10 ತಿಂಗಳು ಜೈಲಿನಲ್ಲಿ ಕಳೆದಿದ್ದಾಳೆ.
ಸೋನಮ್ ಈಗಾಗಲೇ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದು, ಆಕೆಯ ಬಿಡುಗಡೆಗಾಗಿ ಶ್ಯೂರಿಟಿ ಬಾಂಡ್ ನೀಡಲು ಆಕೆಯ ತಂದೆ ಮತ್ತು ಸೋದರ ಸಂಬಂಧಿ ಶಿಲ್ಲಾಂಗ್ಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ರಾಜಾ ರಘುವಂಶಿ ಹತ್ಯೆಗೆ ಸಂಬಂಧಿಸಿದಂತೆ ಐದು ಆರೋಪಿಗಳನ್ನು ಗುರುತಿಸಿ ತನಿಖಾಧಿಕಾರಿಗಳು ಸೊಹ್ರಾದಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ 790 ಪುಟಗಳ ಬೃಹತ್ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಇದಾಗಿ ತಿಂಗಳುಗಳ ನಂತರ ಈ ಬೆಳವಣಿಗೆ ನಡೆದಿದೆ.
ರಾಜಾ ರಘುವಂಶಿ ಕೊಲೆ ನಡೆಯುವ ಮೊದಲು 2025ರ ಮೇ 26ರಂದು ಸೋನಮ್ ಹಾಗೂ ರಾಜಾ ರಘುವಂಶಿ ಮೇಘಾಲಯದ ಸೋಹ್ರಾಗೆ ಬಂದಿದ್ದು ಬಳಿಕ ರಾಜಾ ನಾಪತ್ತೆಯಾಗಿದ್ದರು. ಇದು ಆ ಪ್ರದೇಶದಾದ್ಯಂತ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಗೆ ಕಾರಣವಾಗಿತ್ತು. ಹಲವು ದಿನಗಳ ಶೋಧದ ನಂತರ ಜೂನ್ 2 ರಂದು, ಜಲಪಾತದ ಬಳಿಯ ಆಳವಾದ ಕಂದಕದಲ್ಲಿ ರಾಜಾ ಶವ ಪತ್ತೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ