ವಯನಾಡು: ಮೃತರ ಸಂಖ್ಯೆ 358ಕ್ಕೇರಿಕೆ: ಸಂತ್ರಸ್ತರಿಗಾಗಿ ಹೊಸ ಟೌನ್‌ಶಿಪ್‌: ಪಿಣರಾಯಿ

By Kannadaprabha NewsFirst Published Aug 4, 2024, 8:53 AM IST
Highlights

ಕೇರಳದ ವಯನಾಡಿನಲ್ಲಿ ಘನಘೋರ ದುರಂತ ಸಂಭವಿಸಿ, 5 ದಿನಗಳೇ ಕಳೆದಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ. ಇದರ ನಡುವೆ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿದ್ದು, ಸುಮಾರು 250 ಮಂದಿ ಈವರೆಗೂ ಪತ್ತೆ ಆಗಿಲ್ಲ.

ವಯನಾಡು: ಕೇರಳದ ವಯನಾಡಿನಲ್ಲಿ ಘನಘೋರ ದುರಂತ ಸಂಭವಿಸಿ, 5 ದಿನಗಳೇ ಕಳೆದಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ. ಇದರ ನಡುವೆ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿದ್ದು, ಸುಮಾರು 250 ಮಂದಿ ಈವರೆಗೂ ಪತ್ತೆ ಆಗಿಲ್ಲ. ದುರಂತದ ಸ್ಥಳದಲ್ಲಿ ರಕ್ಷಣಾ ಪಡೆಗಳು ಹಗಲಿರುಳು ಶ್ರಮ ವಹಿಸುತ್ತಿದ್ದು, ನಾಪತ್ತೆ ಆದವರ ಪತ್ತೆಗೆ ವಿಶೇಷ ಶ್ವಾನದಳಗಳು ಕೂಡ ಕೈಜೋಡಿಸಿವೆ. ರಕ್ಷಣಾ ಕಾರ್ಯದ ವೇಳೆ ಅವಶೇಷಗಳಡಿ ಸಿಗುತ್ತಿರುವ ಅರ್ಧಂಬರ್ಧ ಮೃತದೇಹಗಳು ಕೇರಳದ ಭೀಕರತೆಗೆ ಸಾಕ್ಷಿಯಾಗಿದೆ.

1 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ದುರಂತ ಭೂಮಿಯಲ್ಲಿ ಶ್ರಮಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು 349 ಜನರನ್ನು ರಕ್ಷಿಸಿದ್ದಾರೆ. ದುರಂತದಲ್ಲಿ ಸುಮಾರು 250 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಯಾಗಿ ಶೋಧ ಕಾರ್ಯ ಮುಂದುವರೆದಿದೆ.  ಈ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದು, ‘ರಕ್ಷಣಾ ಕಾರ್ಯಾಚರಣೆ ಕೊನೆ ಹಂತ ತಲುಪಿದೆ. ರಕ್ಷಣಾ ಕಾರ್ಯಾಚರಣೆ ವೇಳೆಯಲ್ಲಿ ಸಿಕ್ಕ ಅರ್ಧಂಬರ್ಧ ದೇಹಗಳ ಗುರುತು ಪತ್ತೆ ಮಾಡುವುದೇ ದೊಡ್ಡ ಸವಾಲು. ಇದುವರೆಗೆ 148 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. ಉಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ದುರಂತದಲ್ಲಿ ಕೆಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ.

Latest Videos

ವಯನಾಡು ದುರಂತಕ್ಕೆ ಎಚ್ಚೆತ್ತ ಕೇಂದ್ರ, ಕರ್ನಾಟಕ ಸೇರಿ 6 ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಗಣಿಗಳ ನಿಷೇಧಕ್ಕೆ ಸಿದ್ಧತೆ

ಗುಡ್ಡ ಕುಸಿತ ಸಂತ್ರಸ್ತರಿಗಾಗಿ ಹೊಸ ಟೌನ್‌ಶಿಪ್‌: ಪಿಣರಾಯಿ

ಕೇರಳದ ವಯನಾಡಿನಲ್ಲಿ ಭಾರೀ ಗುಡ್ಡ ಕುಸಿತದಿಂದ ನಲುಗಿರುವ ದುರಂತ 4 ಹಳ್ಳಿಗಳ ಸ್ಥಳದ ಅಕ್ಕಪಕ್ಕದಲ್ಲೇ ಸುರಕ್ಷಿತವಾದ ಜಾಗದಲ್ಲಿ ಸಂತ್ರಸ್ತರಿಗಾಗಿ ಹೊಸ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂತ್ರಸ್ತರ ರಕ್ಷಣೆ ಕಾರ್ಯ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಪುನರ್‌ನಿರ್ಮಾಣದ ಬಗ್ಗೆ ಗಮನ ಹರಿಸುತ್ತೇವೆ. ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್‌ ರೂಪಿಸಲಾಗುತ್ತಿದೆ. ಮನೆ ಕಳೆದುಕೊಂಡವರಿಗಾಗಿ ಸುಸಜ್ಜಿತ ಟೌನ್‌ಶಿಪ್‌ ನಿರ್ಮಾಣ ಮಾಡುತ್ತೇವೆ. ಸಾಧ್ಯವಾದಷ್ಟು ಬೇಗ ಅದರ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಹೇಳಿದರು.

ವಯನಾಡು ದುರಂತದಲ್ಲಿ ನಲುಗಿದ ಕುಟುಂಬಕ್ಕೆ ರಾತ್ರಿ ಇಡೀ ಆಶ್ರಯ ನೀಡಿ ಕಾಪಾಡಿದ ಕಾಡಾನೆ!

ಜಗತ್ತಿನ ನಾನಾ ಭಾಗಗಳಿಂದ ವಯನಾಡು ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ನೆರವು ಹರಿದುಬರುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ತಲಾ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಶೋಭಾ ರಿಯಲ್‌ ಎಸ್ಟೇಟ್‌ ಕಂಪನಿ 50 ಮನೆ, ವಿಶ್ವ ಮಲಯಾಳಿ ಮಂಡಳಿ 14 ಮನೆ, ಕೋಟಕ್ಕಲ್‌ ಆರ್ಯವೈದ್ಯಶಾಲಾದವರು 10 ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಜನರು ದೇಣಿಗೆ ನೀಡುವುದಕ್ಕೆ ಹೊಸ ವೆಬ್‌ಸೈಟ್‌ ಕೂಡ ರೂಪಿಸಲಾಗಿದೆ ಎಂದು ತಿಳಿಸಿದರು. ‘ಶಿಕ್ಷಣ ಸಚಿವರು ದುರಂತ ಸ್ಥಳದಲ್ಲಿನ ಶಾಲೆಗಳಿಗೆ ಶೀಘ್ರದಲ್ಲೇ ಭೇಟಿ ನೀಡಿ ಮಕ್ಕಳ ಶಿಕ್ಷಣಕ್ಕೆ ಏನೂ ತೊಂದರೆಯಾಗದಂತೆ ಗಮನ ಹರಿಸಲಿದ್ದಾರೆ’ ಎಂದೂ ಸಿಎಂ ಮಾಹಿತಿ ನೀಡಿದರು.

click me!