
ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ವಕ್ಫ್ ಬೈ ಕೋರ್ಟ್ಸ್, ವಕ್ಫ್ ಬೈ ಯೂಸರ್ ಮತ್ತು ವಕ್ಫ್ ಬೈ ಡೀಡ್ ಎಂದು ಘೋಷಿಸಲಾದ ಆಸ್ತಿಗಳನ್ನು ಡಿನೋಟಿಫೈ ಮಾಡುವ ಅಧಿಕಾರವೂ ಸೇರಿ 3 ವಿಚಾರಗಳಿಗೆ ಸಂಬಂಧಿಸಿದ ತನ್ನ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ಮತ್ತು ಅಭಿಷೇಕ್ ಸಿಂಘ್ವಿ ಹಾಗೂ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನು ಸತತ ಮೂರುದಿನಗಳಿಂದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ ಅವರಿದ್ದ ಪೀಠ ತನ್ನ ಮಧ್ಯಂತರ ಆದೇಶ ಕಾಯ್ದಿರಿಸಿತು.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರವು, ವಕ್ಫ್ ಎನ್ನುವುದು ಸ್ವರೂಪದಲ್ಲಿ ಜಾತ್ಯತೀತ ಪರಿಕಲ್ಪನೆಯಾಗಿದೆ. ಇದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತು.ಈ ವೇಳೆ ಸಿಬಲ್ ಅವರು, ಈ ತಿದ್ದುಪಡಿ ಕಾಯ್ದೆಯು ಐತಿಹಾಸಿಕ ಕಾನೂನು ಮತ್ತು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ. ನ್ಯಾಯಾಂಗೇತರ ಪ್ರಕ್ರಿಯೆ ಮೂಲಕ ವ್ಯವಸ್ಥಿತವಾಗಿ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯುವ ಸಾಧನವಾಗಿದೆ ಎಂದು ವಾದಿಸಿದರು.
ಅರ್ಜಿದಾರರ ಪರ ವಕೀಲರು ಮೂರು ಪ್ರಮುಖ ವಿಚಾರಗಳಿಗೆ ಸಂಬಂಧಿಸಿ ಮಧ್ಯಂತರ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದರು. ಅವು..
1. ವಕ್ಫ್ ಬೈ ಕೋರ್ಟ್(ನ್ಯಾಯಾಲಯದ ಮೂಲಕ), ವಕ್ಫ್ ಬೈ ಯೂಸರ್(ಹಲವು ವರ್ಷಗಳಿಂದ ವಕ್ಫ್ ಬಳಸುತ್ತಿದ್ದ) ಮತ್ತು ವಕ್ಫ್ ಬೈ ಡೀಡ್(ಕರಾರು ಪತ್ರ) ಮೂಲಕ ವಕ್ಫ್ ಆಸ್ತಿ ಎಂದು ಘೋಷಿಸಲ್ಪಟ್ಟ ಆಸ್ತಿಗಳನ್ನು ಡಿನೋಟಿಫೈ ಮಾಡುವ ಅಧಿಕಾರ.
2 .ರಾಜ್ಯ ವಕ್ಫ್ ಬೋರ್ಡ್ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ನಲ್ಲಿ ಮುಸ್ಲಿಮರೇತರರಿಗೆ ಅವಕಾಶ ನೀಡುವುದು.
3. ಒಂದು ವೇಳೆ ಜಿಲ್ಲಾಧಿಕಾರಿಗಳ ತನಿಖೆ ವೇಳೆ ವಕ್ಫ್ ಭೂಮಿಯು ಸರ್ಕಾರಿ ಭೂಮಿಯೆಂದು ತಿಳಿದು ಬಂದರೆ ಆ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಪರಿಗಣಿಸಲ್ಲ ಎಂಬ ನಿಯಮಕ್ಕೆ ಸಂಬಂಧಿಸಿ ಅರ್ಜಿದಾರರು ತಡೆ ನೀಡುವಂತೆ ಕೋರಿದ್ದಾರೆ.
ವಕ್ಫ್ ತಿದ್ದುಪಡಿ ವಿಧೇಯಕವನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಏ.25ರಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ನ್ಯಾಯಾಲಯಕ್ಕೆ 1,332 ಪುಟಗಳ ಅಫಿಡವಿಟ್ ಸಲ್ಲಿಸಿತ್ತು. ಜತೆಗೆ, ಈ ಕಾಯ್ದೆಗೆ ತಡೆ ನೀಡದಂತೆ ಮನವಿ ಮಾಡಿತ್ತು. ಏ.5ರಂದು ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ನೋಟಿಫೈ ಮಾಡಿತ್ತು.
ಅಬ್ದುಲ್ ಕಲಾಂ ಕುರಿತ ಚಿತ್ರದಲ್ಲಿ ಕಲಾಂ ಪಾತ್ರದಲ್ಲಿ ನಟ ಧನುಷ್
ನವದೆಹಲಿ: ಮಾಜಿ ರಾಷ್ಟ್ರಪತಿ ಡಾ। ಎಪಿಜಿ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ ಸಿನಿಮಾವನ್ನು ನಿರ್ದೇಶಕ ಓಂ ರಾವತ್ ನಿರ್ದೇಶಿಸಲಿದ್ದು, ಈ ಸಿನಿಮಾದಲ್ಲಿ ತಮಿಳು ನಟ ಧನುಷ್ ಅವರು ಕಲಾಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎನ್ನುವ ಹೆಸರಿನ ಚಿತ್ರ ತೆರೆಗೆ ಬರಲಿದ್ದು, ಬುಧವಾರ ಕಾನ್ಸ್ ಚಿತ್ರೋತ್ಸವ ಸಂದರ್ಭದಲ್ಲಿ ಶೀರ್ಷಿಕೆಗೆ ಘೋಷಣೆಯಾಗಿದೆ. ಈ ಬಗ್ಗೆ ನಟ ತಮ್ಮ ಇನ್ಸ್ಟಾಗ್ರಾಂನಲ್ಲಿ ಸಿನಿಮಾದ ಮೊದಲ ಪೋಸ್ಟರ್ ಹಂಚಿಕೊಂಡು ಖುಷಿ ವ್ಯಕ್ತ ಪಡಿಸಿದ್ದಾರೆ. ‘ಕಲಾಂರಂತಹ ಸ್ಫೂರ್ತಿದಾಯಕ, ಉದಾತ್ತ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾನು ನಿಜವಾಗಿಯೂ ಧನ್ಯ’ ಎಂದಿದ್ದಾರೆ.
ಸಿನಿಮಾವನ್ನು ತಾನಾಜಿ: ದಿ ಅನ್ಸಂಗ್ ವಾರಿಯರ್, ಆದಿಪುರಷ ಸಿನಿಮಾ ಖ್ಯಾತಿಯ ಓಂ ರಾವುತ್ ನಿರ್ದೇಶಿಸಲಿದ್ದಾರೆ. ಟಿ- ಸಿರೀಸ್ನ ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ , ಆರ್ಟ್ಸ್ನ ಅಭಿಷೇಕ್ ಅಗರ್ವಾಲ್ ಮತ್ತು ಅನಿಲ್ ಸುಂಕಾರ ನಿರ್ಮಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ