
ನವದೆಹಲಿ : ಚುನಾವಣಾ ಆಯೋಗ ಮತಗಳವು ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆಯೋಗ ಮತ್ತೆ ತೀಕ್ಷ್ಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದೆ. ‘ಮತಗಳ್ಳತನ’ದಂತಹ ಕೊಳಕು ನುಡಿಗಟ್ಟು ಉಲ್ಲೇಖಿಸುವ ಮೂಲಕ ಸುಳ್ಳು ಕಥನವನ್ನು ಸೃಷ್ಟಿಸಬೇಡಿ. ಅದರ ಬದಲು ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿ ಎಂದು ತಾಕೀತು ಮಾಡಿದೆ.
ಈ ಬಗ್ಗೆ ಚುನಾವಣಾ ಆಯೋಗ ಹೇಳಿಕೆ ಬಿಡುಗಡೆ ಮಾಡಿದ್ದು, ‘1951-52ರಲ್ಲಿ ನಡೆದ ಮೊದಲ ಚುನಾವಣೆಯಿಂದಲೇ ಒಬ್ಬ ವ್ಯಕ್ತಿ-ಒಂದು ಮತ ನೀತಿ ಜಾರಿಯಲ್ಲಿದೆ. ಯಾವುದೇ ವ್ಯಕ್ತಿ ಚುನಾವಣೆಯೊಂದರಲ್ಲಿ 2 ಬಾರಿ ಮತ ಚಲಾಯಿಸಿದ ದಾಖಲೆಯಿದ್ದರೆ, ಅದನ್ನು ಲಿಖಿತ ಅಫಿಡವಿಟ್ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕು. ಅದರ ಹೊರತಾಗಿ ಆಧಾರರಹಿತವಾಗಿ ಮತಗಳ್ಳತನದಂತಹ ಕೊಳಕು ಪದಪ್ರಯೋಗ ಮಾಡಬಾರದು’ ಎಂದು ಆಗ್ರಹಿಸಿದೆ.
ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಸೇರಿ ದೇಶದ ಅನೇಕ ರಾಜ್ಯಗಳಲ್ಲಿ ಮತಗಳ್ಳತನ ನಡೆದಿದೆ. ಇದರಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 48 ಕ್ಷೇತ್ರಗಳಲ್ಲಿ ಸೋತಿದೆ ಎಂಬದು ರಾಹುಲ್ ಆರೋಪ.
ಒಂದು ನಿಮಿಷದ ವಿಡಿಯೋ ಬಿಡುಗಡೆ
ನವದೆಹಲಿ: ‘ಮತಗಳ್ಳತನ’ದ ಆರೋಪ ಮುಂದಿಟ್ಟುಕೊಂಡು ಚುನಾವಣಾ ಆಯೋಗ, ಬಿಜೆಪಿ ವಿರುದ್ಧದ ದೇಶವ್ಯಾಪಿ ಅಭಿಯಾನಕ್ಕೆ ಕಾಂಗ್ರೆಸ್ ಬುಧವಾರ ಚಾಲನೆ ನೀಡಿದೆ. ಇದರ ಭಾಗವಾಗಿ ಯಾವ ರೀತಿ ನಕಲಿ ಮತದಾನ ನಡೆಯತ್ತದೆಂಬ ವಿವರಣೆಯಿರುವ ಸುಮಾರು ಒಂದು ನಿಮಿಷದ ವಿಡಿಯೋವೊಂದನ್ನೂ ಪಕ್ಷ ಬಿಡುಗಡೆ ಮಾಡಿದೆ.
ವಿಡಿಯೋದಲ್ಲೇನಿದೆ?
ದಂಪತಿಗಳು ಮತಕೇಂದ್ರವೊಂದಕ್ಕೆ ಪ್ರವೇಶಿಸುವಾಗ ಕೇಸರಿ ಶಾಲು ಹಾಕಿದ ವ್ಯಕ್ತಿಗಳಿಬ್ಬರು ಅವರನ್ನು ತಡೆಯುತ್ತಾರೆ.
ನಿಮ್ಮ ಮತಗಳನ್ನು ಈಗಾಗಲೇ ನಾವು ಚಲಾಯಿಸಿದ್ದೇವೆ, ನೀವು ವಾಪಸ್ ಹೋಗಿ ಎನ್ನುವ ಸೂಚನೆ ನೀಡುತ್ತಾರೆ. ಬಳಿಕ ಆ ಇಬ್ಬರು ವ್ಯಕ್ತಿಗಳು ‘ಮತಕಳ್ಳತನ ಆಯೋಗ’ದ ಬೋರ್ಡ್ ಇರುವ ಟೇಬಲ್ನಲ್ಲಿ ಕೂತಿರುವ ಅಧಿಕಾರಿಗೆ ಗೆಲುವಿನ ಸನ್ನೆ ತೋರಿಸುತ್ತಾರೆ.
ಯಾರೋ ನಿಮ್ಮ ಮತವನ್ನು ಕಿತ್ತುಕೊಳ್ಳಲು ಬಿಡಬೇಡಿ. ಈ ಬಾರಿ ಪ್ರಶ್ನೆ ಮಾಡಿ , ಉತ್ತರಕ್ಕಾಗಿ ಆಗ್ರಹಿಸಿ. ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ