
ತಿರುವನಂತಪುರ: ಸಮುದ್ರದಲ್ಲಿ ತೇಲಿಬಂದ ಸುಮಾರು 150 ಚೀಲಗಳನ್ನು ಮೀನುಗಾರರು ದಡಕ್ಕೆ ತೆಗೆದುಕೊಂಡು ಬಂದಿದ್ದಾರೆ. ನಂತರ ಈ ಚೀಲಗಳಿಗಾಗಿ ಕಡಲತೀರದಲ್ಲಿ ದೊಡ್ಡ ಹೈಡ್ರಾಮಾವೇ ಸೃಷ್ಟಿಯಾಗಿದೆ. ಈ ಸಂಬಂಧ ವಿಝಿಂಜಂನಲ್ಲಿ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಸಮುದ್ರದಲ್ಲಿ ತೇಲಿಬಂದ 150 ಚೀಲಗಳಲ್ಲಿರೋ ವಸ್ತು ಏನು? ಈ ಚೀಲಗಳಿಗಾಗಿ ಪ್ರತಿಭಟನೆ ನಡೆದಿದ್ಯಾಕೆ ಎಂಬುದನ್ನು ನೋಡೋಣ ಬನ್ನಿ.
ಕೇರಳದ ವಿಝಿಂಜಂನ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಾಗ ಪಾಲಿಪ್ರೊಪಿಲೀನ್ ತುಂಬಿರುವ ಚೀಲಗಳು ಕಾಣಿಸಿವೆ. ಮೀನುಗಾರಿಕೆಯನ್ನು ಬಿಟ್ಟು ಸುಮಾರು 150 ಚೀಲಗಳನ್ನು ದಡಕ್ಕೆ ತೆಗೆದುಕೊಂಡು ಬಂದಿದ್ದಾರೆ. ಒಂದೊಂದು ಚೀಲ 25 ಕೆಜಿ ತೂಕವನ್ನು ಹೊಂದಿವೆ.
ಸುಮಾರು ಒಂದು ವರ್ಷದ ಹಿಂದೆ ಕೊಚ್ಚಿ-ಆಲಪ್ಪುಳ ಕಡಲಿನಲ್ಲಿ 'MSC ಎಲ್ಸಾ 3' ಹೆಸರಿನ ಸರಕು ಹಡಗು ಮುಳುಗಡೆಯಾಗಿತ್ತು. ಈ ಶಿಪ್ನಿಂದ ಬಿದ್ದಿದ್ದ ಕಂಟೈನರ್ಗಳು ಸಮುದ್ರದಲ್ಲಿ ತೇಲಾಡುತ್ತಿದ್ದವು. ಈಗ ಆ ಕಂಟೈನರ್ಗಳು ತುಕ್ಕು ಹಿಡಿದು ಒಡೆದು, ಒಳಗಿದ್ದ ಚೀಲಗಳು ನೀರಿನ ಮೇಲೆ ತೇಲಾಡುತ್ತಾ ಬಂದಿವೆ ಎಂದು ಹೇಳಲಾಗುತ್ತಿದೆ. ಈ ಚೀಲಗಳಲ್ಲಿ ಯುಎಇಯಲ್ಲಿ ತಯಾರಾದ ಪಾಲಿಪ್ರೊಪಿಲೀನ್ ಇದೆ. ಪ್ರತಿ ಚೀಲ 25 ಕೆಜಿ ತೂಕವಿದ್ದು, ಮೇಲೆ ಅರೇಬಿಕ್ ಮತ್ತು ಇಂಗ್ಲಿಷ್ನಲ್ಲಿ ಕೆಲವು ಮಾಹಿತಿಯನ್ನು ಬರೆಯಲಾಗಿದೆ.
ವಿಝಿಂಜಂ ತೀರದಿಂದ ಸುಮಾರು 32 ರಿಂದ 50 ನಾಟಿಕಲ್ ಮೈಲಿ ದೂರದಲ್ಲಿ ತೇಲುತ್ತಿದ್ದ ಈ ಚೀಲಗಳನ್ನು ಮೀನುಗಾರರು ತಮ್ಮ ದೋಣಿಗಳಲ್ಲಿ ದಡಕ್ಕೆ ತಂದಿದ್ದಾರೆ. ಪಾಲಿಪ್ರೊಪಿಲೀನ್ ಚೀಲಗಳು ದಡಕ್ಕೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಇವುಗಳ ಮಾಲೀಕರು ಆಗಮಿಸಿ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ತಮ್ಮ ವಾಹನಗಳಲ್ಲಿ ಚೀಲಗಳನ್ನು ತುಂಬಿಸುವ ಸಂದರ್ಭದಲ್ಲಿ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದ್ದಾರೆ. ವಾಹನಗಳಲ್ಲಿರಿಸಲಾಗಿದ್ದ, ಚೀಲಗಳನ್ನು ಕೆಳಗೆ ಇಳಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಮೀನುಗಾರಿಕೆಯನ್ನು ಬಿಟ್ಟು 32 ರಿಂದ 50 ನಾಟಿಕಲ್ ಮೈಲಿ ದೂರದಿಂದ ಈ ಚೀಲಗಳನ್ನು ತೆಗೆದುಕೊಂಡು ಬಂದಿದ್ದೇವೆ. ಇದಕ್ಕೆ ನಮಗೆ ಕೂಲಿಯನ್ನು ನೀಡಿ ಚೀಲಗಳನ್ನು ತೆಗೆದುಕೊಂಡು ಹೋಗಲಿ ಎಂಬುವುದು ಮೀನುಗಾರರ ಆಗ್ರಹವಾಗಿದೆ. ಮೀನುಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗುತ್ತದೆ. ಈ ಹಿಂದೆ ದಡಕ್ಕೆ ಬಂದು ಬಿದ್ದಿದ್ದ ಪ್ಲಾಸ್ಟಿಕ್ ಹರಳುಗಳನ್ನು ಜರಡಿ ಹಿಡಿದು ತೆಗೆಯಲು ಕಂಪನಿಯವರು ಸಂಬಳ ಕೊಟ್ಟು ಜನರನ್ನು ನೇಮಿಸಿದ್ದರು. ಹಾಗಾಗಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಸಹ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ ತೀರ್ಪು, ದೂರವಾದ ಮುದ್ದು ಮಗಳು; ತೀವ್ರ ಆಘಾತದಿಂದ ಪ್ರಾಣ ಕಳೆದುಕೊಂಡ ತಂದೆ
ದಡದಿಂದ ಪ್ಲಾಸ್ಟಿಕ್ ಹರಳುಗಳನ್ನು ಸಂಗ್ರಹಿಸಲು ನೇಮಕಗೊಂಡಿದ್ದ ಕಂಪನಿಯ ಗುತ್ತಿಗೆ ಕಳೆದ ಮಾರ್ಚ್ನಲ್ಲೇ ಮುಗಿದಿದೆ. ಹೀಗಾಗಿ, ನಷ್ಟಪರಿಹಾರ ನೀಡಲೇಬೇಕು ಎಂದು ಮೀನುಗಾರರು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ನಡೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿಝಿಂಜಂ ಕರಾವಳಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಟ್ಟೆ ಬಿಚ್ಚಿ, ಇಲ್ಲಾಂದ್ರೆ 500 ರೂ. ಕೊಡಿ: ಶಿಕ್ಷಕಿಯ ನೀಚತನಕ್ಕೆ ವಿದ್ಯಾರ್ಥಿನಿಯರ ಕಣ್ಣೀರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ