Gyanvapi case: ಶಿವಲಿಂಗ ಆರಾಧನೆ ಕೋರಿ ಸಲ್ಲಿಸಿರುವ ತೀರ್ಪು ನ.14ಕ್ಕೆ ಮುಂದೂಡಿಕೆ

By Santosh NaikFirst Published Nov 8, 2022, 9:12 PM IST
Highlights

ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮಹೇಂದ್ರ ಪಾಂಡೆ ಅವರು ರಜೆಯಲ್ಲಿರುವುದರಿಂದ, ನ್ಯಾಯಾಲಯವು ನವೆಂಬರ್ 14 ಕ್ಕೆ ಪ್ರಕರಣವನ್ನು ಮುಂದೂಡಿದೆ ಎಂದು ಸಹಾಯಕ ಜಿಲ್ಲಾ ಸರ್ಕಾರಿ ವಕೀಲ ಸುಲಭ್ ಪ್ರಕಾಶ್ ತಿಳಿಸಿದ್ದಾರೆ.
 

ವಾರಾಣಾಸಿ (ನ.8): ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿರುವ ಶಿವಲಿಂಗದ ಪೂಜೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ತ್ವರಿತ ನ್ಯಾಯಾಲಯ ಮಂಗಳವಾರ, ನವೆಂಬರ್ 14ಕ್ಕೆ ಮುಂದೂಡಿದೆ. ತ್ವರಿತ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶ ಮಹೇಂದ್ರ ಪಾಂಡೆ ಅವರು ಸದ್ಯ ರಜೆಯಲ್ಲಿದ್ದಾರೆ. ಆ ಕಾರಣದಿಂದಾಗಿ ಪ್ರಕರಣದ ತೀರ್ಪನ್ನು ನವೆಂಬರ್‌ 14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಸಹಾಯಕ ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಅಕ್ಟೋಬರ್ 27 ರಂದು ದಾವೆಯ ಮೇಲಿನ ತನ್ನ ಆದೇಶವನ್ನು ನವೆಂಬರ್ 8 ಕ್ಕೆ ಕಾಯ್ದಿರಿಸಿತ್ತು. ಮೇ 24 ರಂದು, ವಿಶ್ವ ವೈದಿಕ ಸನಾತನ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಅರ್ಜಿದಾರ ಕಿರಣ್ ಸಿಂಗ್ ಅವರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತಾಗಿ ಕೇಸ್‌ ದಾಖಲಿಸಿದ್ದರು. ಜ್ಞಾನವಾಪಿ ಸಂಕೀರ್ಣಕ್ಕೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಿ, ಸಂಕೀರ್ಣವನ್ನು ಸನಾತನ ಸಂಘಕ್ಕೆ ಹಸ್ತಾಂತರಿಸುವಂತೆ ಮತ್ತು "ಶಿವಲಿಂಗ" ದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವಂತೆ ಅವರು ಮನವಿ ಮಾಡಿದ್ದರು. ಮೇ 25 ರಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಮೊಕದ್ದಮೆಯನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶ ನೀಡಿದ್ದರು.

ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಕಮಿಷನರ್, ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂತೇಜಾಮಿಯಾ ಸಮಿತಿ ಮತ್ತು ವಿಶ್ವನಾಥ ದೇವಸ್ಥಾನ ಟ್ರಸ್ಟ್ ಅನ್ನು ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಏಪ್ರಿಲ್ 26 ರಂದು, ಮಸೀದಿಯ ಹೊರ ಗೋಡೆಗಳ ಮೇಲೆ ಪ್ರತಿದಿನ ಹಿಂದೂ ದೇವತೆಗಳ ವಿಗ್ರಹಗಳನ್ನು ಪೂಜಿಸಲು ಅನುಮತಿ ಕೋರಿ ಮಹಿಳೆಯರ ಗುಂಪಿನ ಮನವಿಯನ್ನು ಆಲಿಸುತ್ತಿದ್ದ ಕೆಳ ನ್ಯಾಯಾಲಯವು (ಸಿವಿಲ್ ನ್ಯಾಯಾಧೀಶರು-ಹಿರಿಯ ವಿಭಾಗ) ಜ್ಞಾನವಾಪಿ ಸಂಕೀರ್ಣದ ವೀಡಿಯೊಗ್ರಾಫಿಕ್ ಸಮೀಕ್ಷೆ ಮತ್ತು ಆದೇಶವನ್ನು ನೀಡಿತ್ತು. ಈ ಸಮಯದಲ್ಲಿ ಜ್ಞಾನವಾಪಿಯ ಸಂಕೀರ್ಣದ ಒಳಗೆ  "ಶಿವಲಿಂಗ" ಕಂಡುಬಂದಿದೆ ಎಂದು ಹಿಂದೂ ಕಡೆಯವರು ವಾದ ಮಾಡಿದ್ದರು. 

ಆದರೆ, ಸಮೀಕ್ಷೆಯಲ್ಲಿ ಕಂಡುಬಂದಿರುವ ಪ್ರದೇಶವು "ವಜೂಖಾನಾ" ಹಾಗೂ ಶಿವಲಿಂಗದ ರೀತಿಯಲ್ಲಿ ಕಂಡುಬಂದಿರುವ ಕಲ್ಲು ಕಾರಂಜಿ ಎಂದು ಮುಸ್ಲಿಂ ಕಡೆಯವರು ವಾದ ಮಾಡಿದ್ದರು. ವಜುಖಾನಾದಲ್ಲಿ ಮುಸ್ಲಿಮರು ನಮಾಜ್‌ ಸಲ್ಲಿಸುವ ಮೊದಲು ತಮ್ಮ ಕಾಲುಗಳನ್ನುಈ ವಜುಖಾನಾದಲ್ಲಿ ತೊಳೆದುಕೊಳ್ಳುತ್ತಾರೆ.

Gyanvapi Case: ಹಿಂದುಗಳಿಗೆ ಹಿನ್ನಡೆ, ಶಿವಲಿಂಗದ ಕಾರ್ಬನ್‌ ಡೇಟಿಂಗ್‌ಗೆ ಕೋರ್ಟ್‌ ನಕಾರ

ಮೇ 20 ರಂದು ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ (ಹಿರಿಯ ವಿಭಾಗ) ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು, ಸಮಸ್ಯೆಯ "ಸಂಕೀರ್ಣತೆ" ಮತ್ತು "ಸೂಕ್ಷ್ಮತೆ" ಯನ್ನು ನೋಡಿ, 25-30 ವರ್ಷದ ಅನುಭವವಿರುವ ಹಿರಿಯ ನ್ಯಾಯಾಂಗ ಅಧಿಕಾರಿಯೊಬ್ಬರು ಇದರ ವಿಚಾರಣೆ ಮಾಡಿದರೆ ಒಳ್ಳೆಯದು ಎಂದು ಹೇಳಿತ್ತು. ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಜ್ಞಾನವಾಪಿ ಆವರಣದಲ್ಲಿ ಮುಚ್ಚಿದ  ಸ್ಥಳಗಳ ಸಮೀಕ್ಷೆಗೆ ಒತ್ತಾಯಿಸಿ ಮತ್ತೊಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ನವೆಂಬರ್ 11 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.

Gyanvapi Case: ಶಿವಲಿಂಗದ ಕಾರ್ಬನ್‌ ಡೇಟಿಂಗ್ ತೀರ್ಪು, ಅ. 11ಕ್ಕೆ ಮುಂದೂಡಿದ ಕೋರ್ಟ್‌

ಇನ್ನೊಂದೆಡೆ ನವೆಂಬರ್ 10 ರಂದು "ಶಿವಲಿಂಗ" ರಕ್ಷಣೆಗೆ ಸಂಬಂಧಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಸಮೀಕ್ಷೆಯಲ್ಲಿ ತಿಳಿಸಿರುವ ಶಿವಲಿಂಗದ ಪ್ರದೇಶವನ್ನು ಸಂರಕ್ಷಣೆ ಮಾಡಿಡಬೇಕು ಎಂದು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಐವರು ಹಿಂದೂ ಮಹಿಳೆಯರನ್ನು ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್ ಅವರು ನವೆಂಬರ್ 12 ರೊಳಗೆ ರಕ್ಷಣೆಯ ಅವಧಿ ಮುಗಿಯುವ ಮೊದಲು ವಿಷಯವನ್ನು ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

click me!