ಪ್ರತಿಭಟನೆ ವೇಳೆ ಕಲ್ಲು ತೂರಿದರೆ 10 ವರ್ಷ ಜೈಲು ಶಿಕ್ಷೆ!

By Web DeskFirst Published Nov 16, 2019, 11:43 AM IST
Highlights

ಕೇರಳದಲ್ಲಿ ಪ್ರತಿಭಟನೆ ವೇಳೆ ಕಲ್ಲು ತೂರಿದರೆ ಜೈಲು ಶಿಕ್ಷೆ| ಆಸ್ತಿಗೆ ಹಾನಿ ಮಾಡಿದರೆ ಪರಿಹಾರ ಕಟ್ಟಬೇಕು| ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ತಿರುವನಂತಪುರಂ[ನ.16]: ಪ್ರತಿಭಟನೆಗಳ ತವರು ಎಂಬ ಕುಖ್ಯಾತಿ ಹೊಂದಿರುವ ಕೇರಳದಲ್ಲಿ ಸದಾ ಒಂದಲ್ಲಾ ಒಂದು ಪ್ರತಿಭಟನೆ ನಡೆದೇ ಇರುತ್ತದೆ. ಇಂಥ ಮುಷ್ಕರ ಅಥವಾ ಪ್ರತಿಭಟನೆ ವೇಳೆ ಬಸ್‌ಗೆ ಕಲ್ಲು ತೂರುವುದು, ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವುದು ಸಾಮಾನ್ಯ. ಆದರೆ, ಕೇರಳ ಸರ್ಕಾರ ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ಮುಂದಾಗಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆ ಅನ್ವಯ, ಒಂದು ವೇಳೆ ಯಾರಾದರೂ ಮುಷ್ಕರ ಅಥವಾ ಪ್ರತಿಭಟನೆಯ ವೇಳೆ ಖಾಸಗಿ ಆಸ್ತಿಗಳಿಗೆ ಹಾನಿ ಉಂಟು ಮಾಡಿದ್ದು ಸಾಬೀತಾದರೆ ಪರಿಹಾರ ಮೊತ್ತವನ್ನು ಅವರೇ ತುಂಬಿಕೊಡಬೇಕು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಬಹುದಾಗಿದ್ದು, 10 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ.

ಬೆಂಕಿ ಹಚ್ಚಿ ಹಿಂಸೆ ಮತ್ತು ಸ್ಫೋಟಕಗಳನ್ನು ಬಳಸಿದ್ದಕ್ಕೆ ಕನಿಷ್ಠ ಜೈಲು ಶಿಕ್ಷೆಯ ಅವಧಿಯನ್ನು 5 ವರ್ಷದಿಂದ ಒಂದು ವರ್ಷಕ್ಕೆ ಇಳಿಸಿದ ಬಳಿಕ ಮಸೂದೆಗೆ ಅನುಮೋದನೆ ನೀಡಲಾಗಿದೆ.

ಕೇರಳದಲ್ಲಿ ಪ್ರತಿ ನಾಲ್ಕು ದಿನಗಳಿಗೆ ಒಮ್ಮೆ ಮುಷ್ಕರಕ್ಕೆ ಕರೆ ನೀಡಲಾಗುತ್ತದೆ. ಪ್ರತಿ ಬಾರಿಯೂ ಪ್ರತಿಭಟನೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 200 ಕೋಟಿ ರು.ನಷ್ಟುನಷ್ಟಉಂಟಾಗುತ್ತಿದೆ. 2005ರಿಂದ 2012ರ ಅವಧಿಯಲ್ಲಿ 363 ಮುಷ್ಕರಗಳು ನಡೆದಿವೆ. 2018ರಲ್ಲಿ 97 ಮುಷ್ಕರಗಳು ನಡೆದಿವೆ. ಪದೇ ಪದೆ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಪ್ರವಾಸೋದ್ಯಮಕ್ಕೆ 29,000 ಕೋಟಿ ರು. ನಷ್ಟುಉಂಟಾಗಿದೆ ಎಂದು ಅಂದಾಜಿಸಲಾಗಿದೆ.

click me!