
ವಿದೇಶಾಂಗ ವ್ಯವಹಾರಗಳ ಸಚಿವ (Foreign Affairs Minister) ಎಸ್. ಜೈಶಂಕರ್ ಅಮೆರಿಕ ಪ್ರವಾಸದಲ್ಲಿದ್ದು, ವಿಶ್ವಸಂಸ್ಥೆಯಲ್ಲಿ (United Nations) ತಮ್ಮ ಭಾಷಣದ (Speech) ಮೂಲಕ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಅಲ್ಲದೆ, ಅಮೆರಿಕದ ಉನ್ನತ ಅಧಿಕಾರಿಗಳಿಂದ ಜೈಶಂಕರ್ ಅವರಿಗೆ ಹಾರ್ದಿಕ ಸ್ವಾಗತವೂ (Welcome) ದೊರೆಯುತ್ತಿದೆ. ಈ ನಡುವೆ ಅಮೆರಿಕ ಸರ್ಕಾರ ಪಾಕಿಸ್ತಾನಿ ಪ್ರತಿನಿಧಿಗಳಿಗಿಂತ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡುತ್ತಿದ್ದಾರೆ ಎಂದು ಪಾಕ್ ಮೂಲದ ಪತ್ರಕರ್ತರೊಬ್ಬರು ಮಂಗಳವಾರ ಸೆಪ್ಟೆಂಬರ್ 27 ರಂದು ಟ್ವಿಟ್ಟರ್ನಲ್ಲಿ (Twitter) ಬರೆದುಕೊಂಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ, ಅವರು ಆ ಟ್ವೀಟ್ ಅನ್ನು ಡಿಲೀಟ್ ಮಾಡಿದರೂ, ಅದು ವೈರಲ್ ಆಗುತ್ತಿದೆ.
ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಸೇರಿದಂತೆ ಪಾಕಿಸ್ತಾನಿ ಪ್ರತಿನಿಧಿಗಳಿಗೆ (Delegates) ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಸರಿಯಾಗಿ ಉಪಚಾರ ಮಾಡಿಲ್ಲ. ಆದರೆ, ಬಳಿಕ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಭೋಜನ ಕೂಟ ಆಯೋಜನೆಯಾಗಿದೆ ಎಂದು ಪಾಕ್ ಮೂಲದ ಪತ್ರಕರ್ತ ತಾಹಾ ಸಿದ್ದಿಕಿ ಟ್ವೀಟ್ ಮಾಡಿ, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.
ಪಾಕಿಸ್ತಾನಿ ಪತ್ರಕರ್ತ ತಾಹಾ ಸಿದ್ದಿಕಿ ಅವರು ಭಾರತದ ವಿದೇಶಾಂಗ ಸಚಿವರಿಗೆ ನೀಡಿದ ಭವ್ಯವಾದ ಉಪಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನಲ್ಲಿ ಅಮೆರಿಕದ ವಿದೇಶಾಂಗ ಪ್ರತಿನಿಧಿಗಳನ್ನು ಭೇಟಿಯಾದಾಗ ಪಾಕಿಸ್ತಾನಿ ಪ್ರತಿನಿಧಿಗಳಿಗೆ ಕಾಫಿ, ಕುಕ್ಕೀಸ್ ಮತ್ತು ನೀರನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿಗಿನ ಸಭೆಯ ನಂತರ, ಕಾರ್ಯದರ್ಶಿ ಬ್ಲಿಂಕನ್ ಡಾ.ಎಸ್.ಜೈಶಂಕರ್ ಅವರಿಗೆ ಭೋಜನವನ್ನು ಆಯೋಜಿಸುತ್ತಿದ್ದರು’’ ಎಂದು ತಾಹಾ ಸಿದ್ದಿಕಿ ಟ್ವೀಟ್ ಮಾಡಿದ್ದಾರೆ. ಸೋಮವಾರ (ಸೆಪ್ಟೆಂಬರ್ 26), ಆಂಟೋನಿ ಬ್ಲಿಂಕೆನ್ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದರು ಮತ್ತು ನಗದು ಕೊರತೆಯಿಂದ ಬಳಲುತ್ತಿರುವ ರಾಷ್ಟ್ರಕ್ಕೆ 56.5 ಮಿಲಿಯನ್ ಡಾಲರ್ ವಿದೇಶಿ ನೆರವಿನೊಂದಿಗೆ ಸಹಾಯ ಮಾಡಲು ಪ್ರತಿಜ್ಞೆ ಮಾಡಿದರು.
ಇದರ ನಂತರ ನ್ಯಾಷನಲ್ ಮ್ಯೂಸಿಯಂ ಆಫ್ ಅಮೆರಿಕನ್ ಡಿಪ್ಲೊಮಸಿ (NMAD) ನಲ್ಲಿ ನಡೆದ ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಆಂಟೋನಿ ಬ್ಲಿಂಕೆನ್ 75 ವರ್ಷಗಳ ಯುಎಸ್-ಪಾಕ್ ಸಂಬಂಧ ಮತ್ತು ಪ್ರವಾಹ ಪರಿಹಾರ ಪ್ರಯತ್ನಗಳ ಬಗ್ಗೆ ಮಾತನಾಡಿದರು. ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸಿರುವ ಪಾಕಿಸ್ತಾನ, ದೇಶದ ಆಹಾರ ಭದ್ರತೆಗಾಗಿ ಅಮೆರಿಕದಿಂದ ಹೆಚ್ಚುವರಿಯಾಗಿ 10 ಮಿಲಿಯನ್ ಡಾಲರ್ಗಳನ್ನು ಪಡೆದುಕೊಂಡಿದೆ.
ಎರಡು ಅಧಿವೇಶನಗಳಲ್ಲಿಯೂ ಪಾಕಿಸ್ತಾನಿ ಪ್ರತಿನಿಧಿಗಳಿಗೆ ಕಾಫಿ, ಕುಕ್ಕೀಸ್ ಮತ್ತು ನೀರನ್ನು ಮಾತ್ರ ನೀಡಲಾಯಿತು ಎಂದು ಪತ್ರಕರ್ತ ತಾಹಾ ಸಿದ್ದಿಕಿ ಟ್ವೀಟ್ ಮಾಡಿದ್ದಾರೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವೇಳಾಪಟ್ಟಿಯ ಪ್ರಕಾರ, ಸೋಮವಾರ (ಸೆಪ್ಟೆಂಬರ್ 26) ರಂದು ವರ್ಜೀನಿಯಾದ ಮೆಕ್ಲೀನ್ನಲ್ಲಿ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರಿಗೆ ಭೋಜನ ಕೂಟ ಆಯೋಜನೆಯಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ತಿಳಿದುಬಂದಿದೆ.
ಇದಕ್ಕೂ ಮೊದಲು, ಪೆಂಟಗನ್ನಲ್ಲಿ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ III ಅವರು ಡಾ. ಎಸ್. ಜೈಶಂಕರ್ ಅವರನ್ನು ಗೌರವಾನ್ವಿತ ಕಾರ್ಡನ್ನೊಂದಿಗೆ ಸ್ವಾಗತಿಸಿದರು. ಇನ್ನು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯೋಜಿಸಿದ್ದ ಔತಣಕೂಟಕ್ಕೂ ಮುನ್ನ ನಡೆದ ಅಮೆರಿಕದ ರಕ್ಷಣಾ ಕಾರ್ಯದರ್ಶಿಯೊಂದಿಗಿನ ಭೇಟಿಯ ವಿವರಗಳನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವರು ಹಂಚಿಕೊಂಡಿದ್ದಾರೆ.
ಈ ಮಧ್ಯೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವೇಳಾಪಟ್ಟಿಯ ಪ್ರಕಾರ, ಆಂಟೋನಿ ಬ್ಲಿಂಕೆನ್ ಮಂಗಳವಾರ (ಸೆಪ್ಟೆಂಬರ್ 27) ಬೆಳಗ್ಗೆ (ಅಮೆರಿಕ ಕಾಲಮಾನ ಪ್ರಕಾರ) ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿದ್ದು ಮತ್ತು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ