ಬುಲ್ಡೋಜರ್ ಹಾಗೂ ಮಾಫಿಯಾ ಕಾರಣಕ್ಕಾಗಿ ಮಾತ್ರವೇ ಸುದ್ದಿಯಾಗುತ್ತಿದ್ದ ಉತ್ತರ ಪ್ರದೇಶ ಪೊಲೀಸರು, ತಾವು ನಿಜವಾಗಿಯೂ ಜನ ರಕ್ಷಕರು ಅನ್ನೋದನ್ನನ ಇತ್ತೀಚೆಗೆ ತಮ್ಮ ಕೆಲಸದ ಮೂಲಕ ಸಾಕ್ಷೀಕರಿಸಿದ್ದಾರೆ.
ಲಕ್ನೋ (ಮಾ.22): ನೀವೇ ಯೋಚಿಸಿನೋಡಿ ಅಥವಾ ಪ್ರಯತ್ನ ಮಾಡಿ ನೋಡಿ. 'ನನ್ ಹೆಂಡ್ತಿಗೆ ಸೊಳ್ಳೆ ಕಚ್ತಿದೆ..' ಎಂದು ಟ್ವೀಟ್ ಮಾಡಿದರೆ, ಪೊಲೀಸರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಲ್ಲದೆ, ಸೊಳ್ಳೆಬತ್ತಿಯನ್ನೂ ಕೊಟ್ಟು ಹೋಗಬಹುದು ಎಂದಾದರೂ ನೀವು ಯೋಚನೆ ಮಾಡಿದ್ದೀರಾ? ಆದರೆ, ಉತ್ತರ ಪ್ರದೇಶದಲ್ಲಿ ಹಾಗಾಗಿದೆ. ತಾವು ಜನರಕ್ಷಕರು ಅನ್ನೋದನ್ನು ಉತ್ತರ ಪ್ರದೇಶ ಪೊಲೀಸರು ಸಾಬೀತು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಹೆಂಡತಿ ಮಗುವಿಗೆ ಜನ್ಮ ನೀಡಿದ್ದಾಳೆ. ಒಂದೆಡೆ ಮಗುವನ್ನ ಹೆತ್ತ ನೋವು ಇನ್ನೊಂದೆಡೆ ಆಸ್ಪತ್ರೆಯಲ್ಲಿ ಸೊಳ್ಳೆಗಳ ಕಾಟ. ಆಕೆಯ ಪಕ್ಕದಲ್ಲಿಯೇ ಕುಳಿತಿದ್ದ ಗಂಡನಿಗೆ ಯಾರನ್ನು ಕೇಳೋದು ಅಂತಾನೆ ಗೊತ್ತಾಗಿಲ್ಲ. ಕೈಲಿದ್ದ ಮೊಬೈಲ್ ತೆಗೆದು, 'ಅಯ್ಯೋ... ನನ್ನ ಹೆಂಡತಿಗೆ ಸೊಳ್ಳೆ ಕಚ್ಚುತ್ತಿದೆ' ಎಂದು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುತ್ತಾನೆ. ಅಚ್ಚರಿ ಎನ್ನುವಂತೆ ಆತ ಮಾಡಿದ್ದ ಟ್ವೀಟ್ಗೆ ರೀಪ್ಲೈ ಕೂಡ ಬರುತ್ತದೆ. ಅಷ್ಟು ಮಾತ್ರವಲ್ಲದೆ, ಕೆಲವೇ ಹೊತ್ತಿನಲ್ಲಿ ಆಸ್ಪತ್ರೆಗೆ ಬರುವ ಯುಪಿ ಪೊಲೀಸರು, ಆತನಿಗೆ ಮಾರ್ಟಿನ್ ಸೊಳ್ಳೆ ಬತ್ತಿಯನ್ನು ನೀಡಿ ಹೋಗುತ್ತಾರೆ. ಹೋಗುವ ಮುನ್ನ ಒಂದು ಫೋಟೋವನ್ನು ತೆಗೆದುಕೊಂಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಯುಪಿ ಪೊಲೀಸ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದೆ.
ಉತ್ತರಪ್ರದೇಶದ ಸಂಭಲ್ನ ರಾಜ್ಮೊಹಲ್ಲಾದ ನಿವಾಸಿಯಾಗಿರುವ ಅಸಾದ್ ಖಾನ್ ಎನ್ನುವವನ ಪತ್ನಿ ಹೆರಿಗೆ ನೋವಿನಿಂದ ಚಂದೌಸಿಯಲ್ಲಿರುವ ಹರಿಪ್ರಕಾಶದ್ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದರು. ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಂದಡೆ ಮಗು ಹೆತ್ತ ನೋವಿನಲ್ಲಿದ್ದ ಆಕೆ, ಇನ್ನೊಂದೆಡೆ ನರ್ಸಿಂಗ್ ಹೋಮ್ನಲ್ಲಿದ್ದ ಸೊಳ್ಳೆಯ ಕಾಟದಿಂದ ಕಂಗಾಲಾಗಿದ್ದರು. ಸೊಳ್ಳೆಗಳು ಸಿಕ್ಕಾಪಟ್ಟೆ ಇದ್ದ ಕಾರಣದಿಂದಾಗಿ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೆರಿಗೆಯ ಬಳಿಕ ಆಕೆಯನ್ನು ಹಾಕಿದ್ದ ಐಸಿಯು ವಾರ್ಡ್ನಲ್ಲಿಯೂ ಸೊಳ್ಳೆಗಳು ವಿಪರೀತ ಕಾಟ ನೀಡುತ್ತಿದ್ದವು. ಈ ವೇಳೆ ಆಕೆಯ ಪಕ್ಕ ಕುಳಿತಿದ್ದ ಪತಿ ಅಸಾದ್ ಖಾನ್, 'ನನ್ನ ಪತ್ನಿ ಚಂದೌಸಿಯಲ್ಲಿರುವ ಹರಿ ಪ್ರಕಾಶ್ ನರ್ಸಿಂಗ್ ಹೋಮ್ನಲ್ಲಿ ಚಂದನೆಯ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಈಗಾಗಲೇ ಆಕೆ ಮಗುವನ್ನು ಹೆತ್ತ ನೋವಿನಲ್ಲಿದ್ದಾಳೆ. ಅದರ ನಡುವೆ ವಿಪರೀತ ಎನ್ನುವಂತಿರುವ ಸೊಳ್ಳೆಗಳು ಆಕೆಯನ್ನು ಕಚ್ಚುತ್ತಿದೆ. ನನಗೆ ಆದಷ್ಟು ಬೇಗ ನೀವು ಒಂದು ಮಾರ್ಟಿನ್ ಕಾಯಿಲ್ (ಸೊಳ್ಳೆ ಬತ್ತಿ) ತಂದುಕೊಡಿ' ಎಂದು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ. ಉತ್ತರ ಪ್ರದೇಶ ಮಾತ್ರವಲ್ಲದೆ ಸ್ಥಳೀಯ ಸಂಭಾಲ್ ನಗರದ ಪೊಲೀಸರನ್ನು ಟ್ಯಾಗ್ ಮಾಡಿದ್ದರು.
ಅಸಾದ್ ಖಾನ್ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಉತ್ತರ ಪ್ರದೇಶದ ಸಂಭಾಲ್ ನಗರದ ಪೊಲೀಸರು ಆಸ್ಪತ್ರೆಗೆ ಹೋಗಿದ್ದಾರೆ. ಸ್ವತಃ ಉತ್ತರ ಪ್ರದೇಶದ ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆ ಬಂದ ಹಿನ್ನಲೆಯಲ್ಲಿ ಕೆಲವೇ ನಿಮಿಷದಲ್ಲಿ ಸೊಳ್ಳೆಬತ್ತಿಯನ್ನು ಹಿಡಿದುಕೊಂಡು ಆಸ್ಪತ್ರೆಯ ಬಳಿ ಬಂದಿದ್ದರು. ಅಸಾದ್ ಖಾನ್ಗೆ ಸೊಳ್ಳೆಬತ್ತಿ ನೀಡಿದ್ದಲ್ಲದೆ, ಆತನೊಂದಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಬಳಿಕ ಅಸಾದ್ ಖಾನ್ ಪೊಲೀಸರಿಗೆ ಕೃತಜ್ಞತೆ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇವೆಲ್ಲವನ್ನೂ ಸ್ವತಃ ಯುಪಿ ಪೊಲೀಸ್ ಹ್ಯಾಂಡಲ್ ಪೋಸ್ಟ್ ಮಾಡಿದೆ.
‘माफिया से लेकर मच्छर तक का निदान’ -
नर्सिंग होम में अपने नवजात शिशु और प्रसूता पत्नी को मच्छरों से राहत देने के लिये एक व्यक्ति द्वारा ट्वीट कर मदद की अपील की गयी। PRV 3955 ने त्वरित कार्यवाही कर नर्सिंग होम में मॉस्किटो क्वॉइल पहुँचाया। pic.twitter.com/WTrK7o8bhY
ಮಾಜಿ ಪ್ರೇಮಿಯನ್ನು 6 ಪೀಸ್ ಮಾಡಿ ಕೊಂದ ಪಾತಕಿ: ಯುಪಿ ಪೊಲೀಸರಿಂದ ಆರೋಪಿಗೆ ಗುಂಡೇಟು..!
ಪೊಲೀಸರಿಗೆ ಥ್ಯಾಂಕ್ಸ್ ಹೇಳಿ ಅಸಾದ್ ಖಾನ್ ಟ್ವೀಟ್ ಮಾಡುವಾಗ ಮುಂಜಾನೆ 2.45 ಆಗಿತ್ತು. 'ಉತ್ತರ ಪ್ರದೇಶ ಪೊಲೀಸ್, ಸಂಭಾಲ್ ಪೊಲೀಸ್ ಹಾಗೂ 111 ಪೊಲೀಸರು ಮಾಡಿದ ಸಹಾಯಕ್ಕೆ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇವೆ. ಇದು ಮುಂಜಾನೆ 2.45. ಯುಪಿ ಪೊಲೀಸ್ ಹೊರತಾಗಿ ಯಾರೊಬ್ಬರೂ ನನಗೆ ಈ ಸಮಯದಲ್ಲಿ ಸಹಾಯ ಮಾಡಬಹುದು ಎಂದು ಅನಿಸಿರಲಿಲ್ಲ' ಎಂದು ಅಸಾದ್ ಖಾನ್ ಟ್ವೀಟ್ ಮಾಡಿದ್ದಾರೆ.
ಮೂಸಂಬಿ ಜ್ಯೂಸ್ ಅಲ್ಲ, ಕೆಟ್ಟ ಪೇಟ್ಲೆಟ್ಸ್ ನೀಡಿದ್ದರಿಂದ ಡೆಂಗ್ಯೂ ರೋಗಿ ಸಾವು!
ಇದಕ್ಕೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಪೊಲೀಸ್, ಹೆರಿಗೆಗಾಗಿ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದ ತನ್ನ ಪತ್ನಿಗೆ ಸೊಳ್ಳೆ ಕಚ್ಚುತ್ತಿದೆ ಎಂದು ಟ್ವೀಟ್ ಮಾಡಿದ್ದ. ತ್ವರಿತವಾಗಿ ಸ್ಪಂದಿಸಿದ ಪೊಲೀಸ್, ಆತ ಇದ್ದಲ್ಲಿಗೆ ತೆರಳಿ ಸೊಳ್ಳೆ ಬತ್ತಿ ನೀಡಿದೆ. ಮಾಫಿಯಾವನ್ನು ಬಗ್ಗುಬಡಿಯುವುದಿರಿಂದ ಹಿಡಿದು ಸೊಳ್ಳೆಗಳಿಂದ ಹರಿಹಾರ ನೀಡುವುವರೆಗೂ ಎಲ್ಲದಕ್ಕೂ ನಾವು ಸಿದ್ಧ ಎಂದು ಉತ್ತರ ಪ್ರದೇಶ ಪೊಲೀಸರು ಬರೆದುಕೊಂಡಿದ್ದಾರೆ. ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿರುವ ಅಸಾದ್ ಖಾನ್, ಕೆಲವೇ ಸೆಕೆಂಡ್ನಲ್ಲಿ ಉತ್ತರ ಪ್ರದೇಶ ಪೊಲೀಸರು ನನ್ನ ಮನವಿಯನ್ನು ಕೇಳಿದ್ದು ಮಾತ್ರವಲ್ಲದೆ 10-15 ನಿಮಿಷದಲ್ಲಿ ಸೊಳ್ಳೆ ಬತ್ತಿ ತಂದುಕೊಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.