'ಇನ್ನು 4 ದಿನ ಮಾತ್ರ': ಸಿಎಂ ಯೋಗಿಗೆ ಕೊಲೆ ಬೆದರಿಕೆ

By Suvarna NewsFirst Published May 4, 2021, 12:30 PM IST
Highlights

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ | ಇನ್ನು ನಿಮಗೆ ನಾಲ್ಕೇ ದಿನ ಎಂದ ಅಜ್ಞಾತ ವಾಟ್ಸಪ್ ಬೆದರಿಕೆ

ಲಕ್ನೋ(ಮೇ.04): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಬಂದಿದೆ. 'ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ' ಎಂದು ಎಚ್ಚರಿಸಿ ಕೊಲೆ ಬೆದರಿಕೆ ಮಾಡಲಾಗಿದೆ.

ಉತ್ತರ ಪ್ರದೇಶ ಪೊಲೀಸರ ವಾಟ್ಸಾಪ್ ತುರ್ತು ಡಯಲ್ ಸಂಖ್ಯೆ '112' ನಲ್ಲಿ ಬೆದರಿಕೆ ಬಂದಿದೆ. ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವ ಸಂಖ್ಯೆಯಿಂದ ಬೆದರಿಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.

ಲಸಿಕೆ ಬೆಲೆ ಬಗ್ಗೆ ಮರುಪರಿಶೀಲನೆ ನಡೆಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌!

ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಕಣ್ಗಾವಲು ತಂಡವನ್ನು ನಿಯೋಜಿಸಿದ್ದಾರೆ. ವ್ಯಕ್ತಿಯನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ. ಏಪ್ರಿಲ್ 29 ರ ಸಂಜೆ ಬೆದರಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಯುಪಿ ಸಿಎಂಗೆ ಕೊಲೆ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆದಿತ್ಯನಾಥ್‌ಗೆ ಬೆದರಿಕೆ ಕರೆಗಳು ಬಂದಿತ್ತು.

ಹದಿಹರೆಯದ ಬಾಲಕನಿಂದ ಕೊಲೆ ಬೆದರಿಕೆ:

ನವೆಂಬರ್‌ನಲ್ಲಿ 15 ವರ್ಷದ ಬಾಲಕ ಉತ್ತರ ಪ್ರದೇಶ ಪೊಲೀಸರ 112 ಸಹಾಯವಾಣಿಯಲ್ಲಿ ಸಂದೇಶ ಕಳುಹಿಸಿದ್ದ. ಪೊಲೀಸರು ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿ ಬಾಲಕನನ್ನು ಬಂಧಿಸಿ ಬಾಲಾಪರಾಧಿ ಜೈಲಿಗೆ ಕಳುಹಿಸಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಗೆ 2017 ರಲ್ಲಿ Z+, VVIP ಸಶಸ್ತ್ರ ಭದ್ರತಾ ಸುರಕ್ಷತೆ ನೀಡಲಾಗಿತ್ತು. ಅವರು ಹೋದಲ್ಲೆಲ್ಲಾ 25-28 ಸಶಸ್ತ್ರ ಕಮಾಂಡೋಗಳು ಅವರನ್ನು ಹಿಂಬಾಲಿಸುತ್ತಾರೆ. ಮುಖ್ಯಮಂತ್ರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರು ದೇಶಾದ್ಯಂತ ಸಂಚರಿಸುವಾಗ ಅವರಿಗೆ ಸಿಐಎಸ್ಎಫ್ ಕಮಾಂಡೋಗಳ ತಂಡವು ಭದ್ರತೆ ಒದಗಿಸುತ್ತದೆ. ಇದೇ ರೀತಿಯ ಕಮಾಂಡೋ ತುಕಡಿಯನ್ನು ಅವರ ಅಧಿಕೃತ ನಿವಾಸದಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

click me!