ಡಿವಿಎಸ್‌ ಸಾಧನೆ ಬಗ್ಗೆ ಮೋದಿಗೆ ಅತೃಪ್ತಿ: ನಿರೀಕ್ಷೆಯಂತೆ ಸದಾನಂದ ಗೌಡ ಔಟ್!

By Suvarna NewsFirst Published Jul 8, 2021, 8:30 AM IST
Highlights

* ನಿರೀಕ್ಷೆಯಂತೆ ಡಿವಿಎಸ್‌ ಔಟ್‌

* ಸದಾ ಸಾಧನೆ ಬಗ್ಗೆ ಮೋದಿಗೆ ಅತೃಪ್ತಿ

* ಹಂತಹಂತವಾಗಿ ಹಿಂಬಡ್ತಿ ನೀಡಿ ವಜಾ

ಬೆಂಗಳೂರು(ಜು.08): ನಿರೀಕ್ಷೆಯಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು ಸಂಪುಟದಿಂದ ನಿರ್ಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಹಿನ್ನೆಲೆಯಲ್ಲಿ ಬುಧವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಸದಾನಂದಗೌಡರು ಮೋದಿ ಸಂಪುಟದಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಸಂಪುಟ ದರ್ಜೆ ಸಚಿವರಾಗಿ ಕೆಲಸ ಮಾಡಿದರು. 2014ರಲ್ಲಿ ರೇಲ್ವೆ ಖಾತೆ ನೀಡಲಾಗಿತ್ತು. ಆದರೆ, ತಮಗೆ ನೀಡಿದ್ದ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸಲಿಲ್ಲ ಎಂಬ ಕಾರಣಕ್ಕಾಗಿ ಕೆಲವೇ ತಿಂಗಳಲ್ಲಿ ಆ ಖಾತೆ ವಾಪಸ್‌ ಪಡೆದುಕೊಂಡು ಕಾನೂನು ಮತ್ತು ನ್ಯಾಯಾಂಗ ಖಾತೆ ನೀಡಲಾಯಿತು. ಅದರಲ್ಲೂ ಸರಿಯಾದ ಸಾಧನೆ ತೋರಲಿಲ್ಲ ಎಂಬ ಉದ್ದೇಶದಿಂದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಕೊಡಲಾಯಿತು. ನಂತರ 2019ರ ಚುನಾವಣೆ ಬಳಿಕ ಎರಡನೇ ಬಾರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಯಿತು. ಹಂತ ಹಂತವಾಗಿ ಅವರಿಗೆ ಹಿಂಬಡ್ತಿ ಪಡೆದ ಅವರು ಅಂತಿಮವಾಗಿ ಸಂಪುಟದಿಂದಲೇ ಹೊರಗೆ ಬಂದಿದ್ದಾರೆ.

ತಮ್ಮ ವಿರುದ್ಧ ಮಾನಹಾನಿ ಆಗುವಂಥ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಬಾರದು ಎಂಬ ಉದ್ದೇಶದಿಂದ ನ್ಯಾಯಾಲಯದಿಂದ ತಡೆ ತಂದ ಬೆನ್ನಲ್ಲೇ ಅವರನ್ನು ಸಂಪುಟ ವಿಸ್ತರಣೆ ಹಿನ್ನೆಲೆ ಕೈಬಿಡಬಹುದು ಎಂಬ ಮಾತು ಬಿಜೆಪಿ ಪಾಳೆಯದಲ್ಲಿ ದಟ್ಟವಾಗಿ ಕೇಳಿಬರತೊಡಗಿತ್ತು. ಇದೀಗ ಅದು ಸತ್ಯವಾಗಿದೆ.

click me!