ಕೋವಿಡ್‌ಗೆ ತುತ್ತಾದವರು ಕಠಿಣ ಕೆಲಸ ಮಾಡಬೇಡಿ: ಕೇಂದ್ರ ಆರೋಗ್ಯ ಸಚಿವ

By Kannadaprabha NewsFirst Published Oct 31, 2023, 6:41 AM IST
Highlights

 ಕೊರೋನಾ ಸೋಂಕಿಗೆ ತುತ್ತಾದವರು ಕಠಿಣ ಕೆಲಸ ಅಥವಾ ಅತಿ ಹೆಚ್ಚು ಶ್ರಮ ಬೇಡುವ ಕೆಲಸದಿಂದ ದೂರ ಇದ್ದು, ಹೃದಯಾಘಾತದಿಂದ ಪಾರಾಗಬೇಕು ಎಂದು ಸ್ವತಃ ಕೇಂದ್ರ ಆರೋಗ್ಯ ಮಂತ್ರಿಯೇ ಕರೆ ಕೊಟ್ಟಿದ್ದಾರೆ.

 ಭಾವ್‌ನಗರ (ಗುಜರಾತ್‌): ಕೋವಿಡ್‌ ನಂತರ ದೇಶದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂಬ ವಾದಗಳ ನಡುವೆಯೇ, ತೀವ್ರ ಸ್ವರೂಪದಲ್ಲಿ ಕೊರೋನಾ ಸೋಂಕಿಗೆ ತುತ್ತಾದವರು ಕಠಿಣ ಕೆಲಸ ಅಥವಾ ಅತಿ ಹೆಚ್ಚು ಶ್ರಮ ಬೇಡುವ ಕೆಲಸದಿಂದ ದೂರ ಇದ್ದು, ಹೃದಯಾಘಾತದಿಂದ ಪಾರಾಗಬೇಕು ಎಂದು ಸ್ವತಃ ಕೇಂದ್ರ ಆರೋಗ್ಯ ಮಂತ್ರಿಯೇ ಕರೆ ಕೊಟ್ಟಿದ್ದಾರೆ.

ತವರು ರಾಜ್ಯ ಗುಜರಾತ್‌ನಲ್ಲಿ ಹೃದಯಾಘಾತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಮಾತನಾಡಿರುವ ಸಚಿವ ಮನ್ಸುಖ್‌ ಮಾಂಡವೀಯ (Minister Mansukh Mandaviya) ಅವರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವಿಸ್ತೃತ ಅಧ್ಯಯನವೊಂದನ್ನು ನಡೆಸಿದೆ. ಗಂಭೀರ ಸ್ವರೂಪದ ಕೋವಿಡ್‌ಗೆ ತುತ್ತಾದವರು ಕೆಲವು ಸಮಯದವರೆಗೆ ಕಠಿಣ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದೆ. ಹೀಗಾಗಿ ಕಠಿಣ ಕೆಲಸಗಳನ್ನು ತೀವ್ರ ಕೋವಿಡ್‌ ಬಾಧಿತರು ಒಂದೆರಡು ವರ್ಷಗಳ ಕಾಲ ಮುಂದೂಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನೀಲಿ ಬೆಂಕಿಯುಗುಳುವ ಜ್ವಾಲಾಮುಖಿ: ಯುರೋಪಿಯನ್ ಸ್ಪೇಸ್ ಏಜೆನ್ಸಿ ಸೆರೆ ಹಿಡಿದ ಅಪರೂಪದ ದೃಶ್ಯ

ಇತ್ತೀಚೆಗೆ ಗುಜರಾತ್‌ನಲ್ಲಿ ನವರಾತ್ರಿ(Navratri) ಹಬ್ಬದ ಸಂದರ್ಭದಲ್ಲಿ ಗರ್ಭಾ ನೃತ್ಯ ಮಾಡುವಾಗ 10 ಜನರು ಒಂದೇ ದಿನ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಅಲ್ಲದೆ ಗುಜರಾತಿನಾದ್ಯಂತ ಇತ್ತೀಚೆಗೆ ಹೃದಯಾಘಾತಗಳು ಹೆಚ್ಚಾಗಿದ್ದವು. ಇದರ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಗುಜರಾತ್‌ ಮಾತ್ರವಲ್ಲದೇ ದೇಶಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಚಿಕ್ಕವಯಸ್ಸಿನವರೇ ಹೃದಯಾಘಾತದಿಂದ ಸಾವಿಗೀಡಾಗುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೂ ಕೋವಿಡ್‌ಗೂ ಸಂಬಂಧವಿದೆ ಎಂಬ ಬಲವಾದ ನಂಬಿಕೆಯೂ ಸೃಷ್ಟಿಯಾಗಿದೆ. ಮನ್ಸುಖ್‌ ಮಾಂಡವೀಯ ಅವರ ಹೇಳಿಕೆ ಪರೋಕ್ಷವಾಗಿ ಅದನ್ನು ಒಪ್ಪಿಕೊಂಡಂತಿದೆ.

'ಆಕೆಗಾಗಿ' ಹೈ ಹೀಲ್ಡ್‌ ಶೂ ಧರಿಸಿ ಮೈಲು ದೂರ ನಡೆದ ಪುರುಷರು: ವೀಡಿಯೋ

click me!