ಗಿರಿ ಪ್ರದೇಶದಲ್ಲಿ ಕಸ ಎಸೆಯಬೇಡಿ ಎಂದ ಸ್ಥಳೀಯರ ಜೊತೆ ಪ್ರವಾಸಿಗರ ಕಿತ್ತಾಟ: ವೀಡಿಯೋ ವೈರಲ್

Published : Dec 17, 2024, 05:34 PM IST
ಗಿರಿ ಪ್ರದೇಶದಲ್ಲಿ ಕಸ ಎಸೆಯಬೇಡಿ ಎಂದ ಸ್ಥಳೀಯರ ಜೊತೆ ಪ್ರವಾಸಿಗರ ಕಿತ್ತಾಟ: ವೀಡಿಯೋ ವೈರಲ್

ಸಾರಾಂಶ

ಇಲ್ಲೊಂದು ಕಡೆ ಸ್ಥಳೀಯರು ಎಲ್ಲೆಂದರಲ್ಲಿ ಕಸ ಎಸೆದ ಪ್ರವಾಸಿಗರ ಬಳಿ ಕಸ ಎಸೆಯದಂತೆ ಹೇಳಿದ್ದಕ್ಕೆ ಪ್ರವಾಸಿ ಮಹಿಳೆಯರಿಬ್ಬರು ಉದ್ಧಟತನ ತೋರಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇತ್ತೀಚೆಗೆ ವೀಕೆಂಡ್ ಬಂದ್ರೆ ಸಾಕು ಪಟ್ಟಣವಾಸಿಗಳೆಲ್ಲ ಬ್ಯಾಗ್ ಪ್ಯಾಕ್ ಮಾಡಿ  ದೂರ ಪ್ರದೇಶದ ಗಿರಿ ಶಿಖರಗಳತ್ತ ಪ್ರವಾಸ ಟ್ರಕ್ಕಿಂಗ್ ಅಂತ ಹೊರಟು ಹೋಗುತ್ತಾರೆ.  ಆದರೆ ಹೀಗೆ ಹೋಗುವ ಬಹುತೇಕರು ಅಲ್ಲಿ ಪ್ಲಾಸ್ಟಿಕ್‌ಗಳನ್ನು ಎಸೆಯುವ ಮೂಲಕ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಇದರಿಂದ ಅನೇಕ ಕಸ ಪ್ಲಾಸ್ಟಿಕ್‌ಗಳಿಲ್ಲದ ಕೇವಲ ಭೂಮಿಯಲ್ಲಿ ಕರಗುವ ಮರಗಿಡಗಳ ಎಲೆ ಮುಂತಾದ ಸಾವಯವ ಕಸಗಳಿಂದ ತುಂಬಿದ್ದ ಗಿರಿ ಪ್ರದೇಶಗಳು ಪ್ಲಾಸ್ಟಿಕ್‌ನಿಂದ ತುಂಬಿ ಹೋಗುತ್ತಿದ್ದು,  ಇದರಿಂದ ಕೇವಲ ಭೂಮಿಗೆ ಮಾತ್ರವಲ್ಲದೇ ಅಲ್ಲಿರುವ ಅಪರೂಪದ ಪ್ರಾಣಿಗಳ ಜೀವಕ್ಕೂ ಹಾನಿಯಾಗುತ್ತದೆ. ಪ್ಲಾಸ್ಟಿಕ್‌ನಲ್ಲಿ ಬಿಟ್ಟ ಅಳಿದುಳಿದ ಆಹಾರವನ್ನು ಸೇವಿಸಲು ಬರುವ ಪ್ರಾಣಿಗಳು ಪ್ಲಾಸ್ಟಿಕ್‌ಗಳನ್ನು ಕೂಡ ಜೊತೆಯಲ್ಲಿ ತಿಂದು ಅಪಾಯಕ್ಕೀಡಾಗುತ್ತಿವೆ. ಜೊತೆಗೆ ಸುತ್ತಲಿನ ಸ್ವಚ್ಛಂದವಾದ ಪರಿಸರವೂ ಕೂಡ ಹಾನಿಗೊಳಗಾಗುತ್ತಿದೆ. 

ಈ ಬಗ್ಗೆ ಪ್ರವಾಸಿ ತಾಣಗಳ ನಿವಾಸಿಗಳು, ಸ್ಥಳೀಯ ಜನರು ಆಗಾಗ ಪ್ರವಾಸಿಗರಲ್ಲಿ ಪ್ಲಾಸ್ಟಿಕ್ ಹಾಕದಂತೆ ಮನವಿ ಮಾಡುವಂತಹ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಿದ್ದರೂ ಕೆಲ ಬುದ್ಧಿಗೇಡಿ ಪ್ರವಾಸಿಗರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಇದರಿಂದ ಸುಂದರ ಗಿರಿಧಾಮಗಳು ಪ್ರವಾಸಿ ತಾಣಗಳು ಪ್ಲಾಸ್ಟಿಕ್ ಮಯವಾಗುತ್ತಿವೆ. ಅದೇ ರೀತಿ ಇಲ್ಲೊಂದು ಕಡೆ ಸ್ಥಳೀಯರು ಹೀಗೆ ಎಲ್ಲೆಂದರಲ್ಲಿ ಕಸ ಎಸೆದ ಪ್ರವಾಸಿಗರ ಬಳಿ ಕಸ ಎಸೆಯದಂತೆ ಹೇಳಿದ್ದಕ್ಕೆ ಪ್ರವಾಸಿ ಮಹಿಳೆಯರಿಬ್ಬರು ಉದ್ಧಟತನ ತೋರಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವೀಡಿಯೋ ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. Udita Basu ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ. 'ಇದು ಹಿಮಾಚಲ ಪ್ರದೇಶದ ನೈನಿತಾಲ್‌ನಲ್ಲಿರುವ ಲವರ್ಸ್ ಪಾಯಿಂಟ್‌, ಇಲ್ಲಿ ಡಿಸೆಂಬರ್ 14ರಂದು ಸಂಜೆ 3 ಗಂಟೆಗೆ ಈ ಜನಗಳು ಬರ್ತ್‌ಡೇ ಕೇಕನ್ನು  ಇಲ್ಲಿ ಕತ್ತರಿಸಿದ್ದು, ಕೇಕ್ ಕತ್ತರಿಸಿದ ನಂತರ ಕೇಕ್‌ ಬಾಕ್ಸ್  ಹಾಗೂ ಟಿಶ್ಯು ಪೇಪರನ್ನು ಇಲ್ಲೇ ರಸ್ತೆಯಲ್ಲೇ ಎಸೆದಿದ್ದಾರೆ. ಈ ವೇಳೆ ನನ್ನ ಸೋದರಿ ಅವರ  ಬಳಿ ಮೃದುವಾಗಿ ಮನವಿ ಮಾಡುತ್ತಾ ಇದನ್ನು ಡಸ್ಟ್‌ಬಿನ್‌ಗೆ ಹಾಕುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಕೆಂಪು ಬಣ್ಣದ ಬಟ್ಟೆ ಧರಿಸಿದ ಮಹಿಳೆ ಅಲ್ಲಿ ಡಸ್ಟ್‌ಬಿನ್ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ಶಾಪೊಂದರ ಮಾಲೀಕರು ಕೂಡ ಈ ಪ್ರವಾಸಿ ಮಹಿಳೆಯರಿಗೆ ಈ ರೀತಿ ಎಸೆದರೆ ಪೊಲೀಸರು ನಮಗೆ ದಂಡ ವಿಧಿಸುತ್ತಾರೆ ಹೀಗಾಗಿ ಇಲ್ಲಿ ಕಸ ಎಸೆಯದಂತೆ ಮನವಿ ಮಾಡಿದ್ದಾರೆ. ಇದಾದ ನಂತರ ಈ ಪ್ರವಾಸಿಗರ ಚಾಲಕನಾಗಿದ್ದ ಯುವಕ ಬಂದು ಪ್ಲಾಸ್ಟಿಕ್‌ ಬ್ಯಾಗನ್ನು ಅಲ್ಲಿಂದ ತೆಗೆದು ಸಮೀಪದ ಕಣಿವೆಗೆ ಎಸೆದಿದ್ದಾರೆ. ಈ ವೇಳೆ ಕೇಕ್ ಬಾಕ್ಸನ್ನು ಅಲ್ಲಿಂದ ತೆಗೆಯುವಂತೆ ಹೇಳಿದಾಗ ಪರಿಸ್ಥಿತಿ ವಿಷಮಿಸಿದೆ. ಆದರೆ ಡಸ್ಟ್‌ಬಿನ್ ಈ ಘಟನೆ ನಡೆದ ಸ್ಥಳದಿಂದ ಕೇವಲ 5 ಅಡಿ ಅಂತರದಲ್ಲಿ ಇತ್ತು ಅಷ್ಟೆ ಹೀಗಿದ್ದು ಅವರು ಕಸದ ಬುಟ್ಟಿಗೆ ಕಸ ಹಾಕದೇ ವಾದ ಮಾಡುವುದರಲ್ಲಿ ತೊಡಗಿದರು. ಅವರು ತಮ್ಮ ಈ ಕೃತ್ಯವನ್ನು ಮತ್ತೆ ಮುಂದುವರಿಸಬಾರದು ಅವರನ್ನು ಪತ್ತೆ ಮಾಡಿ ಎಂದು ಬರೆದುಕೊಂಡಿದ್ದಾರೆ. 

ಅನೇಕರು ಇಂತಹ ಉದ್ಧಟತನದ ಪ್ರವಾಸಿಗರಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಮಗಳಿಗೆ ಸರಿಯಾದ ಮಾರ್ಗದರ್ಶನ ಮಾಡದೇ ವಾದ ಮಾಡುತ್ತಿರುವ ತಾಯಿಯ ಬಗ್ಗೆಯೂ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಇಂತಹವರಿಂದಾಗಿಯೇ ನಿರ್ಜನವಾಗಿದ್ದ ಹಳ್ಳ ಕೊಳ್ಳ, ನದಿ ಕೆರೆ ಕಾಡು ಮೇಡು ಎಲ್ಲಾ ಕಡೆ ಪ್ಲಾಸ್ಟಿಕ್ ಕಸಗಳು ತುಂಬಿವೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು