
ಹೈದರಾಬಾದ್ (ಡಿಸೆಂಬರ್ 7, 2023): ಕರ್ನಾಟಕದಂತೆ ಭರ್ಜರಿ ಉಚಿತ ಗ್ಯಾರಂಟಿ ಭರವಸೆಗಳನ್ನು ನೀಡಿ ತೆಲಂಗಾಣದಲ್ಲಿ ಜಯ ಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಸರ್ಕಾರ ರಚನೆ ಬೆನ್ನಲ್ಲೇ ಆರ್ಥಿಕ ಸಮಸ್ಯೆ ಎದುರಾಗುವುದು ನಿಚ್ಚಳವಾಗಿದೆ. ತೆಲಂಗಾಣದ ವಾರ್ಷಿಕ ಬಜೆಟ್ 1.9 ಲಕ್ಷ ಕೋಟಿ ರೂಪಾಯಿ.
ಅದರಲ್ಲಿ ಆರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಕ್ಕೇ 1.4 ಲಕ್ಷ ಕೋಟಿ ರೂ. ಬೇಕಿದೆ. ಇನ್ನುಳಿದ ಕೇವಲ 50,000 ಕೋಟಿ ರೂ. ಹಣದಲ್ಲಿ ನೌಕರರ ವೇತನ, ಸರ್ಕಾರಿ ಖರ್ಚುವೆಚ್ಚಗಳನ್ನು ನಿಭಾಯಿಸುವುದು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ ಸಾಧ್ಯ ಎಂದು ಆರ್ಥಿಕ ತಜ್ಞರು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ತೆಲಂಗಾಣದಲ್ಲಿ ಬದಲಾಗ್ತಿದೆ ಸರ್ಕಾರ: ರೇವಂತ್ ರೆಡ್ಡಿ, ಕೆಟಿಆರ್ಗೆ ಯುಕೆ ಡೆಪ್ಯುಟಿ ಹೈ ಕಮಿಷನರ್ ಪೋಸ್ಟ್ ವೈರಲ್!
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿತ್ತು. ತೆಲಂಗಾಣದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ 6 ಉಚಿತ ಗ್ಯಾರಂಟಿಗಳನ್ನು ಘೋಷಿಸಿದೆ. 2 ಲಕ್ಷ ರೂ.ವರೆಗೆ ರೈತರ ಸಾಲ ಮನ್ನಾ, ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ, ಮಹಿಳೆಯರಿಗೆ ಪ್ರತಿ ತಿಂಗಳು ಹಣ, ರೈತು ಭರೋಸಾ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 16,000 ರೂ. ಹಣ, 500 ರೂ.ಗೆ ಎಲ್ಪಿಜಿ ಸಿಲಿಂಡರ್ ಹಾಗೂ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಇವುಗಳಲ್ಲಿ ಐದು ಭರವಸೆಗಳ ಜಾರಿಗೆ ವರ್ಷಕ್ಕೆ 1.2 ಲಕ್ಷ ಕೋಟಿ ರೂ. ಹಾಗೂ ರೈತರ ಸಾಲ ಮನ್ನಾಕ್ಕೆ ಒಂದು ಬಾರಿ 20,000 ಕೋಟಿ ರೂ. ಬೇಕಿದೆ. ಅಷ್ಟು ಹಣವನ್ನು ಕಾಂಗ್ರೆಸ್ ಸರ್ಕಾರ ಹೇಗೆ ಹೊಂದಿಸುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ತೃತೀಯ ರಂಗ ರಾಷ್ಟ್ರ ನಾಯಕನಾಗಲು ಹೊರಟ ಕೆಸಿಆರ್ಗೆ ತವರಲ್ಲೇ ಮುಖಭಂಗ: ಕನಸಿನ ಕಾರಿಗೆ ಬ್ರೇಕ್ ಹಾಕಿದ ಹಸ್ತ!
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಉಚಿತ ಭರವಸೆಗಳು ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಈವರೆಗೆ ನೀಡಿದ್ದ ಭರವಸೆಗಳಿಗಿಂತ ಹೆಚ್ಚು ಎಂದು ಹೇಳಲಾಗಿದೆ. ಈಗಾಗಲೇ ತೆಲಂಗಾಣದ ಸರ್ಕಾರಿ ಸಾರಿಗೆ ಸಂಸ್ಥೆ ಹಾಗೂ ವಿದ್ಯುತ್ ಪೂರೈಕೆ ಸಂಸ್ಥೆಗಳು ನಷ್ಟದಲ್ಲಿವೆ. ಉಚಿತ ಭರವಸೆಗಳ ಜಾರಿ ನಂತರ ಅವುಗಳ ಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ