ಪಳನಿ ಪ್ರಸಾದದಲ್ಲಿ ಸಂತಾನ ಹರಣ ಔಷಧಿ ಇದೆ ಎಂದ ನಿರ್ದೇಶಕ ಅರೆಸ್ಟ್; ಇತ್ತ ಡ್ರೈಫ್ರೂಟ್ಸ್ ಪ್ರಸಾದ ನೀಡಲು ಮನವಿ

By Kannadaprabha NewsFirst Published Sep 25, 2024, 8:51 AM IST
Highlights

ಪಳನಿ ದೇವಾಲಯದ ಪ್ರಸಾದದಲ್ಲಿ ಸಂತಾನ ಹರಣ ಔಷಧಿ ಸೇರಿಸಿ ಭಕ್ತರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ ನಿರ್ದೇಶಕನನ್ನು ಬಂಧಿಸಿದ್ದಾರೆ. ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಆರೋಪವನ್ನು ಮಾಡಿದ್ದರು.

ಚೆನ್ನೈ: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಎಂಬ ಸುದ್ದಿ ಬೆನ್ನಲ್ಲೇ ತಮಿಳುನಾಡಿನ ಪಳನಿ ದೇವಾಲಯದ ಪಂಚಾಮೃತ ಪ್ರಸಾದದಲ್ಲಿ ಸಂತಾನ ಹರಣ ಔಷಧಿಯನ್ನು ಬೆರಸಿ ಭಕ್ತರಿಗೆ ನೀಡಲಾಗುತ್ತದೆ ಎಂದು ತಮಿಳು ನಿರ್ದೇಶಕ ಮೋಹನ್ ಜಿ. ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಅವರನ್ನು ತಿರುಚ್ಚಿ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ತಿರುಪತಿ ಲಡ್ಡು ಕಲಬೆರಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಮೋಹನ್ ಈ ಹೇಳಿಕೆ ನೀಡಿದ್ದರು.

ಡ್ರೈಫ್ರೂಟ್ಸ್ ಪ್ರಸಾದ ನೀಡಲು ಮನವಿ
ಹರಿದ್ವಾರ: ದೇವಸ್ಥಾನಗಳಲ್ಲಿ ಕಲಬೆರಕೆ ಲಡ್ಡು ಪ್ರಸಾದಗಳನ್ನು ದೇವರಿಗೆ ನೀಡುವ ಬದಲು. ಕಲ್ಲು ಸಕ್ಕರೆ, ಏಲಕ್ಕಿ, ಡ್ರೈ ಪ್ರೂಟ್ಸ್‌ಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಿ ಎಂದು ಅರ್ಚಕರು ಹಾಗೂ ಶ್ರೀಗಳು ಸದಸ್ಯರಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್‌ ಆಗ್ರಹಿಸಿದೆ.

Latest Videos

‘ದೇಶದ ಎಲ್ಲ ದೇವಸ್ಥಾನಗಳಲ್ಲಿ ಕಲ್ಲು ಸಕ್ಕರೆ, ಏಲಕ್ಕಿ, ಡ್ರೈ ಪ್ರೂಟ್ಸ್‌ಗಳನ್ನು ವಿತರಿಸಬೇಕು. ಸಾಂಪ್ರದಾಯಿಕ ಹಿಂದೂ ದೇವತೆಗೆ ಭೋಗ್ ರೂಪದಲ್ಲಿ ನೀಡಲಾಗುತ್ತದೆ. ಈ ವಸ್ತುಗಳನ್ನು ಪ್ರಸಾದದ ರೂಪದಲ್ಲಿ ನೀಡುವುದರಿಂದ ಯಾವುದೇ ಕಲಬೆರಕೆಯ ಇರುವುದಿಲ್ಲ’ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಮುಖ್ಯಸ್ಥ ಮಹಂತ್ ರವೀಂದ್ರ ಪುರಿ ಹೇಳಿದ್ದಾರೆ.

‘ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪ್ರಸಾದದ ಬಳಕೆಯಲ್ಲಿ ಬಳಸಲಾಗುವ ತುಪ್ಪಗಳ ಶುದ್ಧತೆಯನ್ನು ಖಾತರಿ ಪಡಿಸಬೇಕು. ಅಲ್ಲಿಯವರೆಗೂ ದೇವಸ್ಥಾನಗಳಲ್ಲಿ ಇದೇ ಪ್ರಸಾದವನ್ನು ನೀಡಬೇಕು’ ಎಂದಿದ್ದಾರೆ.

ಸರ್ಕಾರ ಹಿಡಿತದಿಂದ ದೇಗುಲ ಮುಕ್ತಿಗೆ ವಿಎಚ್‌ಪಿ ಆಂದೋಲನ
ಅಲ್ಪಸಂಖ್ಯಾತರು ಧಾರ್ಮಿಕ ಸಂಸ್ಥೆಗಳನ್ನು ನಡೆಸಬಹುದು ಅಂತಾದರೆ ಹಿಂದೂಗಳೇಕೆ ನಡೆಸಬಾರದು? ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು. ಈ ಬಗ್ಗೆ ಶೀಘ್ರದಲ್ಲೇ ದೇಶವ್ಯಾಪಿ ಆಂದೋಲನ ನಡೆಸುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ.

ತಿರುಮಲ ಲಡ್ಡು ಪ್ರಸಾದದ ವಿವಾದ ಎದ್ದಿರುವ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್‌, ‘ದೇಶಾದ್ಯಂತ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದು ನಮ್ಮ ಸಂಕಲ್ಪ. ಪ್ರತಿ ರಾಜ್ಯಗಳಲ್ಲಿಯೂ ಆಂದೋಲನ ನಡೆಸಿ ಮುಖ್ಯಮಂತ್ರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ. ಅಗತ್ಯವಿದ್ದಲ್ಲಿ ಕಾನೂನಿನ ಮೊರೆ ಹೋಗಲಾಗುವುದು. ದೇಗುಲಗಳನ್ನು ಸರ್ಕಾರ ನಿಯಂತ್ರಿಸುವುದು ಸಂವಿಧಾನದ ಉಲ್ಲಂಘನೆ’ ಎಂದರು. ಲಡ್ಡು ಪ್ರಸಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂಥ ವಿವಾದ ಶಬರಿಮಲೆ ಪ್ರಸಾದದ ಬಗ್ಗೆಯೂ ಎದ್ದಿತ್ತು ಎಂದರು.

ತಿರುಪತಿ ಲಡ್ಡುನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿದ್ದು ನಿಜವೇ? ಟಿಟಿಡಿಯ ಸ್ಪಷ್ಟನೆ ಏನು?

ಎಆರ್‌ ಡೈರಿ ಸಂಸ್ಥೆಗೆ ಕೇಂದ್ರದ ನೋಟಿಸ್‌
ತುಪ್ಪ ಪೂರೈಸಿದ ಚೆನ್ನೈ ಮೂಲದ ಎಆರ್‌ ಡೈರಿ ಸಂಸ್ಥೆಗೆ ಕೇಂದ್ರ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನೋಟಿಸ್‌ ಜಾರಿ ಮಾಡಿದೆ. ಅದರಲ್ಲಿ ಕಳಪೆ ತುಪ್ಪ ಪೂರೈಕೆ ಕುರಿತ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಕಳೆದ ಜೂ.14ರಿಂದ ಎಆರ್‌ ಡೈರಿ ಸಂಸ್ಥೆಗೆ ತಿರುಪತಿಗೆ ತುಪ್ಪ ಪೂರೈಕೆ ಆರಂಭಿಸಿತ್ತು. ಈ ನಡುವೆ ಜುಲೈ ತಿಂಗಳಲ್ಲಿ ಇತರೆ ನಾಲ್ಕು ಸಂಸ್ಥೆಗಳ ಜೊತೆಗೆ ಎಆರ್‌ ಡೈರಿಗೆ ಸೇರಿದ ತುಪ್ಪ ಪೂರೈಸುವ ಲಾರಿಗಳ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ ವೇಳೆ, ಎಆರ್‌ ಡೈರಿ ಪೂರೈಸಲು ತಂದಿದ್ದ ತುಪ್ಪದಲ್ಲಿ ಹಸು, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆಯ ಅಂಶಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತುಪ್ಪ ಮರಳಿಸಿದ್ದ ಟಿಟಿಡಿ, ಕಂಪನಿಯನ್ನು ಕಪ್ಪುಪಟ್ಟಿಗೂ ಸೇರಿಸಿತ್ತು.

ವಿವಾದದ ಬಳಿಕ 5 ದಿನದಲ್ಲಿ ಮಾರಾಟವಾದ ತಿರುಪತಿ ಲಡ್ಡು ಸಂಖ್ಯೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

click me!