* ಮೊನ್ನೆ ಬಂಧನದಿಂದ ತಪ್ಪಿಸಿಕೊಂಡಿದ್ದ ಬಗ್ಗಾ*
* ದಿಲ್ಲಿ ಬಿಜೆಪಿ ನಾಯಕ ಬಗ್ಗಾ ಬಂಧನಕ್ಕೆ ಮೊಹಾಲಿ ಕೋರ್್ಟಆದೇಶ
* ಕೇಜ್ರಿ ವಿರುದ್ಧ ಪ್ರಚೋದಕ ಹೇಳಿಕೆ ಪ್ರಕರಣ
ಮೊಹಾಲಿ: ಪಂಜಾಬ್ ಪೊಲೀಸರಿಂದ ಬಂಧನಕ್ಕೆ ಒಳಗಾದರೂ ಹರ್ಯಾಣ ಹಾಗೂ ದಿಲ್ಲಿ ಪೊಲೀಸರ ಮಧ್ಯಪ್ರವೇಶದಿಂದಾಗಿ ಪಾರಾಗಿ ಬಂದಿದ್ದ ದಿಲ್ಲಿ ಬಿಜೆಪಿ ಮುಖಂಡ ತಜಿಂದರ್ ಪಾಲ್ ಬಗ್ಗಾ ಅವರಿಗೆ ಮತ್ತೆ ಬಂಧನದ ಭೀತಿ ಆರಂಭವಾಗಿದೆ. ಬಗ್ಗಾ ಅವರನ್ನು ಬಂಧಿಸಿ ತನ್ನ ಮುಂದೆ ಹಾಜರುಪಡಿಸಬೇಕು ಎಂದು ಪಂಜಾಬ್ನ ಮೊಹಾಲಿ ನ್ಯಾಯಾಲಯವು ಪಂಜಾಬ್ ಪೊಲೀಸರಿಗೆ ಶನಿವಾರ ಸಂಜೆ ಆದೇಶಿಸಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ಪ್ರಚೋದಕ ಹೇಳಿಕೆಗಳು, ಎರಡು ಸಮುದಾಯಗಳ ನಡುವೆ ದ್ವೇಷ ಹರಡಿಸುವಿಕೆ- ಇತ್ಯಾದಿ ಆರೋಪ ಹೊರಿಸಿ ಮೊಹಾಲಿಯ ಆಪ್ ನಾಯಕರೊಬ್ಬರು ಬಗ್ಗಾ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿ ಕೋರ್ಚ್, ಬಂಧನದ ವಾರಂಟ್ ಹೊರಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 23ಕ್ಕೆ ನಿಗದಿಪಡಿಸಿದೆ.
ಶುಕ್ರವಾರವಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದರು. ಆದರೆ ಬಗ್ಗಾ ಅವರ ತಂದೆ ಅಪಹರಣ ದೂರು ದಾಖಲಿಸಿದ್ದ ಕಾರಣ ಮಧ್ಯಪ್ರವೇಶಿಸಿದ ದಿಲ್ಲಿ ಪೊಲೀಸರು, ಹರ್ಯಾಣ ಪೊಲೀಸರ ನೆರವು ಪಡೆದು ಹರ್ಯಾಣದ ಕುರುಕ್ಷೇತ್ರದಲ್ಲಿ ಬಗ್ಗಾ ಅವರನ್ನು ‘ಬಂಧಮುಕ್ತ’ ಮಾಡಿ ದಿಲ್ಲಿಗೆ ವಾಪಸ್ ಕರೆತಂದಿದ್ದರು.
ಆದರೆ ಇದರ ವಿರುದ್ಧ ಮೊಹಾಲಿ ಕೋರ್ಚ್ಗೆ ಶನಿವಾರ ಬೆಳಗ್ಗೆ ಪಂಜಾಬ್ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಮಾನ್ಯ ಮಾಡಿದ ಕೋರ್ಟು, ಬಗ್ಗಾ ಬಂಧನಕ್ಕೆ ಆದೇಶಿಸಿದೆ.