ಹಸಿದವರಿಗೆ ಮನೆ ಬಾಗಿಲಿಗೆ ಆಹಾರ ತಲುಪಿಸುವ ಡೆಲಿವರಿ ಬಾಯ್ ಒಬ್ಬರು ಅಸ್ವಸ್ಥಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೀಗೆ ಮಾನವೀಯತೆ ಮೆರೆದ ಡೆಲಿವರಿ ಬಾಯ್ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕುವ ಮೂಲಕ ಅವರ ಕಾರ್ಯವನ್ನು ಆಹಾರ ಪೂರೈಕಾ ಸಂಸ್ಥೆ ಸ್ವಿಗ್ಗಿ ಶ್ಲಾಘಿಸಿದೆ.
ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುವ ಮೃಣಾಲ್ ಕಿರ್ದತ್ (Mrunal Kirdat) ಎಂಬುವವರೇ ಮಾನವೀಯತೆ ಮೆರೆದ ವ್ಯಕ್ತಿ. ತನ್ನ ಕರ್ತವ್ಯದ ಕರೆಯನ್ನು ಮೀರಿ ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ಅವರು ಮಾನವೀಯತೆಯೇ ಮಹಾನ್ ಧರ್ಮ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ನಿವೃತ್ತ ಕರ್ನಲ್ ಮನ್ ಮೋಹನ್ ಮಲಿಕ್ (Man Mohan Malik) ಅವರಿಗೆ ಮೃಣಾಲ್ ಕಿರ್ದತ್ ಎಂಬ ಡೆಲಿವರಿ ಬಾಯ್ 'ನಿಜವಾದ ರಕ್ಷಕ' ನಾದ ಘಟನೆಯನ್ನು ವರ್ಣಿಸಿದ್ದಾರೆ. ಸ್ವಿಗ್ಗಿ, ಮಲಿಕ್ ಅವರ ಹೇಳಿಕೆಯಂತೆ ಈ ಪೋಸ್ಟ್ ಅನ್ನು ಬರೆದಿದ್ದಾರೆ.
ಡಿಸೆಂಬರ್ 25ರಂದು ನನಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ನನ್ನ ಮಗ ನನ್ನನ್ನು ಲೀಲಾವತಿ ಆಸ್ಪತ್ರೆಗೆ (Lilavati Hospital) ಕರೆದೊಯ್ಯಲು ನಿರ್ಧರಿಸಿದ್ದ. ಆದರೆ ದಾರಿ ಮಧ್ಯೆ ವಾಹನ ದಟ್ಟಣೆ ಹೆಚ್ಚಾಗಿದ್ದು ಒಂದು ಇಂಚು ಕೂಡ ವಾಹನ ಮುಂದೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ನನ್ನ ಮಗ ಅನೇಕರಿಗೆ ದಾರಿ ಬಿಟ್ಟು ಸಹಾಯ ಮಾಡುವಂತೆ ಮನವಿ ಮಾಡಿದನು ಮತ್ತು ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಮಧ್ಯೆಯೂ ವೇಗವಾಗಿ ವಾಹನ ಚಾಲನೆ ಮಾಡಬಹುದು ಮತ್ತು ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಬಹುದು ಎಂದು ಅನೇಕರಲ್ಲಿ ಸಹಾಯಕ್ಕಾಗಿ ವಿನಂತಿಸಿದನು.
ಆದರೆ ಯಾವೊಬ್ಬ ದ್ವಿಚಕ್ರವಾಹನ ಸವಾರನು ನೆರವಿಗೆ ಬರಲಿಲ್ಲ. ಆದರೆ ಅದೇ ದಾರಿಯಾಗಿ ಬಂದ ಸ್ವಿಗ್ಗಿ ಡೆಲಿವರಿ ಬಾಯ್ (Swiggy Delivery Boy) ಓರ್ವ ನಮ್ಮ ಮೇಲೆ ದಯೆ ತೋರಿದ. ತಕ್ಷಣ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಒಪ್ಪಿಕೊಂಡ. ಡೆಲಿವರಿ ಬಾಯ್ ಮೃಣಾಲ್ ಕಿರ್ದತ್, ದಾರಿಯುದ್ಧಕ್ಕೂ ಪದೇ ಪದೇ ಕೂಗುತ್ತಾ ಇತರ ವಾಹನ ಸವಾರರಿಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡ. ಈತನ ಪರಿಶ್ರಮದಿಂದಾಗಿ ಕೊನೆಗೆ ನಾವು ಶೀಘ್ರವಾಗಿ ಆಸ್ಪತ್ರೆ ತಲುಪಿದೆವು. ಮೃಣಾಲ್ ಅವರು ನಾನು ಗಂಭೀರವಾಗಿರುವುದಾಗಿ ಸಿಬ್ಬಂದಿಗೆ ತ್ವರಿತವಾಗಿ ಮಾಹಿತಿ ನೀಡಿದರು ಮತ್ತು ಶೀಘ್ರವಾಗಿ ಕಾರ್ಯನಿರ್ವಹಿಸಲು ಅವರನ್ನು ಕೇಳಿದರು ಎಂದು ಡೆಲಿವರಿ ಬಾಯ್ನಿಂದ ಸಹಾಯ ಪಡೆದ ಮಲ್ಲಿಕ್ ಬರೆದಂತೆ ಇನ್ಸ್ಟಾಗ್ರಾಮ್ನಲ್ಲಿ ಸ್ವಿಗ್ಗಿ ಸಂಸ್ಥೆ ಹೇಳಿಕೊಂಡಿದೆ.
ಆಸ್ಪತ್ರೆಯಲ್ಲಿ ಹಲವಾರು ವಾರಗಳ ಚಿಕಿತ್ಸೆ ನಂತರ, ನಾನು ಚೆನ್ನಾಗಿದ್ದೇನೆ. ನನಗೆ ಹೊಸ ಬದುಕನ್ನು ನೀಡಿದ ಚಿಕ್ಕ ಹುಡುಗನ ಬಗ್ಗೆ ನಾನು ಯೋಚಿಸುತ್ತಿದ್ದೆ. ನನ್ನ ಪಾಲಿಗೆ ಆತ ನಿಜವಾಗಿಯೂ ರಕ್ಷಕ. ಅವನಿಲ್ಲದಿದ್ದರೆ, ನಾನು ಬಹುಶಃ ನನ್ನ ಪ್ರೀತಿಪಾತ್ರರ ಬಳಿಗೆ ಹಿಂತಿರುಗಲು ಸಾಧ್ಯವಾಗುತ್ತಿರಲಿಲ್ಲ. ಅತನಿಗೆ ಮತ್ತು ಎಲ್ಲಾ ತೆರೆಮರೆಯಲ್ಲಿ ಕೆಲಸ ಮಾಡುವ ಎಲ್ಲ ಡೆಲಿವರಿ ಬಾಯ್ಗಳಿಗೆ ನನ್ನ ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ. ಕಿರ್ದತ್ ಮತ್ತು ಮಲಿಕ್ ಇಬ್ಬರ ಫೋಟೋದೊಂದಿಗೆ ಈ ಘಟನೆಯನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಲಾಗಿದೆ.
Swiggyಯಿಂದ ಮಹಿಳೆಯರಿಗೆ ತಿಂಗಳಲ್ಲಿ 2 ದಿನ ಮುಟ್ಟಿನ ರಜೆ, ಹಲವು ಸೌಲಭ್ಯ!
ನಿನ್ನೆ ಈ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಮಂದಿ ಈ ಪೋಸ್ಟ್ನ್ನು ಲೈಕ್ ಮಾಡಿದ್ದಾರೆ. ಇದೊಂದು ಹೆಮ್ಮೆಯ ಕ್ಷಣ ಎಂದು Instagram ಬಳಕೆದಾರರು ಬರೆದಿದ್ದಾರೆ. ಈತ ನಿಜವಾದ ಮನುಷ್ಯ, ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಉತ್ತಮ ಕೆಲಸ, ಎಂದು ಮೂರನೇಯವರು ಹೇಳಿದ್ದಾರೆ. ಒಟ್ಟಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ