
ನವದೆಹಲಿ (ಜೂ.28): ದೇಶದಲ್ಲಿ ಕಬ್ಬು ಬೆಳೆಯುವ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯನ್ನು ನೀಡಲಾಗಿದೆ. ಕಬ್ಬು ಬೆಳೆಗಾರರ ಬೇಡಿಕೆಯಂತೆ ಒಂದು ಟನ್ ಕಬ್ಬಿಗೆ 100 ರೂಪಾಯಿ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (FRP) ಹೆಚ್ಚಳ ಮಾಡಿದೆ.
ದೇಶದಲ್ಲಿ ಅಗತ್ಯ ವಸ್ತಗಳ ಬೆಲೆ ಏರಿಕೆಯಿಂದ ರೈತರು ಹಾಗೂ ಜನಸಾಮಾನ್ಯರು ಹೈರಾಣಾಗಿದ್ದಾರೆ. ಹಲವು ದಿನಗಳಿಂದ ಕಬ್ಬಿಗೆ ಎಫ್ ಆರ್ ಪಿ ನಿಗದಿ ಮಾಡುವಂತೆ ದೇಶಾದ್ಯಂತ ರೈತರು ಒತ್ತಡ ಹಾಕುತ್ತಿದ್ದರು. ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು ಇಂದ ಪ್ರತಿ ಟನ್ ಕಬ್ಬಿಗೆ 100 ರೂ. ಎಫ್ಆರ್ಪಿ ದರವನ್ನು ಹೆಚ್ಚಳ ಮಾಡಿದೆ. ಅಂದರೆ ರೈತರು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ 3,150 ಎಫ್ ಆರ್ ಪಿ ನಿಗದಿ ಮಾಡಲಾಗಿದೆ. ಅಂದರೆ, ಪ್ರತಿ ಕ್ವಿಂಟಲ್ ಕಬ್ಬಿಗೆ 315 ರೂಪಾಯಿ ನಿಗದಿ ಮಾಡಿದಂತಾಗಿದೆ.
Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ
ಈ ಮೊದಲು ಕ್ವಿಂಟಾಲ್ಗೆ 305 ರೂ. ದರವಿತ್ತು: ಇನ್ನು ಈ ಹಿಂದೆ ಪ್ರತಿ ಕ್ವಿಂಟಾಲ್ 305 ರೂಪಾಯಿ ಇತ್ತು. ಈಗ ಕ್ವಿಂಟಾಲ್ಗೆ 10 ರೂ. ಹೆಚ್ಚಳ ಮಾಡಲಾಗಿದೆ. ಅಂದರೆ ಪ್ರತಿ ಕ್ವಿಂಟಾಲ್ ಕಬ್ಬಿಗೆ 315 ರೂ. ದರ ನಿಗದಿಯಾದಂತಿದೆ. ಇದರಿಂದ ದೇಶದ 5 ಕೋಟಿ ರೈತರಿಗೆ ಹಾಗೂ 5 ಲಕ್ಷ ಕಾರ್ಮಿಕರಿಗೆ ಲಾಭವಾಗಲಿದೆ ಎಂದ ಕೇಂದ್ರ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿಕೆ ನೀಡಿದ್ದಾರೆ.
400 ಕೋಟಿ ರೂ. ಕಬ್ಬಿನ ಬಿಲ್ ಬಾಕಿ:
ಬೆಳಗಾವಿ(ಜೂ.22): ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಸುಮಾರು 400 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಕಬ್ಬು ನುರಿಸುವ ಮುಂಗಾರು ಹಂಗಾಮು ಆರಂಭಕ್ಕೂ ಮುನ್ನವೇ ಕೋಡುತ್ತೇವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಉಳಿಸಿಕೊಂಡಿರುವ ಈ 400 ಕೋಟಿ ಬಾಕಿ ಬಿಲ್ ಅನ್ನು ಕಬ್ಬು ನುರಿಸುವ ಹಂಗಾಮು ಆರಂಭಕ್ಕೂ ಮುನ್ನವೇ ಕೊಡುತ್ತೇವೆ. ಬಿಲ್ ಯಾರದ್ದೇ ಬಾಕಿ ಇರಲಿ, ನಿರಾಣಿಯವರದ್ದು ಬಾಕಿದ್ದರೆ ಕೊಡಲೇಬೇಕು ಕೊಡುತ್ತಾರೆ. ರೈತರಿಗೆ ಬಾಕಿ ಬಿಲ್ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಸರ್ಕಾರದಿಂದ ತೀಕದ ಯಂತ್ರ ಅಳವಡಿಕೆಗೆ ಚಿಂತನೆ: ಸಕ್ಕರೆ ಕಾರ್ಖಾನೆಗಳು ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಕ್ಕರೆ ಕಾರ್ಖಾನೆಗಳ ಸಭೆ ಕರೆಯುತ್ತಿದ್ದೇವೆ. ಅಲ್ಲದೇ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಾವೇ ಸರ್ಕಾರದಿಂದ ತೂಕದ ಮಷಿನ್ ಹಾಕಬೇಕು ಎಂಬ ಚಿಂತನೆಯಿದೆ. ಅದನ್ನು ಒಂದೇ ರಾತ್ರಿಯಲ್ಲಿ ನಿರ್ಧಾರ ಮಾಡಲು ಆಗುವುದಿಲ್ಲ. ಖಂಡಿತ ಪರಿಸ್ಥಿತಿ ಅನಿವಾರ್ಯ ಆಯಿತು ಎಂದರೆ ಹಾಕಲೇಬೇಕಾಗುತ್ತದೆ ಎಂದರು.
ಅನ್ನಭಾಗ್ಯಕ್ಕೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ: ಕುರುಬೂರು ಶಾಂತಕುಮಾರ್
ಹಣ ಕೊಡದವರಿಗೆ ತಡೆಯಾಜ್ಞೆ ತರಲು ನಿರ್ಧಾರ: ಸಾಕಷ್ಟು ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತವೆ. ಆದರೆ ಸರ್ಕಾರಕ್ಕೆ, ಸಂಸ್ಥೆಗೆ ಏನೂ ಸಹಾಯ ಕೊಟ್ಟಿಲ್ಲ ಎಂಬುವುದು ನನ್ನ ಗಮನಕ್ಕೆ ಬಂದಿದೆ. ಕೆಲವು ಮಹಾಶಯರು ಒಂದು ಟನ್ ಕಬ್ಬಿಗೆ ಒಂದು ರುಪಾಯಿಯನ್ನೂ ಕೊಟ್ಟಿಲ್ಲ. ಅವರಿಗೊಂದು ಸಣ್ಣ ತಡೆಯಾಜ್ಞೆ ತರಲು ಇವರು ಬಿಟ್ಟು ಬಿಟ್ಟಿದ್ದಾರೆ. ಆದರೆ ಮಹಾರಾಷ್ಟ್ರ ಕಾರ್ಖಾನೆಗಳು ಸಕ್ಕರೆ ಸಂಸ್ಥೆಗೆ ಪ್ರತಿ ಟನ್ ಕಬ್ಬಿಗೆ .30 ಕೊಡುತ್ತವೆ. ನಾವು ಇಲ್ಲಿ ಎರಡು ರುಪಾಯಿ ಇರೋದನ್ನು ಒಂದು ರುಪಾಯಿ ಕೇಳುತ್ತಿದ್ದೇವೆ. ಒಂದು ಟನ್ಗೆ ಕಾರ್ಖಾನೆಗಳು 600 ರಿಂದ 800 ರೂ. ಉಳಿಸುತ್ತವೆ. ನಾವು ಈಗ ಆ ಗೊಂದಲಕ್ಕೆ ಹೋಗುವುದು ಬೇಡ, ಅವರು ಲಾಭ ಮಾಡಿ ಬದುಕಲಿ. ರೈತನೂ ಬದುಕಬೇಕು. ಸರ್ಕಾರ ರೈತರಿಗೆ ಉಚಿತ ನೀರು, ಉಚಿತ ವಿದ್ಯುತ್ ಕೊಡುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ