
ನವದೆಹಲಿ (ಏ.15) ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ತೀವ್ರ ಹಿನ್ನಡೆ ತಂಡಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ವಿರುದ್ದ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೆರಾ ಅರೆಸ್ಟ್ ಮಾಡಲು ಅಸ್ಸಾಂ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ತೆಲಂಗಾಣ ಹೈಕೋರ್ಟ್ನಿಂದ ಮಧ್ಯಮಂತ್ರ ಜಾಮೀನು ಪಡೆದು ನಿರಾಳರಾಗಿದ್ದರು. ಆದರೆ ಸುಪ್ರೀಂ ಕೋರ್ಟ್ ಇದೀಗ ಪವನ್ ಖೆರಾಗೆ ಶಾಕ್ ನೀಡಿದೆ. ತೆಲಂಗಾಣ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿಗೆ ತಡೆ ನೀಡಿದೆ. ಇದೀಗ ಪವನ್ ಖೆರಾಗೆ ಆತಂಕ ಶುರುವಾಗಿದೆ.
ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಬೆನ್ನಲ್ಲೇ ಪವನ್ ಖೆರಾ, ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಇಷ್ಟೇ ಅಲ್ಲ ಮಧ್ಯಂತರ ಜಾಮೀನು ಕೂಡ ಪಡೆದುಕೊಂಡಿದ್ದರು. ಹೀಗಾಗಿ ಅಸ್ಸಾಂ ಪೊಲೀಸರು ತೆಲಂಗಾಣಕ್ಕೆ ತೆರಳಿ ಬರಿಗೈಯಲ್ಲಿ ಮರಳಿದ್ದರು. ತೆಲಂಗಾಣ ಹೈಕೋರ್ಟ್ ಜಾಮೀನು ವಿರುದ್ದ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ಮಹತ್ವದ ಆದೇಶ ನೀಡಿದೆ. ತೆಲಂಗಾಣ ಹೈಕೋರ್ಟ್ ನೀಡಿದ ಮಧ್ಯಂತರ ಜಾಮೀನು ಆದೇಶಕ್ಕೆ ತಡೆ ನೀಡಿದೆ. ಬಳಿಕ ಮಧ್ಯಮಂತರ ಜಾಮೀನು ಅರ್ಜಿಗೆ ಅಸ್ಸಾಂ ಹೈಕೋರ್ಟ್ ಮೊರೆ ಹೋಗಲು ಸೂಚಿಸಿದೆ.
ಪವನ್ ಖೆರಾ ಸುದ್ದಿಗೋಷ್ಠಿ ನಡೆಸಿ ಹಿಮಂತ ಬಿಸ್ವಾ ಶರ್ಮಾ, ವಿಧಾನಸಭೆ ಚುನಾವಣೆಗೆ ಸಲ್ಲಿಸಿದ ಅಫಿದವಿತ್ನಲ್ಲಿ ಕೆಲ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ವೇಳೆ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿಂಕಿ ಬುಯಾನ್ ಶರ್ಮಾ ಹಲವು ದೇಶಗಳ ಪಾಸ್ಪೋರ್ಟ್ ಹೊಂದಿದ್ದಾರೆ. ಜೊತೆಗೆ ವಿದೇಶಗಳಲ್ಲೂ ಕೆಲ ಆಸ್ತಿ ಹೊಂದಿದ್ದಾರೆ. ಈ ಮಾಹಿತಿಯನ್ನು ಅಫಿದವಿತ್ನಲ್ಲಿ ಮರೆಮಾಚಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪದ ವಿರುದ್ಧ ಹಿಮಂತ ಬಿಸ್ವಾ ಶರ್ಮಾ ಹಾಗೂ ಪತ್ನಿ ರಿಂಕಿ ಅಸ್ಸಾಂ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಅಸ್ಸಾಂ ಪೊಲೀಸರು ನೆರವಾಗಿ ಪವನ್ ಖೆರಾಗೆ ಹುಡುಕಾಟ ಆರಂಭಿಸಿದ್ದರು. ತೆಲಂಗಾಣಕ್ಕೆ ತೆರಳಿದ ಅಸ್ಸಾಂ ಪೊಲೀಸರಿಗೆ ನಿರಾಸೆಯಾಗಿತ್ತು.
ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಸರಿಯಲ್ಲ ಎಂದು ಅಸ್ಸಾಂ ಪೊಲೀಸರು ವಾದಿಸಿದ್ದರು. ಪ್ರಕರಣ ಅಸ್ಸಾಂನಲ್ಲಿ ದಾಖಲಾಗಿದೆ. ತೆಲಂಗಾಣ ಹೈಕೋರ್ಟ್ ಜಾಮೀನು ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಮಧ್ಯಂತರ ಜಾಮೀನು ರದ್ದುಗೊಳಿಸಬೇಕು ಎಂದು ವಾದಿಸಿತ್ತು. ಈ ವಾದ ಒಪ್ಪಿಕೊಂಡ ಸುಪ್ರೀಂ ಕೋರ್ಟ್, ಜಾಮೀನು ಆದೇಶಕ್ಕೆ ತಡೆ ನೀಡಿ, ಅಸ್ಸಾಂ ಹೈಕೋರ್ಟ್ ಮೊರೆ ಹೋಗಲು ಪವನ್ ಖೆರಾಗೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ