ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗೆ ಸಂಬಂಧಪಟ್ಟ ಎಲ್ಲಾ ಕೇಸ್‌ ಕ್ಲೋಸ್‌: ಸುಪ್ರೀಂ ಕೋರ್ಟ್‌ ನಿರ್ಧಾರ!

By Santosh NaikFirst Published Aug 30, 2022, 1:10 PM IST
Highlights

ಕಳೆದ ಮೂರು ದಶಕಗಳಲ್ಲಿ ಭಾರತ ಕಂಡಂಥ ಅತ್ಯಂತ ಎರಡು ವಿವಾದಿತ ಪ್ರಕರಣಗಳಾದ 1999ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಹಾಗೂ 2002ರ ಗುಜರಾತ್‌ ಗಲಭೆಗೆ ಸಂಬಂಧಪಟ್ಟ ಎಲ್ಲಾ ಮುಕ್ತಾಯ ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಈ ಪ್ರಕರಣದಲ್ಲಿ ಯಾವುದೇ ವಿಚಾರಣೆಯನ್ನು ಮಾಡಲಾಗುವುದಿಲ್ಲ ಎಂದು ಪ್ರಮುಖ ನಿರ್ಧಾರ ಮಾಡಿದೆ.

ನವದೆಹಲಿ (ಆ. 30): 1992ರ ಬಾಬರಿ ಮಸೀದಿ ಧ್ವಂಸ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯಿಂದ ಬಳಿಕ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ. ಈ ಪ್ರಕರಣಗಳು ಈಗ ಕಾಲಾನಂತರದಲ್ಲಿ ನಿರುಪಯುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂಬತ್ತು ಪ್ರಕರಣಗಳಲ್ಲಿ ಎಂಟು ಪ್ರಕರಣಗಳ ವಿಚಾರಣೆ ಮುಗಿದಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಒಂದು ಪ್ರಕರಣದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ. ಇಷ್ಟು ವರ್ಷಗಳ ಬಳಿಕವೂ ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ಇವುಗಳ ವಿಚಾರಣೆಯನ್ನು ಅಂತ್ಯ ಮಾಡುತ್ತಿರುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯುಯು ಲಿಲಿತ್‌ ಅವರಿದ್ದ ಪೀಠ ಮಂಗಳವಾರ ತೀರ್ಪು ನೀಡಿದೆ. ಗುಜರಾತ್ ಗಲಭೆಗೆ ಸಂಬಂಧಿಸಿದ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. ಗುಜರಾತ್ ಗಲಭೆಗೆ ಸಂಬಂಧಿಸಿದ 9 ಪ್ರಕರಣಗಳಲ್ಲಿ 8 ಪ್ರಕರಣಗಳಲ್ಲಿ ಕೆಳ ನ್ಯಾಯಾಲಯಗಳು ತೀರ್ಪು ನೀಡಿವೆ ಎಂದು ಈ ನ್ಯಾಯಾಲಯ ಹೇಳಿದೆ. ನರೋಡಾ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು ಪ್ರತ್ಯೇಕವಾಗಿ ಕೇಳುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಪ್ರಧಾನಿಗೆ ನೀಡಿದ ಕ್ಲೀನ್ ಚಿಟ್ ಅನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌: ಪ್ರಧಾನಿ ಮೋದಿ ವಿರುದ್ಧ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜೂನ್ 24 ರಂದು ವಜಾಗೊಳಿಸಿತ್ತು. 2002ರ ಗುಜರಾತ್ ಗಲಭೆಯಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ ವರದಿಯ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ಝಾಕಿಯಾ ಅವರ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಗುಜರಾತ್‌ನಲ್ಲಿ 2002ರ  ಫೆಬ್ರವರಿ 27 ರಂದು ಗೋಧ್ರಾ ಹತ್ಯಾಕಾಂಡದ ನಂತರ, ಗುಜರಾತ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತು. ಪೂರ್ವ ಅಹಮದಾಬಾದ್‌ನ ಅಲ್ಪಸಂಖ್ಯಾತ ಸಮುದಾಯದ ವಸಾಹತು 'ಗುಲ್ಬರ್ಗ್ ಸೊಸೈಟಿ'ಯನ್ನು ದುಷ್ಕರ್ಮಿಗಳು ಗುರಿಯಾಗಿಸಿಕೊಂಡಿದ್ದರು. ಇದರಲ್ಲಿ ಝಕಿಯಾ ಜಾಫ್ರಿ ಅವರ ಪತಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 38 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಜಾಫ್ರಿ ಸೇರಿದಂತೆ 31 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಬಾಬ್ರಿ ಮಸೀದಿ ಕೇಸ್‌ ಕೂಡ ಕ್ಲೋಸ್‌:  ಇನ್ನು ಬಾಬ್ರಿ ಮಸೀದಿ ಧ್ವಂಸದ ಎಲ್ಲಾ ಪ್ರಕರಣವನ್ನೂ ಸುಪ್ರೀಂ ಕೋರ್ಟ್‌ ಮುಕ್ತಾಯ ಮಾಡಿದೆ. ಅದರೊಂದಿಗೆ ಉಮಾಭಾರತಿ, ಮುರಳಿ ಮನೋಹರ್‌ ಜೋಶಿ, ಸಾಧ್ವಿ ರಿತಂಬರ, ವಿನಯ್‌ ಕಟಿಯಾರ್‌ ಹಾಗೂ ಇತರರ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಬೆನ್ನಲ್ಲಿಯೇ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬಾಬ್ರಿ ರೀತಿ ಗ್ಯಾನವಾಪಿ ಮಸೀದಿ ಕೂಡ ಧ್ವಂಸ: ಬಿಜೆಪಿ ಶಾಸಕ ಎಚ್ಚರಿಕೆ

ಸುಪ್ರೀಂ ಕೋರ್ಟ್‌ನ ವಿಸ್ತ್ರತ ಪೀಠವು ಈಗಾಗಲೇ ಅಯೋಧ್ಯೆ ವಿಷಯದ ಬಗ್ಗೆ ತೀರ್ಪು ನೀಡಿದೆ ಎಂದು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌ ಪೀಠ, 'ಈ ವಿಷಯದಲ್ಲಿ ಈಗ ಏನೂ ಉಳಿದಿಲ್ಲ' ಎಂದು ಹೇಳಿದೆ. "ವಿಸ್ತ್ರತ ಪೀಠದಿಂದ ತೀರ್ಪು ಬಂದಿದೆ. ಈ ವಿಷಯದಲ್ಲಿ ಈಗ ಏನೂ ಉಳಿದಿಲ್ಲ. ನೀವು ಸತ್ತ ಹೊಡೆಯುತ್ತಿದ್ದರೆ ಏನೂ ಪ್ರಯೋಜನವಿಲ್ಲ. ನಾವು ಬರೀ ಹಳೆಯ ವಿಚಾರಗಳನ್ನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡ್ತಿದ್ದೇವೆ. ಇದರಲ್ಲಿ ಕೆಲವು ಉಳಿಯುತ್ತದೆ. ಕೆಲವು ಹೋಗಯತ್ತದೆ. ಇದರ ಪ್ರಮುಖ ವಿಚಾರವನ್ನು ಈಗಾಗಲೇ ವಿಸ್ತ್ರತ ಪೀಠ ತೀರ್ಪು ನೀಡುವ ಮೂಲಕ ನೀಡಿದೆ. ಕೆಲವು ಪ್ರಕರಣದಲ್ಲಿ ಅರ್ಜಿದಾರರೇ ಸಾವು ಕಂಡಿದ್ದಾರೆ. ಪ್ರತಿ ವಾದಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ' ಎಂದು ನ್ಯಾಯಮೂರ್ತಿ ಎಕ್‌ಕೆ ಕೌಲ್‌ ಹೇಳಿದ್ದಾರೆ.

'I am Babri' Badges: ಕೇರಳದ ಶಾಲಾ ಮಕ್ಕಳ ಎದೆ ಮೇಲೆ ನಾನು ಬಾಬ್ರಿ ಬ್ಯಾಡ್ಜ್‌!

ಹಿಂದಿನ ಸಿಜೆಐಗಳ ವಿರುದ್ಧ ಹೇಳಿಕೆಗಾಗಿ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಿದೆ. "ಈ ವಿಚಾರದಲ್ಲಿ ಈಗಾಗಲೇ ಅವರು ಕ್ಷಮಾಪಣೆಯನ್ನು ಕೇಳಿದ್ದಾರೆ. ಆದ್ದರಿಂದ ಇದನ್ನು ಮುಂದುವರಿಸುವುದು ಅಗತ್ಯವೆಂದು ನಮಗೆ ಅನಿಸುವುದಿಲ್ಲ' ಎಂದು ಹೇಳಿದೆ. ಈ ವಿಷಯವು ಭೂಷಣ್ ಅವರ 2009 ರ ಹೇಳಿಕೆಗಳಿಗೆ ಸಂಬಂಧಿಸಿದೆ, ಇದರಲ್ಲಿ ತೆಹಲ್ಕಾ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹಿಂದಿನ ಹಲವಾರು ಸಿಜೆಐಗಳು ಭ್ರಷ್ಟರಾಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

click me!