
ನವದೆಹಲಿ (ಜನವರಿ 12, 2024): ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ‘ಇಂಡಿಯಾ’ ಕೂಟದ ಮಿತ್ರಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಕಸರತ್ತನ್ನು ಮುಗಿಸಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ. ಸೀಟು ಹಂಚಿಕೆಗೆ ಸಂಬಂಧಿಸಿದ ಕಾಂಗ್ರೆಸ್ಸಿನ ರಾಷ್ಟ್ರೀಯ ಮೈತ್ರಿ ಸಮಿತಿಯ ಸಭೆಗೆ ಯಾರನ್ನೂ ಕಳುಹಿಸದೇ ಇರಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಈ ವಿಷಯವನ್ನು ಕಾಂಗ್ರೆಸ್ಸಿಗೂ ತಿಳಿಸಿದೆ. ಇದರಿಂದಾಗಿ ‘ಇಂಡಿಯಾ’ ಕೂಟದಲ್ಲಿ ಹೊಸ ಬಿರುಕು ಸೃಷ್ಟಿಯಾಗಿದೆ.
ಸ್ಥಾನ ಹೊಂದಾಣಿಕೆ ಕುರಿತಂತೆ ಮಾತುಕತೆಗೆ ಬರಲು ಎಲ್ಲ ಮಿತ್ರಪಕ್ಷಗಳಂತೆ ತೃಣಮೂಲ ಕಾಂಗ್ರೆಸ್ ಅನ್ನೂ ಕಾಂಗ್ರೆಸ್ ಆಹ್ವಾನಿಸಿತ್ತು. ಆದರೆ ಯಾರನ್ನೂ ಕಳುಹಿಸದಿರಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದ್ನು ಓದಿ: ರಾಹುಲ್ ಗಾಂಧಿ ವಿಡಿಯೋ ಮಾಡಿದ್ದೇ ಅವಾಂತರಕ್ಕೆ ಕಾರಣ: ಮಿಮಿಕ್ರಿ ಗದ್ದಲಕ್ಕೆ ಮಮತಾ ಬ್ಯಾನರ್ಜಿ ಆರೋಪ
ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಕಾಂಗ್ರೆಸ್ಸಿಗೆ ಕೇವಲ 2 ಸ್ಥಾನವನ್ನು ಬಿಟ್ಟುಕೊಡಲು ಮಮತಾ ಮುಂದಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳು ಇವಾಗಿವೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪಲು ತಯಾರಿಲ್ಲ ಎಂದು ಹೇಳಲಾಗುತ್ತಿದೆ.
ಇದರ ಜತೆಗೆ ಮೇಘಾಲಯದಲ್ಲಿ 1, ಅಸ್ಸಾಂನಲ್ಲಿ ಕನಿಷ್ಠ 2 ಸ್ಥಾನಗಳನ್ನು ಕೇಳುತ್ತಿದೆ. ಗೋವಾದಿಂದಲೂ ಒಂದು ಸ್ಥಾನದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಜೆಡಿಯು ಕೂಡಾ ಕಾಂಗ್ರೆಸ್ ಜೊತೆಗೆ ಯಾವುದೇ ಸೀಟು ಹೊಂದಾಣಿಕೆ ಮಾತುಕತೆ ಇಲ್ಲ. ಕಾಂಗ್ರೆಸ್ ಮಾತುಕತೆ ಏನಿದ್ದರೂ ಆರ್ಜೆಡಿ ಜೊತೆಗೆ ಎಂದು ಹೇಳಿತ್ತು.
ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದ ಸಿಎಂ ಮಮತಾ ಬ್ಯಾನರ್ಜಿ!
ಬಿಹಾರ: 8 ಸೀಟಿಗೆ ಎಡಪಕ್ಷ ಆಗ್ರಹ, ಮತ್ತೆ ಬಿಕ್ಕಟ್ಟು
ಪಟನಾ: ಲೋಕಸಭೆ ಚುನಾವಣೆಯಲ್ಲಿ ಬೇಗುಸರಾಯ್ ಸೇರಿದಂತೆ 8 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಎಡಪಕ್ಷಗಳು ಘೋಷಿಸಿದ್ದು, ಜೆಡಿಯು ಮತ್ತು ಆರ್ಜೆಡಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಜೆಡಿಯು ಮತ್ತು ಆರ್ಜೆಡಿ ಪಕ್ಷಗಳು ತಲಾ 16 ಕ್ಷೇತ್ರಗಳನ್ನು ಹಂಚಿಕೊಂಡಿದ್ದು, ಉಳಿದ 8 ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಿದ್ದವು.
ಆದರೆ ಇದೀಗ ಎಡಪಕ್ಷ 8 ಕ್ಷೇತ್ರಗಳು ತನಗೇ ಬೇಕು ಎಂದು ಪಟ್ಟು ಹಿಡಿದಿದ್ದು, ಸೀಟು ಹಂಚಿಕೆಯಲ್ಲಿ ಮತ್ತೆ ಗೊಂದಲ ಉಂಟಾಗಿದೆ. ಕಾಂಗ್ರೆಸ್ ಸಹ 10 ರಿಂದ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಜೆಡಿಯು, ಆರ್ಜೆಡಿ ಮತ್ತು ಎಡಪಕ್ಷಗಳು ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿದ್ದು, ಇವು ಇಂಡಿಯಾ ಕೂಟದಲ್ಲಿ ಕಾಂಗ್ರೆಸ್ ಜೊತೆಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ