
ಲಖನೌ (ನ.28) ಸಂಭ್ರಮದಲ್ಲಿದ್ದ ಮದುವೆ ಆರತಕ್ಷತೆ ಕಾರ್ಯಕ್ರಮ ಕ್ಷಣಾರ್ಧದಲ್ಲಿ ಆತಂಕದ ಮನೆಯಾಗಿ ಬದಲಾಗಿದೆ. ನವ ಜೋಡಿಗೆ ಶುಭ ಹಾರೈಸುತ್ತಿದ್ದಂತೆ ಇಡೀ ವೇದಿಕೆ ಕುಸಿದಿದೆ. ಇದರ ಪರಿಣಾಮ ಶುಭ ಹಾರೈಸಲು ಬಂದ ಬಿಜೆಪಿ ನಾಯಕರು, ನವ ಜೋಡಿಗಳು ಸೇರಿದಂತೆ ಹಲವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಬಿಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ಮುಖಂಡ ಅಭಿಷೇಕ್ ಸಿಂಗ್ ಎಂಜಿನೀಯರ್ ಸಹೋದರನ ಮದುವೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಸಂಭ್ರಮದಲ್ಲಿ ದಿಢೀರ್ ವೇದಿಕೆ ಕುಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಿಜೆಪಿ ನಾಯಕನ ಸಹೋದರ ಮದುವೆಗೆ ಹಲವು ಬಿಜೆಪಿ ನಾಯಕರು ಆಗಮಿಸಿದ್ದರು. ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರು ಈ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಲವರು ನವ ಜೋಡಿಗೆ ಶುಭ ಹಾರೈಸಿದ್ದಾರೆ. ವೇದಿಕೆ ಮೇಲೆ ಹತ್ತಿ ನವ ಜೋಡಿಗೆ ಶುಭ ಹಾರೈಸಿ ಫೋಟೋ ಕ್ಲಿಕ್ಲಿಸಿದ್ದಾರೆ. ಇದರ ನಡುವೆ ಬಿಜೆಪಿ ಮಾಜಿ ಸಂಸದ ಭಾರತ್ ಸಿಂಗ್ , ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಸಿಂಗ್, ಖುದ್ದು ಅಭಿಷೇಕ್ ಸಿಂಗ್ ಎಂನೀಯರ್ ಸೇರಿದಂತೆ ಪ್ರಮುಖ ನಾಯಕರು ವೇದಿಕೆಗೆ ಆಗಮಿಸಿ ಶುಭಕೋರಲು ಮುಂದಾಗಿದ್ದಾರೆ.
ನವ ಜೋಡಿ ಕೈಕುಲುಕಿ ಶುಭ ಕೋರಿದ ನಾಯಕರು ಬಳಿಕ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಹೆಚ್ಚಿನ ಮಂದಿ ಇದ್ದ ಕಾರಣ ನವ ಜೋಡಿಗಳ ಬದಿ ಹಾಗೂ ಹಿಂಭಾಗದಲ್ಲಿ ನಿಂತಿದ್ದಾರೆ. ಅಷ್ಟರಲ್ಲೇ ವೇದಿಕೆ ಕುಸಿದಿದೆ. ವೇದಿಕೆಯಲ್ಲಿದ್ದ ನವ ಜೋಡಿ ಸೇರಿದಂತೆ ಹಿರಿಯ ನಾಯಕರು ಎಲ್ಲರೂ ಕೆಳಕ್ಕೆ ಕುಸಿದಿದ್ದಾರೆ. ಈ ಘಟನೆಯಲ್ಲಿ ಹಿರಿಯ ಬಿಜೆಪಿ ನಾಯಕ ತೀವ್ರವಾಗಿ ಗಾಯಗೊಂಡಿದ್ದರೆ, ಇತರಿಗೆ ಸಣ್ಮ ಪುಟ್ಟ ಗಾಯಗಳಾಗಿದೆ.
ತಕ್ಷಣವೇ ಕುಟುಂಬಸ್ಥರು ಸೇರದಂತೆ ಸ್ಥಳದಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ. ಕುಸಿದ ವೇದಿಕೆಯಿಂದ ಬಿಜೆಪಿ ನಾಯಕರು, ನವ ಜೋಡಿಗಳನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮದುವೆ ಕಾರ್ಯಕ್ರಮದಿಂದ ನವ ಜೋಡಿ ಆಸ್ಪತ್ರೆ ತೆರಳುವುದು ಉತ್ತಮವಲ್ಲ ಎಂದು ಮಂಟಪದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇನ್ನು ಕೆಲ ಬಿಜೆಪಿ ನಾಯಕರು ಆಸ್ಪತ್ರೆಗೆ ತೆರಳಿದ್ದಾರೆ.
ವೇದಿಕೆ ಕುಸಿದು ಬಿದ್ದ ಬಳಿಕ ಕುಟುಂಬಸ್ಥರು ಈವೆಂಟ್ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೇದಿಕೆ ಸರಿಯಾಗಿ ಮಾಡಿಲ್ಲ. ಕಾಟಾಚಾರಕ್ಕೆ ವೇದಿಕೆ ಮಾಡಲಾಗಿದೆ. ಅಪಾಯದ ಸಂದರ್ಭದ ಕುರಿತು ಆಲೋಚನೆ ಮಾಡಿಲ್ಲ. ಅನಾಹುತ ಸಂಭವಿಸಿದ್ದರೆ ಹೊಣೆ ಯಾರು? ನಷ್ಟವಾಗಿದ್ದರೆ ನಮ್ಮ ಗತಿ ಏನು ಎಂದು ಕುಟುಂಬಸ್ಥರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಾಲಾಗಿದೆ.
ಈ ಘಟನೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವರು ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.ಹೆ ಪ್ರಭು ಏ ಕ್ಯಾಹುವಾ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಅದು ಖಾಸಗಿ ಕಾರ್ಯಕ್ರಮ ಅನ್ನೋದು ಮರೆತ ನಾಯಕರು, ಸರ್ಕಾರಿ ಕಾರ್ಯಕ್ರಮ ಎಂದು ಭಾವಿಸಿದ್ದಾರೆ. ಹೀಗಾಗಿ ಗುಣಮಟ್ಟ ಕಳಪೆಯಾಗಿದೆ. ಬೇರೇನೂ ಸಮಸ್ಯೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ