
ನವದೆಹಲಿ: ಮಾಜಿ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ರಾಜಕೀಯ ಜೀವನದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿರುವ ಸ್ಮೃತಿ ಇರಾನಿ, ಅಮೇಥಿ ಲೋಕಸಭಾ ಕ್ಷೇತ್ರದ ಜೊತೆಗಿನ ಸಂಬಂಧ ಮತ್ತು ಸೋಲಿನ ಬಗ್ಗೆ ಮಾತನಾಡಿದ್ದಾರೆ. ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದ್ದಾರೆ. ಈ ಸಂದರ್ಶನದಲ್ಲಿ ನಾನು ರಾಹುಲ್ ಗಾಂಧಿ ಹಿಂದೆ ಓಡಲಾರೆ ಎಂದು ಹೇಳುವ ಮೂಲಕ ಗಾಂಧಿ ಕುಟುಂಬದ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ವಿರೊಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ, ಆಕ್ರಮಣಕಾರಿಯಾಗಿ ವರ್ತಿಸೋದು ಅಗತ್ಯವಿಲ್ಲ. ಕಾರಣ, 2024ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬ ನನ್ನ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕಿತು. ಗಾಂಧಿ ಕುಟುಂಬ ನನ್ನ ವಿರುದ್ಧ ಸ್ಪರ್ಧಿಸಲು ರಣಭೂಮಿಯನ್ನೇ ಪ್ರವೇಶಿಸಲಿಲ್ಲ. ನಾನು ರಾಹುಲ್ ಗಾಂಧಿ ಹಿಂದೆಯೇ ಓಡಲಾರೆ ಎಂದು ಸ್ಮೃತಿ ಇರಾನಿ ಹೇಳಿದರು. ಈ ಮೂಲಕ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಹೋಗಿ ನಾನು ಸ್ಪರ್ಧೆ ಮಾಡಲು ಆಗಲ್ಲ ಎಂದರು.
ಅಮೇಥಿ ತನ್ನದೇ ವಿಶೇಷ ರಾಜಕೀಯ ಇತಿಹಾಸವನ್ನು ಹೊಂದಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಿ ಶರದ್ ಪವಾರ್, ಮನೇಕಾ ಗಾಂಧಿ ಅವರಂತಹ ದಿಗ್ಗಜ ನಾಯಕರು ಸೋತಿದ್ದಾರೆ. ಇಲ್ಲಿಯ ಸಾಮಾಜಿಕ ಸಮೀಕರಣದ ಲೆಕ್ಕಾಚಾರದ ಪ್ರಕಾರ ಈ ಕ್ಷೇತ್ರವನ್ನು ಗಾಂಧಿ ಕುಟುಂಬ ಆಯ್ದುಕೊಂಡಿತ್ತು. ಹಾಗೆಯೇ ಯಾರು ಸಹ ಸರಳವಾಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲ್ಲ. ಒಂದು ವೇಳೆ ಇಂತಹ ಕ್ಷೇತ್ರದ ಬಿ ಫಾರಂ ನೀಡಿದ್ರೆ ಯಾವುದೇ ನಾಯಕರು ನಿರಾಕರಿಸಲ್ಲ ಎಂದು ಸ್ಮೃತಿ ಇರಾನಿ ಹೇಳುತ್ತಾರೆ.
ನಾನು 2014ರ ಚುನಾವಣೆಯಲ್ಲಿ ಸೋತ್ರೂ ಅಮೇಥಿ ಕ್ಷೇತ್ರದಿಂದ ದೂರ ಹೋಗಿಲ್ಲ. ಅಮೇಥಿಯ ಜನತೆ ಜೊತೆ ಸಂಪರ್ಕದಲ್ಲಿದ್ದೆ. 2014ರಿಂದ 2019ರ ಅವಧಿ ನಡುವೆ ಅಮೇಥಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. 2019ರ ಚುನಾವಣೆಯಲ್ಲಿ ಅಮೇಥಿ ಜನರು ನನ್ನನ್ನು ಸಂಸದೆಯಾಗಿ ಒಪ್ಪಿಕೊಂಡರು. ಒಂದು ವೇಳೆ ಜನರು ನಾನು ಕೆಲಸ ಮಾಡಿಲ್ಲ ನನಗೆ ಹೆಚ್ಚು ನೋವು ಆಗುತ್ತದೆ. ಚುನಾವಣೆಯಲ್ಲಿ ಸೋತರೂ ಇಂದು ಅಮೇಥಿಯ ಜನರು ನನ್ನ ಕೆಲಸಗಳ ಬಗ್ಗೆ ಮಾತನಾಡುತ್ತಾರೆ.
ನಾನು ಅಮೇಥಿಯಲ್ಲಿದ್ದು, ಕ್ಷೇತ್ರದ ಪ್ರತಿಯೊಂದು ಹಳ್ಳಿ, ಬೀದಿ ಬೀದಿಗಳನ್ನು ಸುತ್ತಿ ಚರಂಡಿಯನ್ನು ಸ್ವಚ್ಚಗೊಳಿಸಿದ್ದೇನೆ. ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ. ಕ್ಷೇತ್ರದಲ್ಲಿ 1 ಲಕ್ಷ ಮನೆಗಳು ಮತ್ತು ಮೆಡಿಕಲ್ ಕಾಲೇಜು ಸಹ ಆರಂಭಿಸಿದ್ದೇನೆ ಎಂದು ತಮ್ಮ ಕೆಲಸದ ಮಾಹಿತಿ ನೀಡಿದರು.
ಸಂದರ್ಶನದಲ್ಲಿ ಅಮೇಥಿ ಜನರು ಸೋಲಿಸಿದ್ಯಾಕೆ ಎಂಬ ಪ್ರಶ್ನೆಗೆ ಸ್ಮೃತಿ ಇರಾನಿ ಉತ್ತರಿಸಿದ್ದಾರೆ. ಕೆಲಸ ಮತ್ತು ರಾಜನೀತಿಯ ಸಮೀಕರಣದಲ್ಲಿ ತುಂಬಾ ವ್ಯತ್ಯಾಸ ಇರುತ್ತದೆ. ರಾಜಕೀಯದಲ್ಲಿದ್ದವರು ಈ ಎರಡರ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ರಾಜಕೀಯ ಮತ್ತು ರಾಷ್ಟ್ರನೀತಿಗೂ ಯಾವುದೇ ಸಂಬಂಧ ಇಲ್ಲ. ನಾನು ರಾಷ್ಟ್ರನೀತಿಯಲ್ಲಿ ಸಕ್ರಿಯವಾಗಿದ್ದೆ ಎಂದು ಸೋಲಿನ ಪ್ರಶ್ನೆಗೆ ತೇಲುವ ರೀತಿಯಲ್ಲಿ ಉತ್ತರಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದೇನೆ. ನಂತರ ದಿನಗಳಲ್ಲಿ ನಾನು ಹಲವು ರಾಜಕೀಯ ಸವಾಲುಗಳನ್ನು ಎದುರಿಸಬೇಕಾಯ್ತು. ನನ್ನ ರಾಜಕೀಯ ಜೀವನದ ಹಾದಿ ಸುಲಭವಾಗಿರಲಿಲ್ಲ. ರಾಷ್ಟ್ರ ರಾಜಕಾರಣದಲ್ಲಿದ್ದವರು ರಾಜಕಾರಣ ಅಥವಾ ಮಾಧ್ಯಮದ ಮೂಲಕ ಜನರ ಗಮನ ಸೆಳೆಯುವುದು ಅವಶ್ಯಕ ಎಂದು ಸ್ಮೃತಿ ಇರಾನಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ