
ನವದೆಹಲಿ: ದೇಶದ 9 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ (ಎಸ್ಐಆರ್) ವೇಳಾಪಟ್ಟಿಯನ್ನು 1 ವಾರ ಕಾಲ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ.
ಆಯೋಗ ಈ ಹಿಂದೆ ನೀಡಿದ ಆದೇಶದ ಪ್ರಕಾರ ಡಿ.4ಕ್ಕೆ ಈ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿಯಬೇಕಿತ್ತು. ಆದರೆ ಅದನ್ನು ಇದೀಗ ಡಿ.11ರ ತನಕ ಮುಂದೂಡಿಕೆ ಮಾಡಿದೆ. ಈ ಪ್ರಕಾರ ವಿಶೇಷ ಮತಪಟ್ಟಿಯ ಕರಡುಪಟ್ಟಿಯು ಡಿ.9ರ ಬದಲು 16ಕ್ಕೆ ಪ್ರಕಟವಾಗಲಿದೆ. ಅಂತಿಮ ಮತದಾರ ಪಟ್ಟಿಯು ಮುಂದಿನ ವರ್ಷದ ಫೆಬ್ರವರಿ 14ಕ್ಕೆ ಪ್ರಕಟವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಪರಿಷ್ಕರಣೆಯನ್ನು ಗಡಿಬಿಡಿ ಮಾಡಿ ಮುಗಿಸಲಾಗದು ಎಂದು ಚುನಾವಣಾ ಆಯೋಗಕ್ಕೆ ಈಗ ಅರಿವಾದಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಜೈಪುರ: ದೇಶದಲ್ಲಿ ಬಿಎಲ್ಒಗಳ (ಬೂತ್ ಮಟ್ಟದ ಅಧಿಕಾರಿ) ಸಾವಿನ ಸರಣಿ ಮುಂದುವರಿದಿದೆ. ರಾಜಸ್ಥಾನದಲ್ಲಿ ಓರ್ವ ಬಿಎಲ್ಒ ಕುಸಿದು ಬಿದ್ದು ಸಾವನ್ನಪ್ಪಿದರೆ, ಉತ್ತರ ಪ್ರದೇಶದಲ್ಲಿ ಒಬ್ಬ ಬಿಎಲ್ಒ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಎಸ್ಐಆರ್ ವೇಳೆ ಮೃತಪಟ್ಟ ಸಿಬ್ಬಂದಿ ಸಂಖ್ಯೆ 14ಕ್ಕೇರಿಕೆಯಾಗಿದೆ.
ರಾಜಸ್ಥಾನದ ಧೋಲ್ಪುರದಲ್ಲಿ ಬಿಎಲ್ಒ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ಅನುಜ್ ಗರ್ಗ್ ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿಯೇ ಮತಪಟ್ಟಿ ಪರಿಷ್ಕರಣೆ ಡೇಟಾ ಅಪ್ಲೋಡ್ ಮಾಡುತ್ತಿದ್ದರು. ಈ ವೇಳೆ ಇದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ‘ಅನುಜ್ ಕೆಲಸದೊತ್ತಡದಿಂದ ಬಳಲುತ್ತಿದ್ದರು. ತಡರಾತ್ರಿಯವರೆಗೂ ಎಸ್ಐಆರ್ ಕೆಲಸ ಮಾಡುತ್ತಿದ್ದರು’ ಎಂದು ಕುಟುಂಬಸ್ಥರು ದೂಷಿಸಿದ್ದಾರೆ.ಇನ್ನು ‘ಮತಪಟ್ಟಿ ಪರಿಷ್ಕರಣೆ ಕೆಲಸದ ಒತ್ತಡ ತಾಳಲಾಗುತ್ತಿಲ್ಲ’ ಎಂದು ಪತ್ರ ಬರೆದಿಟ್ಟು ಸಹಾಯಕ ಶಿಕ್ಷಕ ಸರ್ವೇಶ್ ಸಿಂಗ್ (46) ಮೊರಾದಾಬಾದ್ನಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ