ದೇವರಿಗೆ ಧನ್ಯವಾದ ಹೇಳಬೇಕು ಎಂದ ಆಸೀಸ್ ತಜ್ಞ: ಸಿಲ್‌ಕ್ಯಾರ ಸುರಂಗ ಭೂಕುಸಿತ ಸಿನಿಮಾ ಮಾಡಲು ಕ್ಯು!

By Kannadaprabha NewsFirst Published Nov 30, 2023, 8:39 AM IST
Highlights

ಸಿಲ್‌ಕ್ಯಾರ ಸುರಂಗದಿಂದ 41 ಕಾರ್ಮಿಕರ ರಕ್ಷಣೆಯಾದ ಬೆನ್ನಲ್ಲೇ, ಇಡೀ ಘಟನಾವಳಿಗಳ ಕುರಿತು ಚಿತ್ರ ನಿರ್ಮಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಇದಕ್ಕಾಗಿ ‘Rescue’, Rescue-41, and Mission 41- The Great ಶೀರ್ಷಿಕೆಗಳು ಈಗಾಗಲೇ ನೋಂದಣಿಯಾಗಿವೆ.

ನವದೆಹಲಿ: ಸಿಲ್‌ಕ್ಯಾರ ಸುರಂಗದಿಂದ 41 ಕಾರ್ಮಿಕರ ರಕ್ಷಣೆಯಾದ ಬೆನ್ನಲ್ಲೇ, ಇಡೀ ಘಟನಾವಳಿಗಳ ಕುರಿತು ಚಿತ್ರ ನಿರ್ಮಿಸಲು ನಿರ್ಮಾಪಕರು ಮುಂದಾಗಿದ್ದಾರೆ. ‘Rescue’, Rescue-41, and Mission 41- The Great ಶೀರ್ಷಿಕೆಗಳು ಈಗಾಗಲೇ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯ ಹೆಸರಿನ ಇನ್ನಷ್ಟು ಶೀರ್ಷಿಕೆಗಳು ನೋಂದಣಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ದೇವರಿಗೆ ಧನ್ಯವಾದ ಹೇಳಬೇಕು: ಆಸೀಸ್‌ ತಜ್ಞ ಅರ್ನಾಲ್ಡ್‌ ಡಿಕ್ಸ್‌
ನವದೆಹಲಿ: ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಆಸ್ಟ್ರೇಲಿಯಾ ಮೂಲದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್‌ (Arnold Dix) ನಾನು ಈ ಸಂದರ್ಭದಲ್ಲಿ ದೇವರಿಗೆ ಧನ್ಯವಾದವನ್ನು ತಿಳಿಸಬೇಕು ಎಂದಿದ್ದಾರೆ. ಕಾರ್ಯಾಚರಣೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕ್ಸ್‌, ಮೂರು ವಾರಗಳ ಸುದಿರ್ಘ ಕಾರ್ಯಾಚರಣೆಯು ಒಂದು ಪವಾಡದಂತೆ ಸಂಭವಿಸಿತು. ನಾವು ಕೊಟ್ಟ ಮಾತಿನಂತೆ ಕ್ರಿಸ್‌ ಮಸ್‌ ಹಬ್ಬಕ್ಕೂ ಮೊದಲು ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ ಕೊಟ್ಟಿದ್ದೇವೆ. ಎಲ್ಲ ಪಾಲಕರ ಖುಷಿಯಲ್ಲಿ ಭಾಗಿಯಾಗಿರುವುದಕ್ಕೆ ನೆಮ್ಮದಿಯಿದೆ. ಭಾರತದಲ್ಲಿನ ಅತ್ಯತ್ತಮ ಎಂಜಿನಿಯರ್‌ ತಂಡದೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಖುಷಿ ನೀಡಿತು ಎಂದರು. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಸಮಯದಿಂದಲೂ ಸಮೀಪದ ತಾತ್ಕಾಲಿಕ ಮಂದಿರಕ್ಕೆ ಡಿಕ್ಸ್‌ ನಿತ್ಯವೂ ಭೇಟಿ ನೀಡಿ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಸಿಲ್‌ಕ್ಯಾರಾ ಸುರಂಗ ದುರಂತ: 40 ಕಾರ್ಮಿಕರಿಗೆ 17 ದಿನ ಸ್ಥೈರ್ಯ ತುಂಬಿ ಕೊನೆಯದಾಗಿ ಹೊರಬಂದ ಗಬ್ಬರ್ ಸಿಂಗ್

41 ಕಾರ್ಮಿಕರು ಋಷಿಕೇಶದ ಏಮ್ಸ್‌ಗೆ ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ರವಾನೆ

ಉತ್ತರಕಾಶಿ: ಸಿಲ್‌ಕ್ಯಾರ ಸುರಂಗದಿಂದ (Silkyara Tunnel) ರಕ್ಷಿಸಲಾದ 41 ಕಾರ್ಮಿಕರನ್ನು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಋಷಿಕೇಶದ ಆಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಚಿನ್ಯಾಲಿಸೌರ್‌ನಲ್ಲಿದ್ದ ಕಾರ್ಮಿಕರನ್ನು ಚಿನೂಕ್‌ ಹೆಲಿಕಾಪ್ಟರ್‌ ಮೂಲಕ ಏಮ್ಸ್‌ಗೆ ರವಾನಿಸಲಾಗಿದ್ದು, ಮೊದಲಿಗೆ ಅಪಘಾತ ಕೇಂದ್ರದಲ್ಲಿ ತಪಾಸಣೆ ನಡೆಸಿ ನಂತರ ವೈದ್ಯಕೀಯ ಹಾಗೂ ಮಾನಸಿಕ ತಪಾಸಣೆಗೆ ವಿಪತ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಕಾರ್ಮಿಕರ ಸಂಬಂಧಿಕರನ್ನೂ ಸಹ ಬಸ್‌ಗಳ ಮೂಲಕ ಋಷಿಕೇಶದ ಏಮ್ಸ್‌ ಆಸ್ಪತ್ರೆಗೆ ಕರೆತರಲಾಗಿದೆ.

ಗುಡ್ಡದಿಂದ ಸೋರುವ ನೀರು ಕುಡಿದು, ಮಂಡಕ್ಕಿ ತಿಂದು ಮೊದಲ 10 ದಿನಗಳ ವಾಸ!

ನವದೆಹಲಿ: ಸಿಲ್‌ಕ್ಯಾರ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ಜೀವನ್ಮರಣದ ಅಗ್ನಿಪರೀಕ್ಷೆಯನ್ನು ದಾಟಿ ಪವಾಡ ಸದೃಶ ರೀತಿಯಲ್ಲಿ ಗೆದ್ದು ಬಂದಿದ್ದಾರೆ. ಸುರಂಗದಲ್ಲಿ ಸಿಲುಕಿದ್ದ ವೇಳೆ ಬದುಕಿನ ಆಸೆಯೇ ಕಮರಿತ್ತು. 10 ದಿನಗಳ ಕಾಲ ಕೇವಲ ಚುರುಮುರಿ ಮತ್ತು ಗುಡ್ಡದಿಂದ ಸೋರುವ ನೀರನ್ನೇ ಕುಡಿದು ಜೀವ ಉಳಿಸಿಕೊಂಡಿದ್ದೆವು ಎಂದು ಸುರಂಗದಲ್ಲಿ ಸಿಲುಕಿದ್ದ ಬೇಡಿಯಾ ಎಂಬುವವರು ಸುರಂಗದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸುರಂಗದಲ್ಲಿ ಸಿಲುಕಿ ಸುಮಾರು 70 ಗಂಟೆಗಳ ನಂತರ ಹೊರಗಿನಿಂದ ಧ್ವನಿಗಳನ್ನು ಕೇಳಿದ ನಂತರ ಆನಂದವಾಯಿತು. ಅಧಿಕಾರಿಗಳು ನಮ್ಮೊಡನೆ ಸಂಪರ್ಕ ಸಾಧಿಸಿ ಗುಡ್ಡದಿಂದ ನೀರು ಕುಡಿಯುವಂತೆ ಸಲಹೆ ನೀಡಿದರು. ನಮಗೆ ಬೇರೆ ಆಯ್ಕೆ ಇರಲಿಲ್ಲ. 10 ದಿನಗಳ ಕಾಲ ನಾವು ಚುರುಮುರಿ, ನೀರು ಸೇವಿಸಿದೆವು. ಬಳಿಕ ಹಣ್ಣುಗಳು, ಬೇಯಿಸಿದ ಆಹಾರ, ನೀರಿನ ಬಾಟಲಿ ದೊರೆತವು ಎಂದು ಬೇಡಿಯಾ ತಿಳಿಸಿದರು.

ನಾಗ ದೇವರ ತಾಳ್ಮೆ ಕೆಣಕಿದ್ರೆ ಸಿಲ್‌ಕ್ಯಾರಾದಂಥ ದುರಂತಗಳು ನಡೆಯದೇ ಇರುತ್ತಾ?

ಯಂತ್ರಶಕ್ತಿ ಎದುರು ಜಯಿಸಿದ ಮಾನವ ಶಕ್ತಿ

ಲಂಡನ್‌: ಸಿಲ್‌ಕ್ಯಾರ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ ಬೆನ್ನಲ್ಲೇ ಜಾಗತಿಕ ಪತ್ರಿಕೆಗಳು ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾದ ಮಾನವ ಶಕ್ತಿಯನ್ನು ಕೊಂಡಾಡಿವೆ. ಗಾರ್ಡಿಯನ್‌ ಪತ್ರಿಕೆಯು ‘ಕೊನೆಗೂ ಯಂತ್ರಶಕ್ತಿಯ ಮುಂದೆ ಮಾನವಶಕ್ತಿ ಜಯ ಸಾಧಿಸಿದೆ. ಭಾರತದಲ್ಲಿ ಆಗರ್‌ ಯಂತ್ರದ ಕೈಯಲ್ಲಿ ಮಾಡಲಾಗದ ಕೆಲಸವನ್ನು ರ್‍ಯಾಟ್‌ಹೋಲ್‌ ತಜ್ಞರು ಮಾಡಿ ಕಾರ್ಮಿಕರನ್ನು ಹೊರಗೆ ಕರೆತಂದಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.  ಟೆಲಿಗ್ರಾಫ್‌ ಪತ್ರಿಕೆಯೂ ಮಾನವ ಕಾರ್ಯಾಚರಣೆಯ ಮೂಲಕ ಸುರಂಗ ರಕ್ಷಣಾ ಪ್ರಹಸನ ಶುಭಾಂತ್ಯ ಕಂಡಿದೆ ಎಂದು ಬಣ್ಣಿಸಿದೆ. ಇನ್ನು ಬಿಬಿಸಿ ಸುದ್ದಿಸಂಸ್ಥೆಯು ಗಜಪ್ರಸವದಂತಾಗಿದ್ದ ಸುರಂಗ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದ ನಂತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು ಎಂಬುದಾಗಿ ವಿಶ್ಲೇಷಿಸಿದೆ.

click me!