
ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ಬೈಕ್ ರಿಪೇರಿ ಮಾಡಿದ್ದಕ್ಕೆ ಕೂಲಿ ಕೇಳಿದ ಮೆಕ್ಯಾನಿಕ್ ಮೇಲೆ ಸಬ್ ಇನ್ಸ್ಪೆಕ್ಟರ್ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪಾಳಮೇಡು ಎಸ್ಐ ಅಣ್ಣಾದೊರೈ ಈ ಅತಿರೇಕದ ಕೃತ್ಯ ಎಸಗಿದ್ದಾರೆ. ಹಲ್ಲೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನೆಲ್ಲೆ ಎಸ್ಐ ಅಣ್ಣಾದೊರೈಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ದಿಂಡಿಗಲ್ ಮೂಲದ ಶ್ರೀನಿವಾಸ್ ಹಲ್ಲೆಗೊಳಗಾದ ಮೆಕ್ಯಾನಿಕ್.
ಹಲವು ದಿನಗಳಿಂದ ಶ್ರೀನಿವಾಸ್ ಅವರ ಮಧುರೈ ವಾಡಿಪಟ್ಟಿಯಲ್ಲಿರುವ ವರ್ಕ್ಶಾಪ್ಗೆ ಎಸ್ಐ ಅಣ್ಣಾದೊರೈ ಬೈಕ್ ರಿಪೇರಿ ಮಾಡಲು ಬರುತ್ತಿದ್ದರು. ಹಣ ನೀಡದೇ ಹಲವು ಬಾರಿ ಬೈಕ್ ರಿಪೇರಿ ಮಾಡಿಸಿಕೊಂಡಿದ್ದಾರೆ. ಸುಮಾರು 8,000 ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಬಳಸಿ ಎಸ್ಐ ಬೈಕ್ ರಿಪೇರಿ ಮಾಡಿದ್ದರು. ಇಷ್ಟು ದೊಡ್ಡ ಮೊತ್ತದ ಬಿಲ್ ಆದ್ರೂ ಅಣ್ಣಾದೊರೈ ಹಣ ನೀಡಿರಲಿಲ್ಲ. ಕಳೆದ ವಾರ ಮತ್ತೆ ಬೈಕ್ ರಿಪೇರಿ ಮಾಡಿದಾಗ ಎಲ್ಲಾ ಸೇರಿ 10,000 ರೂಪಾಯಿ ಬಿಲ್ ಆಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ಹಣ ನೀಡಿದ್ರೆ ಮಾತ್ರ ಬೈಕ್ ರಿಪೇರಿ ಮಾಡುತ್ತೇನೆ. ಇಲ್ಲವಾದ್ರೆ ಯಾವುದೇ ರಿಪೇರಿ ಮಾಡಲ್ಲ ಎಂದು ಶ್ರೀನಿವಾಸ್ ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ವ್ಯಾಪಾರಸ್ಥ ಮಹಿಳೆಯರ ಮೇಲೆ ಪೊಲೀಸರ ದರ್ಪ
ಶ್ರೀನಿವಾಸ್ ಮಾತಿನಿಂದ ಕೋಪಗೊಂಡ ಎಸ್ಐ ಅಣ್ಣಾದೊರೈ, ಬೈಕ್ ರಿಪೇರಿ ಮಾಡಿ ಇಡಬೇಕು, ಇಲ್ಲದಿದ್ದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ. ಭಾನುವಾರ ಗ್ಯಾರೇಜ್ಗೆ ಅಣ್ಣಾದೊರೈ ಹಿಂದಿರುಗಿ ಬಂದಾಗ, ಬೈಕ್ ರಿಪೇರಿ ಮಾಡದಿರೋದು ಗಮನಕ್ಕೆ ಬಂದಿದೆ. ಇದರಿಂದ ಕೋಪಗೊಂಡ ಅಣ್ಣಾದೊರೈ, ಮೆಕ್ಯಾನಿಕ್ ಕಪಾಳಕ್ಕೆ ಹೊಡೆದು, ಎಸ್ಐ ಮಾತಿಗೆ ಬೆಲೆ ಕೊಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಜೊತೆಯಲ್ಲಿದ್ದ ಸ್ನೇಹಿತನೂ ಬೆದರಿಕೆ ಹಾಕಿದ್ದಾರೆ.
ಎಸ್ಐ ಬೆದರಿಕೆ ನೀಡಿದ ಸಂಬಂಧ ಶ್ರೀನಿವಾಸ್ ನೇರವಾಗಿ ಜಿಲ್ಲಾಧಿಕಾರಿ ಬಳಿ ತೆರಳಿ ಅಣ್ಣಾದೊರೈ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ. ಈ ವಿಷಯ ಮಾಧ್ಯಮಗಳ ವರದಿಯಾಗುತ್ತಿದ್ದಂತೆ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಣ್ಣಾದೊರೈ ಅವರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ; ಯುವತಿ ಕಪಾಳಕ್ಕೆ ಬಾರಿಸಿದ ಮಹಿಳಾ PSI, ಇದೆಂಥಾ ವರ್ತನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ