ರಾಮ ಮಂದಿರ ಲೋಕಾರ್ಪಣೆಗೆ ಗೈರು: ತಾನೂ ಮೋದಿ ಅಭಿಮಾನಿಗಳಲ್ಲಿ ಒಬ್ಬರೆಂದ ಶಂಕರಾಚಾರ್ಯ ಗುರುಗಳು

By BK AshwinFirst Published Jan 22, 2024, 4:15 PM IST
Highlights

ಪ್ರಧಾನಿ ಮೋದಿ ಹಿಂದೂಗಳಿಗೆ ಸ್ವಯಂ ಅರಿವು ಮೂಡಿಸಿದ್ದಾರೆ, ಅದು ಸಣ್ಣ ವಿಷಯವಲ್ಲ. ನಾವು ಮೋದಿ ವಿರೋಧಿ ಅಲ್ಲ, ಅವರ ಅಭಿಮಾನಿಗಳು ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಹೇಳಿದ್ದೇವೆ ಎಂದು ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದ್ದಾರೆ. 

ದೆಹಲಿ (ಜನವರಿ 22, 2024): ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೆ ಶಂಕರಾಚಾರ್ಯ ಗುರುಗಳು ಗೈರಾಗಿದ್ದರು. ಅಲ್ಲದೆ, ಮಂದಿರ ಅಪೂರ್ಣ ಎಂದು ಕರೆದಿದ್ದು, ಅಪೂರ್ಣ ಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆ ಹಲವರು ಇವರನ್ನು ಮೋದಿ ವಿರೋಧಿ ಎಂದು ಕರೆದಿದ್ದರು. ಆದರೆ, ತಾನು ಮೋದಿ ಅಭಿಮಾನಿ ಎಂದಿದ್ದಾರೆ ಸ್ವಾಮಿ ಅವಿಮುಕ್ತೇಶ್ವರಾನಂದ.

ರಾಮಮಂದಿರ ಶಂಕುಸ್ಥಾಪನೆ ಕಾರ್ಯಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಭಾನುವಾರದಂದು ಮಂದಿರವನ್ನು ಅಪೂರ್ಣ ಎಂದು ಕರೆದಿದ್ದಾರೆ. ಆದರೂ, ತಾನು ಪ್ರಧಾನಿ ಮೋದಿ ಅವರ ಅಭಿಮಾನಿಗಳಲ್ಲಿ ಒಬ್ಬರು ಎಂದು ಪುನರುಚ್ಚರಿಸಿದ್ದಾರೆ. ಏಕೆಂದರೆ ಪ್ರಧಾನಿ ಮೋದಿಯಿಂದಾಗಿ ಹಿಂದೂಗಳು ತಮ್ಮ ಸ್ವಾಭಿಮಾನವನ್ನು ಅರಿತುಕೊಂಡಿದ್ದಾರೆ ಎಂದೂ ಶಂಕರಾಚಾರ್ಯ ಗುರೂಜಿ ಹೇಳಿದ್ದಾರೆ.

Latest Videos

ಇದನ್ನು ಓದಿ: ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮನ ದರ್ಶನ, ಮಂದಿರ ಲೋಕಾರ್ಪಣೆಗೊಳಿಸಿ ಮೋದಿ ಭಾಷಣ!

ಸತ್ಯವೆಂದರೆ ಪ್ರಧಾನಿ ಮೋದಿ ಹಿಂದೂಗಳಿಗೆ ಸ್ವಯಂ ಅರಿವು ಮೂಡಿಸಿದ್ದಾರೆ, ಅದು ಸಣ್ಣ ವಿಷಯವಲ್ಲ. ನಾವು ಮೋದಿ ವಿರೋಧಿ ಅಲ್ಲ, ಅವರ ಅಭಿಮಾನಿಗಳು ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಹೇಳಿದ್ದೇವೆ. ಮೋದಿಯಂತೆ ಹಿಂದೂಗಳನ್ನು ಮೊದಲು ಬಲಪಡಿಸಿದ ಭಾರತದ ಇನ್ನೊಬ್ಬ ಪ್ರಧಾನಿಯನ್ನು ಹೆಸರಿಸಿ. ನಾವು ಅನೇಕ ಪ್ರಧಾನ ಮಂತ್ರಿಗಳನ್ನು ಹೊಂದಿದ್ದೇವೆ ಮತ್ತು ಅವರೆಲ್ಲರೂ ಒಳ್ಳೆಯವರಾಗಿದ್ದಾರೆ - ನಾವು ಯಾರನ್ನೂ ಟೀಕಿಸುವುದಿಲ್ಲ ಎಂದೂ ಶಂಕರಾಚಾರ್ಯರು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, ಆರ್ಟಿಕಲ್ 370 ಅನ್ನು ರದ್ದುಗೊಳಿಸಿದಾಗ, ನಾವು ಅದನ್ನು ಸ್ವಾಗತಿಸಲಿಲ್ಲವೇ? ಪೌರತ್ವ ತಿದ್ದುಪಡಿ ಕಾಯ್ದೆ ಬಂದಾಗ ನಾವು ಹೊಗಳಲಿಲ್ಲವೇ? ನಾವು ಪ್ರಧಾನಿ ಮೋದಿಯವರ ಸ್ವಚ್ಛತಾ ಅಭಿಯಾನಕ್ಕೆ ಅಡ್ಡಿ ಮಾಡಿದ್ದೇವೆಯೇ? ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದು ನಾವು ಪ್ರಶಂಸಿಸಿದ್ದೇವೆ ಎಂದೂ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದರು. ಹಾಗೂ, ಹಿಂದೂಗಳು ಬಲಗೊಂಡಾಗ ನಮಗೆ ಸಂತೋಷವಾಗುತ್ತದೆ ಮತ್ತು ನರೇಂದ್ರ ಮೋದಿ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದೂ ಶಂಕರಾಚಾರ್ಯರು ಹೇಳಿದ್ದಾರೆ.

ಶ್ರೀರಾಮ ಪ್ರಸಾದ ಸ್ವೀಕರಿಸುವ ಮೂಲಕ ಪ್ರಾಣಪ್ರತಿಷ್ಠೆಗೆ ಕೈಗೊಂಡ ಉಪವಾಸ ಪೂರ್ಣಗೊಳಿಸಿದ ಮೋದಿ!

ಹಿಂದೂ ಧರ್ಮದ ಪಾಲಕರಾಗಿರೋ ನಾಲ್ವರು ಶಂಕರಾಚಾರ್ಯರು ರಾಮ ಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಸ್ವಾಮಿ ಅವಿಮುಕ್ತೇಶ್ವರಾನಂದರು, ಈ ದೇವಾಲಯವನ್ನು ಅಪೂರ್ಣವಾಗಿದೆ ಮತ್ತು ಆದ್ದರಿಂದ ಅಲ್ಲಿ ನೂತನ ವಿಗ್ರಹದ ಪ್ರಾಣ - ಪ್ರತಿಷ್ಠೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು. ಆದರೆ, ಉದ್ಘಾಟನಾ ಸಮಾರಂಭದ ಸಮಯವನ್ನು ಪ್ರಶ್ನಿಸಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ, ಕೆಲವು ಶಂಕರಾಚಾರ್ಯರು ಕಾರ್ಯಕ್ರಮಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದರು.

ಇನ್ನೊಂದೆಡೆ, ಗರ್ಭಗುಡಿಯಲ್ಲಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಿರುವುದರಿಂದ ಈಗಿರುವ ವಿಗ್ರಹ ಏನಾಗುತ್ತದೆ ಎಂದು ಜ್ಯೋತಿಶ್ ಪೀಠ ಶಂಕರಾಚಾರ್ಯ ಅವರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಅವರಿಗೆ ಜನವರಿ 18 ರಂದು ಪತ್ರ ಬರೆದಿದ್ದಾರೆ. “ಪ್ರಶ್ನೆ ಏನೆಂದರೆ, ಈ ಹೊಸ ವಿಗ್ರಹವನ್ನು ಸ್ಥಾಪಿಸಿದರೆ, ರಾಮ್ ಲಲ್ಲಾ ವಿರಾಜಮಾನನಿಗೆ ಏನಾಗುತ್ತದೆ? ಇಲ್ಲಿಯವರೆಗೆ, ರಾಮಭಕ್ತರು ಲಲ್ಲಾ ವಿರಾಜಮಾನರಿಗಾಗಿ ಹೊಸ ದೇವಾಲಯವನ್ನು ನಿರ್ಮಿಸುತ್ತಿದ್ದಾರೆಂದು ಭಾವಿಸಿದ್ದರು. ಆದರೆ ಈಗ, ದೇವಾಲಯದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಗರ್ಭಗುಡಿಯಲ್ಲಿ ಹೊಸ ವಿಗ್ರಹದ ಸುದ್ದಿಯು ರಾಮ್ ಲಲ್ಲಾ ವಿರಾಜ್‌ಮಾನ್‌ ರನ್ನು ಕಡೆಗಣಿಸಲಾಗುತ್ತದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರಧಾನಿ ಮೋದಿಯಿಂದ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ, 500 ವರ್ಷದ ಹೋರಾಟ ಸಾರ್ಥಕ!

click me!