ಮುಕುಲ್ ರೋಹಟಗಿ ಭಾರತದ ಮುಂದಿನ ಅಟಾರ್ನಿ ಜನರಲ್!

By Santosh NaikFirst Published Sep 13, 2022, 11:59 AM IST
Highlights

ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಎರಡನೇ ಬಾರಿಗೆ ಭಾರತದ ಅಟಾರ್ನಿ ಜನರಲ್ ಆಗಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಅಕ್ಟೋಬರ್ 1 ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.
 

ನವದೆಹಲಿ (ಸೆ. 13): ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಭಾರತದ 14ನೇ ಅಟಾರ್ನಿ ಜನರಲ್‌ ಆಗಿ ಮರಳಲಿದ್ದಾರೆ. ಪ್ರಸ್ತುತ ಅಟಾರ್ನಿ ಜನರಲ್‌ ಆಗಿರುವ ಕೆಕೆ ವೇಣುಗೋಪಾಲ್‌ ತಾವು ಹುದ್ದೆಯಿಂದ ಇಳಿಯುತ್ತಿರುವುದಾಗಿ ಮಾಹಿತಿ ನೀಡಿದ್ದು, ಮುಕುಲ್‌ ರೋಹಟಗಿ ಮತ್ತೊಮ್ಮೆ ಅಟಾರ್ನಿ ಜನರಲ್‌ ಆಗಿ ನೇಮಕ ಘೋಷಣೆ ಮಾಡುವ ಸಾಧ್ಯತೆ ಇದೆ.  ಜೂನ್ 2014 ಮತ್ತು ಜೂನ್ 2017 ರ ನಡುವೆ ಮೊದಲ ಬಾರಿಗೆ ರೋಹಟಗಿ ದೇಶದ ಎಜಿ ಆಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್‌ನಿಂದ 2ನೇ ಅವಧಿಗೆ ಅವರು ಎಜಿ ಆಗಿ ಸೇವೆ ಸಲ್ಲಿಸಲಿದ್ದಾರೆ. ವೇಣುಗೋಪಾಲ್ ಅವರು ಸೆಪ್ಟೆಂಬರ್ 30 ರ ನಂತರ ತಾವು ಅಟಾರ್ನಿ ಜನರಲ್‌ ಹುದ್ದೆಯಲ್ಲಿ ಇರುವುದಿಲ್ಲ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಈ ವರ್ದ ಜೂನ್‌ ಅಂತ್ಯಕ್ಕೆ ಎಜಿ ವೇಣುಗೋಪಾಲ್‌ ಅವರ ಅವಧಿಯನ್ನು ಮೂರು ತಿಂಗಳು ಹಾಗೂ ಮುಂದಿನ ಆದೇಶ ಬರುವವರೆಗೂ ವಿಸ್ತರಣೆ ಮಾಡಲಿದ್ದಾರೆ. ಈ ವಿಸ್ತರಣೆಯ ಅವಧಿ ಸೆ. 30ಕ್ಕೆ ಕೊನೆಗೊಳ್ಳಲಿದೆ. 2017ರ ಜುಲೈ 1 ರಂದು ವೇಣುಗೋಪಾಲ್‌ ಅವರನ್ನು ದೇಶದ ಅಟಾರ್ನಿ ಜನರಲ್‌ ಆಗಿ ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗಿತ್ತು. ಇವರ ನಿಗದಿತ ಅವಧಿ ಮುಗಿದ ಬಳಿಕ ಎರಡು ಬಾರಿ ತಲಾ ಒಂದೊಂದು ವರ್ಷಕ್ಕೆ ಅವಧಿ ವಿಸ್ತರಣೆ ಮಾಡಲಾಗಿತ್ತು.

ಅಟಾರ್ನಿ ಜನರಲ್‌ ಎನ್ನುವುದು ದೇಶದ ಉನ್ನತ ಕಾನೂನು ಅಧಿಕಾರಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಪರವಾಗಿ ವಾದ ಮಾಡಲಿರುವ ಉನ್ನತ ವಕೀಲರಾಗಿರುತ್ತಾರೆ. 67 ವರ್ಷದ ಮುಕುಲ್‌ ರೋಹಟಗಿ 2014 ರಿಂದ 2017ರವರೆಗೆ ದೇಶದ ಅಟಾರ್ನಿ ಜನರಲ್‌ ಆಗಿ ಮೂರು ವರ್ಷದ ಅವಧಿಗೆ ನೇಮಕವಾಗಿದ್ದರು. 2017ರ ಜೂನ್‌ನಲ್ಲಿ ವೈಯಕ್ತಿಕ ಕಾರಣ ನೀಡಿ ಎಜಿ ಹುದ್ದೆಯನ್ನು ತೊರೆದಿದ್ದರು. ಆ ಬಳಿಕ, ಖಾಸಗಿಯಾಗಿ ವಕೀಲಿಕೆಯನ್ನು ಮಾಡುತ್ತಿದ್ದರು.

ರೋಹಟಗಿ ಅವರ ರಾಜೀನಾಮೆಯ ನಂತರ, ಹಿರಿಯ ವಕೀಲ ಮತ್ತು ಹಿರಿಯ ಕಾನೂನು ದಿಗ್ಗಜ ಕೆ.ಕೆ.ವೇಣುಗೋಪಾಲ್ ಅವರನ್ನು 2017ರ ಜುಲೈ 1 ರಿಂದ ಅಟಾರ್ನಿ ಜನರಲ್ ಆಗಿ ನೇಮಿಸಲಾಯಿತು. ವೇಣುಗೋಪಾಲ್ ಅವರು ಐದು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರವನ್ನು ಸಮರ್ಥಿಸಿಕೊಂಡಿದ್ದರು.  ಈ ವರ್ಷದ ಜೂನ್‌ನಲ್ಲಿ ವೇಣುಗೋಪಾಲ್ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಲು ಸಮಯ ನೀಡುವಂತೆ ಕೇಂದ್ರವು ವೇಣುಗೋಪಾಲ್ ಅವರ ಸೇವಾವಧಿಯನ್ನು ಹೆಚ್ಚುವರಿ ಮೂರು ತಿಂಗಳು ವಿಸ್ತರಿಸಲು ಮನವಿ ಮಾಡಿತ್ತು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು.

ಮುಕುಲ್ ರೋಹಟಗಿ-ಸತೀಶ್ ಮನೇಶಿಂದೆ: ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಡುತ್ತಿರುವ ಲಾಯರ್ಸ್!

ವೇಣುಗೋಪಾಲ್ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಅಧಿಕೃತವಾಗಿ ಕೊನೆಗೊಳ್ಳಲಿದ್ದು, ಅಕ್ಟೋಬರ್ 1 ರಿಂದ ರೋಹಟಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ. ಸಚಿವರ ಮೂಲಗಳು ಮತ್ತು ರೋಹಟಗಿ ಅವರ ನಿಕಟವರ್ತಿಗಳು ಈ ವಿಷಯದ ಬಗ್ಗೆ ಚರ್ಚಿಸಲು ಕಳೆದ ವಾರ ಸಭೆ ನಡೆಸಿದ್ದು, ನಂತರ ರೋಹಟಗಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸೂಚಿಸಿದ್ದಾರೆ. 2017ರಲ್ಲಿ ಮುಕುಲ್‌ ರೋಹಟಗಿ ಎಜಿ ಪದವಿಯನ್ನು ತೊರೆದರೂ,  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿದಂತೆ ಸೂಕ್ಷ್ಮ ಕಾನೂನು ವಿಷಯಗಳ ಕುರಿತು ಸರ್ಕಾರವು ಅವರೊಂದಿಗೆ ಸಮಾಲೋಚನೆ ನಡೆಸಿಯೇ ತೀರ್ಮಾನ ತೆಗೆದುಕೊಂಡಿತ್ತು.

ಅನರ್ಹ ಪರ ಮುಕುಲ್ ರೋಹಟಗಿ ವಾದ ಅಂತ್ಯ: ಒಂದುವರೆ ತಾಸು ವಾದದ ಹೈಲೆಟ್ಸ್

ಭಾರತದ ಅತ್ಯಂತ ಉನ್ನತ ವಕೀಲರಲ್ಲಿ ಒಬ್ಬರಾದ ರೋಹಟಗಿ ಅವರು ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ ಗುಜರಾತ್ ಗಲಭೆ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ವಾದ ಮಾಡಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ಪ್ರಕರಣವನ್ನೂ ಅವರು ವಾದಿಸಿದರು. ತೀರಾ ಇತ್ತೀಚೆಗೆ, ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ಬಂಧಿತರಾದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

click me!