ವಲಸಿಗ ಕಾರ್ಮಿಕರ ನೆರವಿಗೆ ಧಾವಿಸಲು ರಾಜ್ಯಗಳಿಗೆ ಗಡುವು!

By Suvarna NewsFirst Published Jun 10, 2020, 12:11 PM IST
Highlights

ಕಾರ್ಮಿಕರಿಗೆ ಮತ್ತೆ ಸುಪ್ರೀಂ ಅಭಯ| ವಲಸಿಗ ಕಾರ್ಮಿಕರ ನೆರವಿಗೆ ಧಾವಿಸಲು ರಾಜ್ಯಗಳಿಗೆ ಗಡುವು| 15 ದಿನದಲ್ಲಿ ತವರಿಗೆ, ಸೂಕ್ತ ಉದ್ಯೋಗ, ಪ್ರಕರಣ ವಾಪಸ್‌

ನವದೆಹಲಿ(ಜೂ.10): ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ವಲಸೆ ಕಾರ್ಮಿಕರ ನೆರವಿಗೆ ಮತ್ತೊಮ್ಮೆ ಧಾವಿಸಿರುವ ಸುಪ್ರೀಂ ಕೋರ್ಟ್‌, ಗುಳೆ ಬಂದಿದ್ದ ವಲಸೆ ಕಾರ್ಮಿಕರನ್ನು 15 ದಿನಗಳ ಒಳಗಾಗಿ ಅವರವರ ತವರಿಗೆ ಕಳುಹಿಸಿಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಅಲ್ಲದೆ, ಗ್ರಾಮಗಳಿಗೆ ಮರಳಿದ ಬಳಿಕ ವಲಸೆ ಕಾರ್ಮಿಕರ ನೈಪುಣ್ಯತೆಗೆ ಹೊಂದುವ ಹುದ್ದೆ ಹಾಗೂ ಅವರಿಗೆ ಸರ್ಕಾರದ ಕಲ್ಯಾಣ ಯೋಜನೆ ತಲುಪಿಸಬೇಕು. ಇದಕ್ಕಾಗಿ ಸರ್ಕಾರಗಳು ವಲಸೆ ಕಾರ್ಮಿಕರ ನೋಂದಣಿಯನ್ನಿಟ್ಟುಕೊಳ್ಳಬೇಕು. ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಮಾಹಿತಿಯನ್ನು ದಿನ ಪತ್ರಿಕೆಗಳು ಮತ್ತು ವಾಹಿನಿಗಳಲ್ಲಿ ಜಾಹೀರಾತು ಮೂಲಕ ಪ್ರತಿಯೊಬ್ಬರಿಗೂ ಈ ಮಾಹಿತಿ ತಲುಪುವಂತೆ ನೋಡಿಕೊಳ್ಳಬೇಕು. ಲಾಕ್‌ಡೌನ್‌ ಉಲ್ಲಂಘನೆ ಕಾರಣಕ್ಕಾಗಿ ವಲಸೆ ಕಾರ್ಮಿಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜಡಿಯಲಾದ ಎಲ್ಲ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಪರಿಶೀಲಿಸಬೇಕು. ಕಾರ್ಮಿಕರನ್ನು ತವರಿಗೆ ಸೇರಿಸಲು ರಾಜ್ಯಗಳು ಕೋರುವ ಹೆಚ್ಚುವರಿ ರೈಲುಗಳನ್ನು 24 ಗಂಟೆಯಲ್ಲಿ ಕಲ್ಪಿಸಬೇಕು ಎಂದು ಸೂಚಿಸಿದ ನ್ಯಾಯಾಲಯ, ಈ ಕುರಿತಾದ ಮತ್ತಷ್ಟುವಿಚಾರಣೆಯನ್ನು ಜುಲೈಗೆ ಮುಂದೂಡಿದೆ.

ಹೊರರಾಜ್ಯಗಳಿಗೆ ತೆರಳಲು ಅವಕಾಶ: ನೋಂದಣಿ ಆರಂಭ

ಎಷ್ಟುರೈಲು ಬೇಕು ತಿಳಿಸಿ: ವಲಸೆ ಕಾರ್ಮಿಕರನ್ನು ತವರಿಗೆ ಸೇರಿಸಲು ರಾಜ್ಯಗಳು ಕೋರಿದ 24 ಗಂಟೆಯೊಳಗೆ ರೈಲು ಪೂರೈಸಬೇಕೆಂಬ ಸುಪ್ರೀಂ ನಿರ್ದೇಶನದ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಇನ್ನೆಷ್ಟುರೈಲುಗಳು ಬೇಕಾಗಬಹುದು ಎಂಬುದರ ಮಾಹಿತಿ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರೈಲ್ವೆ ಇಲಾಖೆ ಸೂಚನೆ ನೀಡಿದೆ.

ಕೇಂದ್ರಕ್ಕೆ ಸುಪ್ರೀಂ ನಿರ್ದೇಶನಗಳು

ರಾಜ್ಯಗಳು ಕೋರಿದ 24 ಗಂಟೆಯಲ್ಲಿ ರೈಲು ವ್ಯವಸ್ಥೆ ಕಲ್ಪಿಸಬೇಕು

ರೈಲು ಪ್ರಯಾಣದ ವೇಳೆ ಕಾರ್ಮಿಕರಿಗೆ ಉಚಿತ ಆಹಾರ ನೀಡಬೇಕು

ಲಾಕ್ಡೌನ್‌ ಉಲ್ಲಂಘಿಸಿದ ಕಾರ್ಮಿಕರ ಮೇಲಿನ ಕೇಸ್‌ ಹಿಂಪಡೆಯಿರಿ

ಕಲ್ಯಾಣ ಯೋಜನೆಗಳ ಜಾಹೀರಾತುಗಳು ದಿನಪತ್ರಿಕೆ, ವಾಹಿನಗಳಲ್ಲಿ ಪ್ರಕಟವಾಗ್ಬೇಕು

ಊರು ತಲುಪಿದ ಬಳಿಕ ಕಾರ್ಮಿಕರಿಗೆ ಉದ್ಯೋಗ, ಆಹಾರ ವ್ಯವಸ್ಥೆಯೂ ಕಲ್ಪಿಸಿ

ಸರ್ಕಾರದ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬರಿಗೂ ಮುಟ್ಟುವಂತೆ ನೋಡಿಕೊಳ್ಳಿ

ಕೆಲಸಕ್ಕೆ ಪುನಃ ನಗರಕ್ಕೆ ಮರಳಲಿಚ್ಚಿಸುವವರಿಗೆ ಸಹಾಯ ಕೇಂದ್ರ ರಚನೆ ಮಾಡಿ

ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್‌ಗೆ ಪೊಲೀಸರ ಬ್ರೇಕ್!

ಸುಪ್ರೀಂಗೆ ಕೇಂದ್ರದ ಸರ್ಕಾರದ ಉತ್ತರಗಳು

ಜೂ.3ರವರೆಗೆ 4200 ಶ್ರಮಿಕ್‌ ವಿಶೇಷ ರೈಲುಗಳ ಸಂಚಾರ

ಒಟ್ಟಾರೆ 1 ಕೋಟಿಗಿಂತ ಹೆಚ್ಚು ವಲಸೆ ಕಾರ್ಮಿಕರನ್ನು ತವರಿಗೆ ಕಳಿಸಿದ್ದೇವೆ

ಇತರೆ ರಾಜ್ಯಗಳಲ್ಲಿ ಸಿಲುಕಿದ ಕಾರ್ಮಿಕರ ಮಾಹಿತಿ ಕ್ರೋಢೀಕರಣ

ರಾಜ್ಯ ಸರ್ಕಾರಗಳು ಕೋರುವಷ್ಟುರೈಲು ಪೂರೈಸಲು ಸಿದ್ಧರಿದ್ದೇವೆ

click me!