
ನವದೆಹಲಿ: ಹರ್ಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ಮುಟ್ಟಿನ ರಜೆ ನೀಡಲು ಪರೀಕ್ಷೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ‘ಕರ್ನಾಟಕದಲ್ಲಿಯೂ ಮುಟ್ಟಿನ ರಜೆಗೆ ಆದೇಶವಾಗಿದೆ. ಇದನ್ನು ನೋಡಿ ಅಲ್ಲೂ ಮುಟ್ಟಾಗಿದ್ದಕ್ಕೆ ಸಾಕ್ಷಿ ಕೇಳುತ್ತಾರೆಯೇ‘ ಎಂದು ಪ್ರಶ್ನಿಸಿದೆ.
ವಿವಿಯಲ್ಲಿ ಋತುಚಕ್ರದಲ್ಲಿದ್ದ ಕಾರ್ಮಿಕರಿಗೆ ಖಾಸಗಿ ಅಂಗದ ಫೋಟೋವನ್ನು ಸಾಕ್ಷಿಯಾಗಿ ಕೇಳಲಾಗಿತ್ತು. ಇದರ ವಿರುದ್ಧ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರು,‘ಕರ್ನಾಟಕದಲ್ಲಿಯೂ ಮಹಿಳೆಯರಿಗೆ ಮುಟ್ಟಿನ ರಜೆ ಎಂದು ಕೊಡುತ್ತಾರೆ. ನನಗೆ ಈ ಅರ್ಜಿಯನ್ನು ನೋಡಿದ ಬಳಿಕ ಅಲ್ಲಿಯೂ ಈ ರೀತಿ ಮುಟ್ಟಿನ ರಜೆಗೆ ಸಾಕ್ಷಿ ಕೇಳುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ’ ಎಂದು ಹೇಳಿದರು. ‘ಓರ್ವ ವ್ಯಕ್ತಿ ಇಲ್ಲದಿದ್ದಾಗ, ಅವರ ಬದಲಿಗೆ ಯಾರನ್ನಾದರು ನೇಮಿಸಿಕೊಳ್ಳಬೇಕು. ಈ ಘಟನೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು.
ಹೆಣ್ಣು ಮಕ್ಕಳ ಆರೋಗ್ಯ, ಘನತೆ, ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಕೆಲಸದ ಸ್ಥಳಗಳಲ್ಲಿ 'ಋತುಚಕ್ರವನ್ನು ಅವಮಾನಿಸುವ' ಘಟನೆಗಳ ಬಗ್ಗೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು ಮತ್ತು ಇದು ಜನರ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿತು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕೇಂದ್ರ ಮತ್ತು ಅದರ ಸಂಬಂಧಿತ ಸಚಿವಾಲಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, 'ಪೀರಿಯಡ್ ಅವಮಾನ' ಪ್ರಕರಣಗಳು ಹಲವು ನಡೆದಿವೆ ಎಂದು ನ್ಯಾಯಾಲಯಕ್ಕೆ ಮನದಟ್ಟು ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವಂತೆ ಮನವಿ ಮಾಡಿತು.
SCBA ಅಧ್ಯಕ್ಷ ವಿಕಾಸ್ ಸಿಂಗ್ ಮತ್ತು ಅಪರ್ಣಾ ಭಟ್ ಮತ್ತು ಪ್ರಜ್ಞಾ ಬಾಘೇಲ್ ಸೇರಿದಂತೆ ಇತರ ಪದಾಧಿಕಾರಿಗಳು ಕೆಲಸದ ಸ್ಥಳ ಜೊತೆಗೆ ಇತರ ಕಡೆಗಳಲ್ಲಿ ಜಾಗೃತಿ ಬೆಳೆಸುವ ಮತ್ತು ಮಹಿಳೆಯರ ಆರೋಗ್ಯದ ಹಕ್ಕನ್ನು ಎತ್ತಿಹಿಡಿಯುವ ಉದ್ದೇಶದಿಂದ ಭಾರತದಾದ್ಯಂತ ಜಾರಿಗೊಳಿಸಬಹುದಾದ ಮಾರ್ಗಸೂಚಿಗಳ ತುರ್ತು ಅವಶ್ಯಕತೆಯಿದೆ ಎಂದು ನ್ಯಾಯಾಲಯಕ್ಕೆ ಮನದಷ್ಟು ಮಾಡಿದರು. ಹರಿಯಾಣ ಘಟನೆಯು ಒಂದೇ ಅಲ್ಲ ದೇಶಾದಾದ್ಯಂತ ಅಂತಹ ಅನೇಕ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ಮಹಿಳೆಯರು ಮತ್ತು ಹುಡುಗಿಯರನ್ನು ಮುಟ್ಟಾಗುತ್ತಿದ್ದಾರೆಯೇ ಎಂದು ಪರಿಶೀಲಿಸಲು ವಿವಿಧ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಆಕ್ರಮಣಕಾರಿ ಮತ್ತು ಅವಮಾನಕರ ತಪಾಸಣೆಗೆ ಒಳಪಡಿಸುವ ಈ ಘಟನೆಗಳು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅವರ ಜೀವನ, ಘನತೆ, ಗೌಪ್ಯತೆ ಮತ್ತು ದೈಹಿಕ ಸಮಗ್ರತೆಯ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಮಹಿಳಾ ಕಾರ್ಮಿಕರು, ವಿಶೇಷವಾಗಿ ಅಸಂಘಟಿತ ಕಾರ್ಮಿಕರು, ತಮ್ಮ ನಿಸರ್ಗದತ್ತ ಕೊಡುಗೆಯನ್ನು ಗೌರವಿಸುವ ಮತ್ತು ಮುಟ್ಟಿನ ಸಂಬಂಧಿತ ನೋವು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿರುವಾಗ ಅವಮಾನಕರ ತಪಾಸಣೆಗಳಿಗೆ ಒಳಪಡದಂತೆ ಸಾಕಷ್ಟು ರಿಯಾಯಿತಿಗಳಿಗೆ ಅವಕಾಶ ನೀಡುವ ಯೋಗ್ಯ ಕೆಲಸದ ಪರಿಸ್ಥಿತಿಗಳ ಹಕ್ಕನ್ನು ಹೊಂದಿದ್ದಾರೆ ಎಂದು SCBA ತನ್ನ ಅರ್ಜಿಯಲ್ಲಿ ಒತ್ತಿ ಹೇಳಿದೆ.
SCBA ತನ್ನ ಅರ್ಜಿಯಲ್ಲಿ ಮಹಿಳೆಯರ ಆರೋಗ್ಯದ ಪರ ನಿಂತಿರುವುದಕ್ಕೆ ಸುಪ್ರೀಂ ಕೋರ್ಟ್ ಶ್ಲಾಘಿಸಿತು.ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಘಟನೆಗೆ ಕಾರಣರಾದ ಇಬ್ಬರು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹರಿಯಾಣ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ