
ನವದೆಹಲಿ (ನ.03) ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿ ಪ್ರಯಾಣಿಕರ ಹೊತ್ತು ದೆಹಲಿಯತ್ತ ಹಾರಾಟ ಆರಂಭಿಸಿದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೋಲ್ಕತಾ ಮಾರ್ಗವಾಗಿ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ಸಮಸ್ಯೆ ಪತ್ತೆಯಾಗುತ್ತಿದ್ದಂತೆ ಪೈಲೆಟ್ ಎಮರ್ಜೆನ್ಸಿ ಕಾಲ್ ನೀಡಿದ್ದಾರೆ. ಪರಿಣಾಮ ಮಂಗೋಲಿಯಾದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿ ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಬೋರ್ಡಿಂಗ್ ಆಗಿದ್ದಾರೆ. ಸಿಬ್ಬಂದಿಗಳು ಎಲ್ಲಾ ಪ್ರಯಾಣಿಕರ ತಪಾಸಣೆ ಪ್ರಕ್ರಿಯೆ ಮುಗಿಸಿ ಬೋರ್ಡಿಂಗ್ ಆಗಿದ್ದಾರೆ. ತಕ್ಕ ಸಮಯಕ್ಕೆ ಏರ್ ಇಂಡಿಯಾ ವಿಮಾನ ಸ್ಯಾನ್ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ ಕೆಲ ಗಂಟೆಗಳ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.
ಟೇಕ್ ಆಫ್ಗೆ ಮೊದಲು ಭಾರತೀಯ ನಾಗರೀಕ ವಿಮಾನಯಾನ ಸಂಸ್ಥೆ ಮಾರ್ಗಸೂಚಿ ಪ್ರಕಾರ ತಪಾಸಣೆ ನಡೆಸಲಾಗಿದೆ. ತಜ್ಞರ ಕ್ಲಿಯೆರನ್ಸ್ ಬಳಿಕ ವಿಮಾನ ಟೇಕ್ ಆಫ್ ಆಗಿದೆ. ಆದರೆ ಹಾರಾಟದಲ್ಲಿ ಸಮಸ್ಯೆ ಉದ್ಭವಿಸಿದೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಪೈಲೆಟ್ ಎಮರ್ಜೆನ್ಸಿ ಕಾಲ್ ನೀಡಿದ್ದಾರೆ. ಏರ್ ಇಂಡಿಯಾ ವಿಮಾನ ಇನ್ನೂ ಭಾರತ ಗಡಿ ಪ್ರವೇಶಿಸಿರಲಿಲ್ಲ. ಕೋಲ್ಕಾತ ಮಾರ್ಗವಾಗಿ ದೆಲಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವನ್ನು ತಕ್ಷಣವೇ ಏರ್ ಕಂಟ್ರೋಲ್ ಮಂಗೋಲಿಯಾದಲ್ಲಿ ಲ್ಯಾಂಡಿಂಗ್ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೀಗಾಗಿ ತಕ್ಷಣವೇ ಮಂಗೋಲಿಯಾದ ಉಲಾನ್ ಬಟಾರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
ಏರ್ ಇಂಡಿಯಾ ವಿಮಾನದ ತಾಂತ್ರಿಕ ದೋಷ, ಎಮರ್ಜೆನ್ಸಿ ಲ್ಯಾಂಡಿಂಗ್ ಕುರಿತು ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ತಾಂತ್ರಿಕ ಕಾರಣಗಳಿಂದ ವಿಮಾನ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಯಶಸ್ವಿಯಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದಿದೆ.
ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಗಳು ತಾಂತ್ರಿಕ ಸಮಸ್ಯೆಗಳ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲು ವಿಮಾನಯಾನ ಸಚಿವಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಹಲವು ತಪಾಸಣೆ, ತಾಂತ್ರಿಕ ತಜ್ಞರಿಂದ ತಪಾಸಣೆ ಸೇರಿದಂತೆ ಕಟ್ಟು ನಿಟ್ಟಿನ ಆದೇಶ ಪಾಲಿಸಲು ಸೂಚನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ