
ಮುಂಬೈ (ಮೇ.14): ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಬಾಲಿವುಡ್ ಕಿಂಗ್ ಖಾನ್, ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸದೇ ಇರಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಸಿಬಿಐ ದಾಳಿಯಾಗಿದೆ. ಇದರ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಅವರು, ದೇಶಭಕ್ತನಾಗಿ ಕೆಲಸ ಮಾಡಿದ್ದಕ್ಕೆ ನನಗೆ ಸಿಕ್ಕಿರುವ ಶಿಕ್ಷೆ ಎಂದು ಹೇಳಿದ್ದಾರೆ. ವಾಂಖೆಡೆ ಅವರ ನಿವಾಸ ಮತ್ತು ಇತರ ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ ಶುಕ್ರವಾರ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದಾಗ 18 ಸಿಬಿಐ ಅಧಿಕಾರಿಗಳ ತಂಡ ತಮ್ಮ ಮನೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ಸಮೀರ್ ವಾಂಖೆಡೆ ಆರೋಪಿಸಿದ್ದಾರೆ. 'ನಾನು ದೇಶಪ್ರೇಮಿ ಆಗಿರೋದಕ್ಕೆ ಬಹುಮಾನ ಪಡೆಯುತ್ತಿದ್ದೇನೆ, ನಿನ್ನೆ 18 ಸಿಬಿಐ ಅಧಿಕಾರಿಗಳು ನನ್ನ ನಿವಾಸದ ಮೇಲೆ ದಾಳಿ ಮಾಡಿ 12 ಗಂಟೆಗಳಿಗೂ ಹೆಚ್ಚು ಕಾಲ, ನನ್ನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದಾಗ ಶೋಧ ನಡೆಸಿದರು. ಅವರಿಗೆ 23,000 ರೂ. ಮತ್ತು ನಾಲ್ಕು ಆಸ್ತಿ ಪತ್ರಗಳು ಸಿಕ್ಕಿವೆ. ಈ ಆಸ್ತಿಯನ್ನು ನಾನು ಸೇವೆಗೆ ಸೇರಿಕೊಳ್ಳುವ ಮುನ್ನವೇ ಸಂಪಾದಿಸಿದ್ದಾಗಿದೆ' ಎಂದು ವಾಂಖೆಡೆ ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳು ತಮ್ಮ ಪತ್ನಿ ಕ್ರಾಂತಿ ರೆಡ್ಕರ್ ಅವರ ಫೋನ್ ಅನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಮೀರ್ ವಾಂಖೆಡೆ ಹೇಳಿದ್ದಾರೆ. ಸಮೀರ್ ಅವರ ಸಹೋದರಿ ಯಾಸ್ಮಿನ್ ವಾಂಖೆಡೆ ಅವರ ಮನೆಯಿಂದ 28,000 ರೂ. ಮತ್ತು ಅವರ ತಂದೆ ಜ್ಞಾನೇಶ್ವರ್ ವಾಂಖೆಡೆ ಅವರ ಮನೆಯಿಂದ 28,000 ರೂ.ಗಳನ್ನು ಸಿಬಿಐ ವಶಪಡಿಸಿಕೊಂಡಿದೆ. ವಾಂಖೆಡೆ ಅವರ ಮಾವನ ಮನೆಯಿಂದ 1800 ರೂಪಾಯಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಆರ್ಯನ್ ಖಾನ್ ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿ ಅವರ ಮತ್ತು ಇತರ ಮೂವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ನಂತರ ಸಿಬಿಐ ಶುಕ್ರವಾರ ದೇಶಾದ್ಯಂತ 29 ಸ್ಥಳಗಳಲ್ಲಿ ಶೋಧ ನಡೆಸಿತು. ಆರ್ಯನ್ ಖಾನ್ ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಮುಂಬೈನ ಮಾಜಿ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿದೆ.
ಶಾರುಖ್ ಮಗನ ಬಂಧಿಸಿದ್ದ ಸಮೀರ್ ವಾಂಖೇಡೆಗೆ ಸಿಬಿಐ ಬಿಸಿ
ಮುಂಬೈ, ದೆಹಲಿ, ರಾಂಚಿ (ಜಾರ್ಖಂಡ್) ಮತ್ತು ಕಾನ್ಪುರ (ಉತ್ತರ ಪ್ರದೇಶ) 29 ಸ್ಥಳಗಳಲ್ಲಿ ಸಂಸ್ಥೆ ದಾಳಿ ನಡೆಸಿದೆ. ಸಮಿರ್ ವಾಂಖೆಡೆ ಕಾರ್ಡೆಲಿಯಾ ಕ್ರೂಸ್ ಮೇಲೆ ದಾಳಿ ನಡೆಸಿದ್ದರು ಮತ್ತು ಮಾದಕವಸ್ತು ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದರು.
ಪಾಕ್ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ: ಪಾಕಿಸ್ತಾನಕ್ಕೆ ಹೋಗು ಅಂದ್ರು ನೆಟ್ಟಿಗರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ