RSS ದಸರಾ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿ ಮುಖ್ಯ ಅತಿಥಿಯಾದ ಮಹಿಳೆ

By BK AshwinFirst Published Oct 5, 2022, 11:39 AM IST
Highlights

ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್‌ ವಿಜಯದಶಮಿ ಸಮಾರಂಭದಲ್ಲಿ ಮಹಿಳೆಯೊಬ್ಬರು ಮುಖ್ಯ ಅತಿಥಿಯಾಗಿದ್ದಾರೆ. ಹೌದು, ಖ್ಯಾತ ಮಹಿಳಾ ಪರ್ವತಾರೋಹಿ ಸಂತೋಷ್‌ ಯಾದವ್‌ ಆರ್‌ಎಸ್‌ಎಸ್‌ ದಸರಾ ಕಾರ್ಯಕ್ರಮದ ಅತಿಥಿ. 

ಆರ್‌ಎಸ್‌ಎಸ್‌ (RSS) ಮುಖ್ಯ ಕಚೇರಿ ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಜಯದಶಮಿ ಸಮಾರಂಭ ನಡೆಯುತ್ತಿದೆ. ಈ ಬಾರಿಯ ವಿಜಯದಶಮಿ (Vijayadashami) ಸಮಾರಂಭ ಬಹಳ ವಿಶೇಷ ಎನಿಸಿದೆ. ಅದ್ಯಾಕೆ ಅಂತೀರಾ..? ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್‌ ವಿಜಯದಶಮಿ ಸಮಾರಂಭದಲ್ಲಿ ಮಹಿಳೆಯೊಬ್ಬರು ಮುಖ್ಯ ಅತಿಥಿಯಾಗಿದ್ದಾರೆ. ಹೌದು, ಖ್ಯಾತ ಮಹಿಳಾ ಪರ್ವತಾರೋಹಿ ಸಂತೋಷ್‌ ಯಾದವ್‌ ಆರ್‌ಎಸ್‌ಎಸ್‌ ದಸರಾ (Dasara) ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ. ಇನ್ನು, ತಮ್ಮ ಸಾಂಪ್ರದಾಯಿಕ ವಿಜಯದಶಮಿ ಭಾಷಣದಲ್ಲಿ ಮಹಿಳಾ ಸಬಲೀಕರಣದ (Women Empowerment) ಪರ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್  ಬ್ಯಾಟಿಂಗ್ ಮಾಡಿದ್ದಾರೆ. 

ಆರ್‌ಎಸ್‌ಎಸ್‌ ದಸರಾ ಕಾರ್ಯಕ್ರಮದ ಮುಖ್ಯ ಅತಿಥಿ ಮಹಿಳೆ ಯಾರು.. ಅವರ ವಿಶೇಷತೆಗಳೇನು ಗೊತ್ತಾ..? ಇವರು 2 ಬಾರಿ ಮೌಂಟ್ ಎವರೆಸ್ಟ್ (Mount Everest) ಏರಿದ ಮೊದಲನೇ ಮಹಿಳೆ ಸಂತೋಷ್ ಯಾದವ್. ಮೊದಲು ಮೇ 1992 ರಲ್ಲಿ, ಮತ್ತು ಮೇ 1993 ರಲ್ಲಿ - ಇಂಡೋ-ನೇಪಾಳಿ ತಂಡದೊಂದಿಗೆ ಸಂತೋಷ್‌ ಯಾದವ್‌ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದಾರೆ. ಇನ್ನು, ಈ ಕಾರ್ಯಕ್ರಮಕ್ಕೆ ಮಹಿಳೆಯೊಬ್ಬರು ಮುಖ್ಯ ಅತಿಥಿಯಾಗಿರುವುದು ಸಂಘದ ಇತಿಹಾಸದಲ್ಲಿ ಇದೇ ಮೊದಲು ಎಂದು ಆರ್‌ಎಸ್‌ಎಸ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಬಡತನ, ನಿರುದ್ಯೋಗವೆಂಬ ರಾಕ್ಷಸರನ್ನು ಸಂಹರಿಸಬೇಕು: RSS ನಾಯಕ ದತ್ತಾತ್ರೇಯ ಹೊಸಬಾಳೆ

ಸಂತೋಷ್ ಯಾದವ್ ಕಾಂಗ್‌ಶುಂಗ್ ಭಾಗದಿಂದ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಪೂರ್ವಕ್ಕೆ ಎದುರಾಗಿರುವ ಭಾಗವಾಗಿದ್ದು, ಇದನ್ನು ಇತರ ಭಾಗಗಳಿಗಿಂತ ಹೆಚ್ಚು ಕಷ್ಟಕರವೆಂದು ಪರಿಗಣಿಸಲಾಗಿದೆ. ಆಕೆಗೆ 1994 ರಲ್ಲಿ ರಾಷ್ಟ್ರೀಯ ಸಾಹಸ ಪ್ರಶಸ್ತಿ ಮತ್ತು 2000 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.

ಮೋಹನ್ ಭಾಗವತ್ ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಭಾಷಣಗಳಲ್ಲಿ ವ್ಯಕ್ತಪಡಿಸಿದ ಮಹಿಳಾ ಹಕ್ಕುಗಳ ಬಗ್ಗೆ ಮೋಹನ್ ಭಾಗವತ್ ಅವರ ಬಲವಾದ ನಿಲುವಿಗೆ ಅನುಗುಣವಾಗಿ ಸಂತೋಷ್ ಯಾದವ್ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಆರ್‌ಎಸ್‌ಎಸ್‌ ಪದಾಧಿಕಾರಿಗಳು ಹೇಳಿದ್ದಾರೆ. 

ಮಹಿಳಾ ಸಬಲೀಕರಣದ ಪರ ಮೋಹನ್ ಭಾಗವತ್ ಬ್ಯಾಟಿಂಗ್
ಆರ್‌ಎಸ್‌ಎಸ್‌ನ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್,  ಮಹಿಳೆಯರನ್ನು ಸಮಾನತೆಯಿಂದ ಕಾಣುವ ಅಗತ್ಯವಿದೆ ಮತ್ತು ಅವರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಹೇಳಿದರು. ಈ ವರ್ಷದ ದಸರಾ ಆಚರಣೆಗೆ ಮುಖ್ಯ ಅತಿಥಿಯಾಗಿದ್ದ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಸಂತೋಷ್ ಯಾದವ್ ಅವರ ಸಮ್ಮುಖದಲ್ಲಿ ಮೋಹನ್ ಭಾಗವತ್‌ ಈ ಹೇಳಿಕೆಗಳನ್ನು ನೀಡಿದ್ದಾರೆ. 

ಇದನ್ನೂ ಓದಿ: RSS ಭಾರತವನ್ನು ವಿಶ್ವಕ್ಕೆ ಮಾದರಿ ಸಮಾಜವನ್ನಾಗಿಸುತ್ತಿದೆ : ಮೋಹನ್ ಭಾಗವತ್

ಮೋಹನ್ ಭಾಗವತ್ ಭಾಷಣದ ಹೈಲೈಟ್ಸ್‌
ಕೆಲವು ರಾಜಕೀಯ ನಾಯಕರ ಮೇಲೆ ಸಿಬಿಐ/ಇಡಿ ದಾಳಿಗಳ ಕುರಿತು ವಿಪಕ್ಷಗಳ ಟೀಕೆಗಳ ನಡುವೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬುಧವಾರ, ಸರ್ಕಾರಿ ಸಂಸ್ಥೆಗಳು ದೇಶ ವಿರೋಧಿ ಅಂಶಗಳ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಮತ್ತು ಇದನ್ನು ನಾವು ಬೆಂಬಲಿಸಬೇಕು ಎಂದು ಹೇಳಿದರು. 

ಇನ್ನು, ವಿಜಯದಶಮಿ ಸಮಾರಂಭ ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ನಿರುದ್ಯೋಗ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಪ್ರತಿಪಕ್ಷಗಳ ಕೂಗಿಗೆ ಪ್ರತಿಕ್ರಿಯಿಸಿದರು ಮತ್ತು ಉದ್ಯೋಗಗಳಿಗೆ ಸರ್ಕಾರ ಮಾತ್ರ ಜವಾಬ್ದಾರರಾಗಬಾರದು ಎಂದು ಹೇಳಿದರು. ಅದಕ್ಕಾಗಿ ಸಮಾಜ ಮತ್ತು ಜನರು ಕೂಡ ಶ್ರಮಿಸಬೇಕು ಎಂದರು. 

ಅಲ್ಲದೆ, ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕುವುದು ಸಂಘ ಅಥವಾ ಹಿಂದೂಗಳ ಸ್ವರೂಪವಲ್ಲ ಎಂದು ಭಾಗವತ್ ಹೇಳಿದ್ದಾರೆ. ಹಾಗೂ, ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲಲು ಸಂಘವು ನಿರ್ಧರಿಸುತ್ತದೆ ಎಂದು ಮೋಹನ್‌ ಭಾಗವತ್ ಹೇಳಿದರು. ದೇವಸ್ಥಾನ, ನೀರು ಮತ್ತು ಸ್ಮಶಾನ ಎಲ್ಲರಿಗೂ ಸಾಮಾನ್ಯವಾಗಿರಬೇಕು ಎಂದೂ ಮೋಹನ್‌ ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ: ಮೋಹನ್‌ ಭಾಗವತ್‌ ತ್ರಿವರ್ಣ ಧ್ವಜ ಹಾರಿಸಿದ ವಿಡಿಯೋ ಬಿಡುಗಡೆ ಮಾಡಿದ ಆರೆಸ್ಸೆಸ್‌

ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವು ನಿರ್ಲಕ್ಷಿಸಲಾಗದ ಪ್ರಮುಖ ವಿಷಯವಾಗಿದೆ ಎಂದು ಒತ್ತಿ ಹೇಳಿದ ಭಾಗವತ್, ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

click me!