ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ಅಲ್ಲೂ ಮುಖಭಂಗವಾಗಿದೆ.
ನವದೆಹಲಿ: ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ಅಲ್ಲೂ ಮುಖಭಂಗವಾಗಿದೆ. ಡಿಎಂಕೆ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಇದೇ ವೇಳೆ ಸುಪ್ರೀಂಕೋರ್ಟ್
ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ನಿಷೇಧದ ನಂತರ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ತಮಿಳುನಾಡಿನಲ್ಲಿ ದಾಖಲಾದ ಹಲವು ಪ್ರಕರಣಗಳಲ್ಲಿ ಆರ್ಎಸ್ಎಸ್ ಬಲಿಪಶುವಾಗಿದೆಯೇ ಹೊರತು ಅಪರಾಧಿಯಾಗಿಲ್ಲ ಎಂದು ಕೋರ್ಟ್ ಹೇಳಿದೆ. ವಿ ರಾಮಸುಬ್ರಮಣಿಯಂ ಹಾಗೂ ಪಂಕಜ್ ಮಿಥಲ್ ಅವರಿದ್ದ ಸುಪ್ರೀಂಕೋರ್ಟ್ (Supreme court) ಪೀಠ ಈ ಹೇಳಿಕೆ ನೀಡಿದೆ. ಅಲ್ಲದೇ ಮದ್ರಾಸ್ ಹೈಕೋರ್ಟ್ ಪೀಠ (Madras High court) ಸುಮ್ಮನೆ ಬೇಕಾಬಿಟ್ಟಿಯಾಗಿ ಆರ್ಎಸ್ಎಸ್ಗೆ ಅನುಮತಿ ನೀಡಿಲ್ಲ. ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಸರಿಯಾಗಿ ಅರ್ಥೈಸುವುದಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆಗಳನ್ನು ಅನುಮತಿಸುವಾಗ ಅಗತ್ಯ ಷರತ್ತುಗಳನ್ನು ಕೂಡ ವಿಧಿಸಿತ್ತು ಎಂದು ಸುಪ್ರೀಂ ಪೀಠ ಹೇಳಿದೆ. ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮನವಿಯ ತೀರ್ಪನ್ನು ಮಾರ್ಚ್ 27ರಂದು ಸುಪ್ರೀಂಕೋರ್ಟ್ ಕಾಯ್ದಿರಿಸಿತ್ತು.
ರಾಹುಲ್ ಗಾಂಧಿಗೆ ಮುಖಭಂಗ, ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ!
ಈ ವಿಚಾರಣೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯ ಸರ್ಕಾರ ಗಲಭೆಗೆ ಜವಾಬ್ದಾರರೆಂದು ಆರೋಪ ಮಾಡಿ ಕೋರ್ಟ್ಗೆ ಸಲ್ಲಿಸಿದ್ದ ದಾಖಲೆಯನ್ನು ಪರಿಶೀಲಿಸಿದ ಕೋರ್ಟ್ ಇಲ್ಲಿ ಸಂಘಟನೆಯ ಕಾರ್ಯಕರ್ತರು ಅಪರಾಧಿಗಳಲ್ಲ ಬಲಿಪಶುಗಳು ಎಂದು ಹೇಳಿದೆ. ಆದ್ದರಿಂದ, ಮುಖ್ಯ ರಿಟ್ ಅರ್ಜಿಗಳಲ್ಲಿ ಅಥವಾ ಮರುಪರಿಶೀಲನಾ ಅರ್ಜಿಗಳಲ್ಲಿ ನ್ಯಾಯಾಧೀಶರು ನೀಡಿದ ಆದೇಶದಲ್ಲಿ ದೋಷವನ್ನು ಕಂಡುಹಿಡಿಯಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ವಿಶೇಷ ಅರ್ಜಿಗಳನ್ನು ವಜಾಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿ ತಮಿಳುನಾಡು ಸರ್ಕಾರ ಅರ್ಜಿಯನ್ನು ವಜಾ ಮಾಡಿತ್ತು.
ಫೆಬ್ರವರಿ 10 ರಂದು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ನೀಡಿದ ಆದೇಶದಲ್ಲಿ, ಆರ್ಎಸ್ಎಸ್ಗೆ ಪಥಸಂಚಲನಕ್ಕೆ (RSS route March) ಅನುಮತಿ ನೀಡುವಂತೆ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತ್ತು. ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪಥಸಂಚಲನಕ್ಕೆ ಈ ಹಿಂದೆ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ತೆಗೆದು ಹಾಕಿದ ಮದ್ರಾಸ್ ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್: ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ
ಇದಕ್ಕೂ ಮೊದಲು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ' ಮತ್ತು ಗಾಂಧಿ ಜಯಂತಿಯ ಅಂಗವಾಗಿ ನಗರದಲ್ಲಿ ಆರ್ಎಸ್ಎಸ್ಎಸ್ ಪಥಸಂಚಲನ ನಡೆಸಲು ಮುಂದಾಗಿತ್ತು. ಆದರೆ ಇದಕ್ಕೆ ತಮಿಳುನಾಡು ಸರ್ಕಾರವು ಆರ್ಎಸ್ಎಸ್ಗೆ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮದ್ರಾಸ್ ಹೈಕೋರ್ಟ್ಗೆ ಮನವಿ ಸಲ್ಲಿಸಿತು.
ಇದಾದ ನಂತರ ಕಳೆದ ವರ್ಷ ನವಂಬರ್ 4 ರಂದು ಮದ್ರಾಸ್ ಹೈಕೋರ್ಟ್ನ (Madras High Court) ಏಕಸದಸ್ಯ ಪೀಠ ಕೆಲವು ಷರತ್ತುಗಳನ್ನು ವಿಧಿಸಿ ಆರ್ಎಸ್ಎಸ್ಗೆ ಮೆರವಣಿಗೆ ನಡೆಸಲು ಅವಕಾಶ ನೀಡಿತು. ನವೆಂಬರ್ 4 ರ ಹೈಕೋರ್ಟ್ ಆದೇಶದಲ್ಲಿ ಆರ್ಎಸ್ಎಸ್ ತನ್ನ ಪಥಸಂಚಲನವನ್ನು (RSS route march) ಒಳಾಂಗಣದಲ್ಲಿ ಅಥವಾ ಯಾವುದಾದರೂ ಸಂಬಂಧಿತ ಮೈದಾನದಲ್ಲಿ ನಡೆಸುವಂತೆ ಷರತ್ತು ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಆರ್ಎಸ್ಎಸ್ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಆರ್ಎಸ್ಎಸ್ನ ಈ ಅರ್ಜಿಯನ್ನು ಫೆಬ್ರವರಿ 10 ರಂದು ವಿಚಾರಣೆಗೆ ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಆರ್ ಮಹದೇವನ್ (R Mahadevan) ಮತ್ತು ಮೊಹಮ್ಮದ್ ಶಫೀಕ್ (Mohammed Shaffiq) ಅವರ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿತು. ಅಲ್ಲದೇ ಕಳೆದ ವರ್ಷ ಸೆಪ್ಟೆಂಬರ್ 22ರಂದು ನೀಡಿದ್ದ ಹಿಂದಿನ ಆದೇಶವನ್ನು ಮರುಸ್ಥಾಪಿಸಿತ್ತು. ಅಲ್ಲದೇ ಈ ಪೀಠ ಆರ್ಎಸ್ಎಸ್ ಪ್ರಾತಿನಿಧ್ಯವನ್ನು ಪರಿಗಣಿಸುವ ಜೊತೆ ಅವರಿಗೆ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.