
ಮುಂಬೈ (ಜೂ.02) ಮುಂಗಾರು ಪ್ರವೇಶಕ್ಕೆ ಕೆಲ ದಿನಗಳು ಮಾತ್ರ ಬಾಕಿ. ದೇಶದೆಲ್ಲೆಡೆ ಮಳೆ ಆರಂಭವಾಗಿದೆ. ಇದರ ನಡುವೆ ರೈತರ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ರೈತರ 2 ಲಕ್ಷ ರೂಪಾಯಿ ಸಾಲ ಮನ್ನಾ ಆದೇಶ ಹೊರಬಿದ್ದಿದೆ. ಮಹಾರಾಷ್ಟ್ರ ಸರ್ಕಾರ ಈ ಮಹತ್ವದ ಆದೇಶ ನೀಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕ್ಯಾಬಿನೆಟ್ ರೈತರ ಸಾಲ ಮನ್ನಾಗೆ ಅನುಮೋದನೆ ನೀಡಿದೆ.
ಸರ್ಕಾರದ ಲೆಕ್ಕಾಚಾರಗಳ ಪ್ರಕಾರ, ಈ ಯೋಜನೆಯು ರಾಜ್ಯದ ಒಟ್ಟು 65 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳನ್ನು ಒಳಗೊಳ್ಳಲಿದೆ. ಇದರಲ್ಲಿ ಅರ್ಹತೆ ಹೊಂದಿರುವ ಸುಮಾರು 56 ಲಕ್ಷ ರೈತರ ಒಟ್ಟು 36,585 ಕೋಟಿ ರೂಪಾಯಿ ಮೌಲ್ಯದ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
ಕೇವಲ ಸಾಲಗಾರರಷ್ಟೇ ಅಲ್ಲದೆ, ಬ್ಯಾಂಕ್ಗಳಿಂದ ಪಡೆದ ಕೃಷಿ ಸಾಲವನ್ನು ಯಾವುದೇ ಬಾಕಿ ಉಳಿಸಿಕೊಳ್ಳದೆ ನಿಯಮಿತವಾಗಿ ಮರುಪಾವತಿ ಮಾಡಿರುವ (ಸಾಲ ಸುಸ್ತಿದಾರರಲ್ಲದ) ಪ್ರಾಮಾಣಿಕ ರೈತರಿಗೂ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅಂತಹ ನಿಯಮಿತವಾಗಿ ಸಾಲ ಪಾವತಿಸಿದ ರೈತ ಖಾತೆದಾರರಿಗೆ ಸರ್ಕಾರದಿಂದ ತಲಾ 50,000 ರೂಪಾಯಿಗಳವರೆಗೆ ಪ್ರೋತ್ಸಾಹಧನ (Incentive) ನೀಡಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನಕ್ಕೆ ಒಪ್ಪಿಗೆ ಸಿಕ್ಕಿದ್ದರೂ ಸಹ, ಸರ್ಕಾರದ ವತಿಯಿಂದ ಅಧಿಕೃತ ಸಾರ್ವಜನಿಕ ಘೋಷಣೆ ಹೊರಬಿದ್ದಿಲ್ಲ. ಮಹಾರಾಷ್ಟ್ರದಲ್ಲಿ ಸದ್ಯ ವಿಧಾನ ಪರಿಷತ್ (Legislative Council) ಚುನಾವಣೆಗಳು ನಡೆಯುತ್ತಿರುವುದರಿಂದ ರಾಜ್ಯಾದ್ಯಂತ 'ಮಾದರಿ ಚುನಾವಣಾ ನೀತಿ ಸಂಹಿತೆ' (Model Code of Conduct) ಜಾರಿಯಲ್ಲಿದೆ.
ಸರ್ಕಾರದ ಈ ತೀರ್ಮಾನವನ್ನು ರೈತ ಸಂಘಟನೆಗಳು ಮುಕ್ತಕಂಠದಿಂದ ಸ್ವಾಗತಿಸಿವೆ. ಈ ಬಗ್ಗೆ ಮಾತನಾಡಿರುವ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯದರ್ಶಿ ಅಜಿತ್ ನವಲೆ ಅವರು, "ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಈಗ ಇದರ ಶೀಘ್ರ ಜಾರಿ ಅತ್ಯಂತ ಮುಖ್ಯವಾಗಿದೆ. ಜೂನ್ ತಿಂಗಳು ಬೆಳೆ ಸಾಲ ಮರುಪಾವತಿಗೆ ಕೊನೆಯ ಅವಧಿಯಾಗಿರುವುದರಿಂದ, ಜೂನ್ ಅಂತ್ಯದೊಳಗೆ ಮನ್ನಾ ಆದ ಮೊತ್ತವನ್ನು ಬ್ಯಾಂಕ್ಗಳಿಗೆ ಜಮೆ ಮಾಡಬೇಕು. ಇಲ್ಲದಿದ್ದರೆ ರೈತರು ಸುಸ್ತಿದಾರರ ಪಟ್ಟಿಗೆ ಸೇರಿ ಮುಂಗಾರು ಹಂಗಾಮಿಗೆ ಹೊಸ ಸಾಲ ಪಡೆಯಲು ತೊಂದರೆಯಾಗುತ್ತದೆ" ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ