ಕಾರ್ಪೊರೇಟ್ ಕೃಷಿ ಉದ್ಯಮಕ್ಕೆ ಪ್ರವೇಶಿಸುವುದಿಲ್ಲ: ರಿಲಯನ್ಸ್| ರೈತರಿಂದ ಯಾವುದೇ ಭೂಮಿ ಖರೀದಿಸಿಲ್ಲ| ಭವಿಷ್ಯದಲೂ ಈ ಯೋಜನೆ ಇಲ್ಲ: ಸ್ಪಷ್ಟನೆ
ಮುಂಬೈ(ಜ.05): ಕೇಂದ್ರದ ಕೃಷಿ ಕಾಯ್ದೆಗಳ ನೇರ ಲಾಭ ರಿಲಯನ್ಸ್ ಇಂಡಸ್ಟ್ರೀಸ್ಗೆ ಆಗಲಿದೆ ಎಂಬ ಆರೋಪಗಳ ಬೆನ್ನಲ್ಲೇ, ಅಂಥ ಯಾವುದೇ ಉದ್ಯಮದಲ್ಲೂ ತಾನು ಭಾಗಿಯಾಗುವ ಪ್ರಸ್ತಾಪ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ರೈತರು ಮತ್ತು ಕೇಂದ್ರದ ನಡುವೆ 7ನೇ ಸುತ್ತಿನ ಮಾತುಕತೆಗೂ ಮುನ್ನ ರಿಲಯನ್ಸ್ ಇಂಥದ್ದೊಂದು ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಸೋಮವಾರ ಸ್ಪಷ್ಟನೆಯೊಂದನ್ನು ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಕಾರ್ಪೊರೇಟ್ ಅಥವಾ ಗುತ್ತಿಗೆ ಕೃಷಿ ಉದ್ಯಮಕ್ಕೆ ಪ್ರವೇಶಿಸುವುದಿಲ್ಲ. ಈ ಉದ್ದೇಶಕ್ಕೆ ರಿಲಯನ್ಸ್ ರೈತರಿಂದ ಭೂಮಿಯನ್ನು ಖರೀದಿಸಿಲ್ಲ. ಭವಿಷ್ಯದಲ್ಲಿಯೂ ಈ ರೀತಿಯ ಯಾವುದೇ ಯೋಜನೆ ಸಂಸ್ಥೆಯ ಮುಂದೆ ಇಲ್ಲ ಎಂದು ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಥವಾ ರಿಲಯನ್ಸ್ ಅಂಗ ಸಂಸ್ಥೆಗಳು ರೈತರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಆಹಾರ ಧಾನ್ಯಗಳನ್ನು ಖರೀದಿಸುವುದಿಲ್ಲ. ಅಲ್ಲದೇ ಕಡಿಮೆ ದರಲ್ಲಿ ದೀರ್ಘಾವಧಿ ಗುತ್ತಿಗೆ ಪಡೆಯುವ ಉದ್ದೇಶವೂ ಇಲ್ಲ. ರಿಲಯನ್ಸ್ನ ಪೂರೈಕೆದಾರು ಕನಿಷ್ಠ ಬೆಂಬಲ ದರದಲ್ಲೇ ರೈತರಿಂದ ಬೆಳೆಗಳನ್ನು ಖರೀದಿಸಬೇಕು ಎಂದು ಸಂಸ್ಥೆ ಆಗ್ರಹಿಸುತ್ತದೆ. ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು ಎಂಬುದು ರಿಲಯನ್ಸ್ನ ಆಶಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ