ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಮುಂಬರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಗುಜರಾತ್ ಗಾಂಧಿನಗರ ಕ್ಷೇತ್ರದಿಂದ ಜೈಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ಎರಡನೇ ಬಾರಿ ಜೈಶಂಕರ್ ಗುಜಾರಾತ್ನಿಂದ ರಾಜ್ಯಸಭೆಗೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಾಂಧಿನಗರ(ಜು.10) ಭಾರತದ ವಿದೇಶಾಂಕ ಸಚಿವ ಎಸ್ ಜೈಶಂಕರ್ ಎರಡನೇ ಬಾರಿಗೆ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಮುಂಬರುವ ರಾಜ್ಯಸಭಾ ಚುನಾವಣೆಗೆ ಜೈಶಂಕರ್, ಗುಜರಾತ್ನ ರಾಜಧಾನಿ ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ. 2019ರಲ್ಲಿ ಬಿಜೆಪಿ ಸೇರಿದ ಜೈಶಂಕರ್ ಅವರನ್ನು ವಿದೇಶಾಂಗ ಮಂತ್ರಿಯಾಗಿ ಸಂಪುಟಕ್ಕೆ ಸೇರಿಸಲಾಗಿತ್ತು. ಒಂದೇ ತಿಂಗಳಲ್ಲಿ ಜೈಶಂಕರ್ ಗುಜರಾತ್ನಿಂದ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಗುಜರಾತ್ನಿಂದ ನಾಮಪತ್ರ ಸಲ್ಲಿಸಿರುವ ಜೈಶಂಕರ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ.
ಜೈಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಜೈಶಂಕರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಬಿಜೆಪಿ ಶಾಸಕರಿಗೆ ಧನ್ಯವಾದ ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಗುಜರಾತ್ನಿಂದ ನಾನು ಸಂಸದನಾಗಿ ಆಯ್ಕೆಯಾಗಿದ್ದೆ. ಪ್ರಧಾನಿ ಮೋದಿ ನಾಯಕತ್ವದಡಿ ಕಳೆದ ನಾಲ್ಕು ವರ್ಷ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಮತ್ತೆ ನಾನು ದೇಶಕ್ಕೆ ಮಾದರಿಯಾಗಿರುವ ಗುಜರಾತ್ನಿಂದಲೇ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುತ್ತಿರುವುದು ಅತೀವ ಸಂತಸವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಖಲಿಸ್ತಾನಿಗಳಿಗೆ ಸ್ಥಳ ನೀಡ್ಬೇಡಿ, ಆಪ್ತ ದೇಶಗಳಿಗೆ ಭಾರತದ ಮನವಿ!
ವಿದೇಶಾಂಗ ಸಚಿವನಾಗಿ ನೆರೆ ಹೊರೆಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ವೃದ್ದಿಸುವಲ್ಲಿ ಶ್ರಮಿಸಿದ್ದೇನೆ. ಆದರೆ ಒಂದು ನೆರೆಯ ರಾಷ್ಟ್ರದಿಂದ ನಾವು ಭಯೋತ್ಪಾದನೆ ಆತಂಕ ಎದುರಿಸುತ್ತಿದ್ದೇವೆ. ಆದರೆ ಇದಕ್ಕೆ ತಕ್ಕ ಉತ್ತರವನ್ನೂ ಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ. ಪ್ರಧಾನಿ ಮೋದಿ ಸರ್ಕಾರ ಭಾರತವನ್ನು ಸುರಕ್ಷಿತ ದೇಶವನ್ನಾಗಿ ಮಾಡಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಗುಜರಾತ್, ಪಶ್ಚಿಮ ಬಂಗಾಳ ಹಾಗೂ ಗೋವಾ ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ಚುನಾವಣೆ ನಡೆಯಲಿದೆ. ಗುಜರಾತ್ನಲ್ಲಿ ಅತೀ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿ ಸುಲಭವಾಗಿ ಜೈಶಂಕರ್ನ್ನು ಗೆಲ್ಲಿಸಲಿದೆ. ಈ ಮೂಲಕ ಸತತ 2ನೇ ಬಾರಿ ಅಭೂತಪೂರ್ವ ಗೆಲುವಿನೊಂದಿಗೆ ಜೈಶಂಕರ್ ರಾಜ್ಯಸಭೆಗೆ ಪ್ರವೇಶಿಸುವುದು ಖಚಿತವಾಗಿದೆ.
ನೆಹರೂ ಕಾಶ್ಮೀರ ನೀತಿಯಿಂದ ಸಮಸ್ಯೆ ಡಬಲ್, ಕಾಂಗ್ರೆಸ್ ದುರಾಡಳಿತ ಬಿಚ್ಚಿಟ್ಟ ಜೈಶಂಕರ್
ವಿದೇಶಾಂಗ ಸಚಿವರಾಗಿ ಜೈಶಂಕರ್ ಅವರ ಕೆಲಸವನ್ನು ಬಹುತೇಕ ಎಲ್ಲಾ ರಾಷ್ಟ್ರಗಳು ಮೆಚ್ಚಿಕೊಂಡಿದೆ. ಇನ್ನು ಜೈಶಂಕರ್ ತಮ್ಮ ಖಡಕ್ ಮಾತಿನಿಂದಲೂ ಗಮನಸೆಳೆದಿದ್ದಾರೆ. ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪತ್ರಕರ್ತರಿಂದ ತೂರಿ ಬರುವ ಪ್ರಶ್ನೆಗಳಿಗೆ ಅಷ್ಟೇ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ಜೈಶಂಕರ್ ಉತ್ತಮ ವಿದೇಶಾಂಗ ನೀತಿ ಇಲ್ಲದೇ ಇದ್ದಿದ್ದರೆ ಪೆಟ್ರೋಲ್, ಅಡುಗೆ ಅನಿಲ ಮತ್ತು ಐಫೋನ್ ಬೆಲೆಗಳು ಇನ್ನೂ ಹೆಚ್ಚಾಗಿರುತ್ತಿತ್ತು ಎಂದಿದ್ದರು. ಈ ಮೂಲಕ ಉಕ್ರೇನ್ ಯುದ್ಧದ ಬಳಿಕ ರಷ್ಯಾದಿಂದ ಕಚ್ಚಾತೈಲ ಖರೀದಿಸಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.