
ಚೆನ್ನೈ: ಇತ್ತೀಚೆಗೆ ಬೀದಿಯಲ್ಲಿ ಕಸ ಗುಡಿಸುವಾಗ ತಮಗೆ ಸಿಕ್ಕಿದ್ದ ಸುಮಾರು 55 ಲಕ್ಷ ರು. ಮೌಲ್ಯದ 360 ಗ್ರಾಂ ಚಿನ್ನವನ್ನು ಅದರ ಮಾಲೀಕರಿಗೆ ಮರಳಿಸಿದ್ದ ಚೆನ್ನೈ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಪದ್ಮಾರನ್ನು ನಟ ರಜನೀಕಾಂತ್ ತಮ್ಮ ಮನೆಗೆ ಕರೆಸಿ ಸನ್ಮಾನಿಸಿದ್ದಾರೆ. ಪದ್ಮಾಗೆ ಓಂ ಹೆಸರಿನ ಪದಕ, 16 ಗ್ರಾಂನ ಚಿನ್ನದ ಸರ, ಶಾಲು ಹಾಕಿ ರಜನಿ ಸನ್ಮಾನಿಸಿದ್ದಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸ್ಟಾಲಿನ್ ಕೂಡಾ ಪದ್ಮಾರಿಗೆ ₹1 ಲಕ್ಷ ನೀಡಿ ಗೌರವಿಸಿದ್ದರು.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ( ಎಸ್ಐಆರ್) ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬುಧವಾರ ಖುದ್ದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಬಂಗಾಳದಲ್ಲಿ ಮತಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಮಮತಾ ಜ.28ರಂದು ಸುಪ್ರೀಂ ಮೆಟ್ಟಿಲೇರಿದ್ದರು. ಮೊದಲು ಫೆ.6ರಂದು ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಇದೀಗ ವೇಳಾಪಟ್ಟಿ ಪರಿಷ್ಕೃತಗೊಂಡು ಫೆ.4ರಂದು ವಿಚಾರಣೆ ನಡೆಯುವ ಸಾಧ್ಯತೆಯಿದೆ. ಸೋಮವಾರವಷ್ಟೇ ದೀದಿ ನಿಯೋಗವೊಂದನ್ನು ಕರೆದುಕೊಂಡು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಭೇಟಿಗೆ ತೆರಳಿದ್ದರು. ಈ ವೇಳೆ ಜ್ಞಾನೇಶ್ ತಮಗೆ ಅವಮಾನಿಸಿದ್ದಾರೆ, ಅವರು ದುರಂಹಕಾರಿ ಎಂದು ಕರೆದು ಸಭೆಯಿಂದ ಹೊರ ನಡೆದಿದ್ದರು.
ಕೋಲ್ಕತಾ: ಮತಪಟ್ಟಿ ಪರಿಷ್ಕರಣೆ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿಯು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಾಗ್ದಂಡನೆಗೆ ಚಿಂತನೆ ನಡೆಸಿದೆ. ಈ ಕುರಿತು ಇತರ ಮಿತ್ರಪಕ್ಷಗಳ ಜೊತೆ ಮಾತುಕತೆಗೆ ಮುಂದಾಗಿದೆ ಎಂದು ಪಕ್ಷದ ಮೂಲಗಳು ಮಂಗಳವಾರ ತಿಳಿಸಿವೆ. ದೆಹಲಿಯಲ್ಲಿ ಸಿಇಜಿ ಜೊತೆ ನಡೆಯುತ್ತಿದ್ದ ಸಭೆಯನ್ನೇ ಬಹಿಷ್ಕರಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರನಡೆದ ಒಂದು ದಿನದ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ಕುರಿತು ಮಾಹಿತಿ ನೀಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ‘ಮುಖ್ಯ ಚುನಾವಣಾ ಆಯುಕ್ತರು ಮತಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ರೀತಿ ತಪ್ಪಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಅವರನ್ನು ವಾಗ್ದಂಡನೆಗೆ ಗುರಿ ಮಾಡುವ ಬಗ್ಗೆ ಪರಿಗಣಿಸುತ್ತಿದ್ದೇವೆ’ ಎಂದಿದ್ದಾರೆ.
ಸರ್ಕಾರದ ಅನುಮತಿ ಸಿಗದ್ದಕ್ಕೆ ಜ. ನರವಣೆ ಬುಕ್ ಬಿಡುಗಡೆ ಇಲ್ಲ
ನವದೆಹಲಿ: ಸಂಸತ್ನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ನಿವೃತ್ತ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರ ಪುಸ್ತಕ ಇನ್ನೂ ಬಿಡುಗಡೆಯಾಗದೇ ಇರುವುದಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡದೇ ಇರುವುದೇ ಕಾರಣ ಎನ್ನಲಾಗಿದೆ. ಲೆಕ್ಕಾಚಾರದ ಪ್ರಕಾರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕ 2024ರಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಸೇನೆಯ ಹಿರಿಯ ವ್ಯಕ್ತಿಗಳ ಪುಸ್ತಕ ಬಿಡುಗಡೆಗೆ ಮುನ್ನ ಸರ್ಕಾರದ ಪೂರ್ವಾನುಮತಿ ಕಡ್ಡಾಯ. ಆದರೆ ಪುಸ್ತಕದಲ್ಲಿ ಕೆಲವೊಂದು ವಿವಾದಿತ ಅಂಶಗಳು ಇರುವ ಕಾರಣ, ಸರ್ಕಾರ ಇನ್ನೂ ಅದರ ಬಿಡುಗಡೆಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ. ಇದೇ ಪುಸ್ತಕದ ಅಂಶಗಳನ್ನು ಸೋಮವಾರ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದಾಗ ಭಾರೀ ಗದ್ದಲ ಉಂಟಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ