ಕಾಂಗ್ರೆಸ್ ಗೆ ಮತ್ತೆ ರಾಹುಲ್ ಗಾಂಧಿ ಅಧ್ಯಕ್ಷ ?

By Kannadaprabha NewsFirst Published Dec 11, 2019, 8:39 AM IST
Highlights

ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ಜನವರಿ ಮಾಸಾಂತ್ಯದ ವೇಳೆಗೆ ಪುನರ್ ರಚನೆ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನದ ಹೊಣೆ ಹೊರಬಹುದು ಎಂದು ಮೂಲಗಳು ತಿಳಿಸಿವೆ. 

ನವದೆಹಲಿ [ಡಿ.11]:  ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ ಅವರು ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ಜನವರಿ ಮಾಸಾಂತ್ಯದ ವೇಳೆಗೆ ಪುನರ್ ರಚನೆ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನದ ಹೊಣೆ ಹೊರಬಹುದು ಎಂದು ಮೂಲಗಳು ತಿಳಿಸಿವೆ. 

ಇನ್ನು ಈಗಾಗಲೇ ಸೋನಿಯಾ ಗಾಂಧಿ ಕೂಡ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ಕೆಳಕ್ಕೆ ಇಳಿದಿದ್ದ ರಾಹುಲ್ ಮತ್ತೆ ಕೈ ನೇತೃತ್ವ ವಹಿಸಲಿದ್ದಾರೆ. ಪ್ರಿಯಾಂಕ ಗಾಂಧಿಗೆ ಅಧ್ಯಕ್ಷ ಪಟ್ಟ ಒಲಿಯಲ್ಲ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅನಂತರ ಸೋನಿಯಾ ಗಾಂಧಿ ಅವರು ಪಕ್ಷದ ನೇತೃತ್ವ ವಹಿಸಿದ್ದರು. ಸೋನಿಯಾ ಗಾಂಧಿ ಅವರ ಪಕ್ಷದ ಚುಕ್ಕಾಣಿ ಹಿಡಿದ ನಂತರ ಪಕ್ಷದಲ್ಲಿ ಹಿರಿಯ ನಾಯಕರಿಗೆ ಮತ್ತೆ ಮನ್ನಣೆ ದೊರೆಯತೊಡಗಿತ್ತು. ರಾಜ್ಯ ದಲ್ಲೂ ಕೂಡ ಸೋನಿಯಾ ಆಗಮನದ ನಂತರ ಕೊಂಚ ಬದಲಾವಣೆ ಕಂಡುಬಂದಿತ್ತು. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಅವರ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ ಸಿದ್ದರಾಮಯ್ಯ, ಅವರ ತಂಡದ ವಿರುದ್ಧ ರಾಹುಲ್ ಬಳಿಗೆ ದೂರು ಒಯ್ಯಲು ಪಕ್ಷದ ಇತರ ನಾಯಕರು ಹಿಂಜರಿಯುತ್ತಿದ್ದರು.

ಆದರೆ, ಸೋನಿಯಾ ಗಾಂಧಿ ಅವರು ಅಧಿಕಾರ ವಹಿಸಿಕೊಂಡ ನಂತರ ಪಕ್ಷದ ಒಂದು ಬಣ ಸಿದ್ದರಾಮಯ್ಯ ಹಾಗೂ ಅವರ ತಂಡದ ವಿರುದ್ಧ ಹಲವು ಬಾರಿ ಸೋನಿಯಾ ಗಾಂಧಿ ಅವರಿಗೆ ದೂರು ಸಲ್ಲಿಸಿತ್ತು. ಈಗ ಉಪ ಚುನಾವಣೆ ಸೋಲಿನ ನಂತರ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ವಿರೋಧಿ ಬಣ ಈಗಾಗಲೇ ದೆಹಲಿ ತಲುಪಿ ಈ ರಾಜೀನಾಮೆ ಅಂಗೀಕರಿಸುವಂತೆ ಸೋನಿಯಾ ಗಾಂಧಿ ಅವರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಸಿದ್ದರಾಮಯ್ಯ ವಿರೋಧಿ ಬಣವು ಎಐಸಿಸಿ ಅಧ್ಯಕ್ಷರ ಬದಲಾವಣೆ ಒಳಗೆ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಬೇಕು.

ಈ ದೇಶ ಮುನ್ನಡೆಸುವ ವ್ಯಕ್ತಿ ಹಿಂಸೆ ನಂಬುತ್ತಾರೆ: ಮೋದಿ ವಿರುದ್ಧ ವಾಗ್ದಾಳಿ!...

ಇದಾಗದೇ ರಾಹುಲ್ ಗಾಂಧಿ ಅವರು ಅಧಿಕಾರದ ಚುಕ್ಕಾಣಿ ಹಿಡಿದರೆ ಆಗ ಇಂತಹ ಪ್ರಯತ್ನಗಳಿಗೆ ಫಲ ದೊರಕುವುದು ಕಷ್ಟವಾಗಬಹುದು ಎನ್ನಲಾಗುತ್ತಿದೆ. ರಾಜ್ಯ ಉಸ್ತುವಾರಿ ವೇಣು ಬದಲಾವಣೆ: ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸ್ಥಾನಕ್ಕೆ ಚ್ಯುತಿ ಬರುವುದು ಮಾತ್ರ ಖಚಿತ ಎಂದೇ ಉನ್ನತ ಮೂಲಗಳು ಹೇಳುತ್ತವೆ. ಎಐಸಿಸಿಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಹೊಂದಿರುವ ವೇಣುಗೋಪಾಲ್ ಅವರು ಈ ಹಿಂದೆಯೇ ರಾಜ್ಯ ಉಸ್ತುವಾರಿ ಪಟ್ಟ ತ್ಯಜಿಸುವ ಇರಾದೆ ವ್ಯಕ್ತಪಡಿಸಿದ್ದರು.

ಆದರೆ, ಉಪ ಚುನಾವಣೆ ಇದ್ದುದರಿಂದ ಹೈಕಮಾಂಡ್ ಇದಕ್ಕೆ ಆಸ್ಪದ ನೀಡಿರಲಿಲ್ಲ. ಈಗ ಉಪ ಚುನಾವಣೆಯಲ್ಲು ಪಕ್ಷ ಸೋಲುಂಡಿದೆ. ಜತೆಗೆ, ವೇಣುಗೋಪಾಲ್ ಅವರಿಗೂ ಈ ಹೊಣೆಗಾರಿಕೆಯಿಂದ ಮುಕ್ತಿ ಬೇಕಿದೆ. ಹೀಗಾಗಿ ಶೀಘ್ರವೇ ಅವರ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತವೆ. ವೇಣುಗೋಪಾಲ್ ಅವರ ಸ್ಥಾನಕ್ಕೆ ಎಐಸಿಸಿಯ ಪ್ರಮುಖ ನಾಯಕರಾದ ಮುಕುಲ್ ವಾಸ್ನಿಕ್ ಹಾಗೂ ಮಧುಸೂಧನ್ ಮಿಸ್ತ್ರಿ ಅವರ ಹೆಸರು ಕೇಳಿ ಬರುತ್ತಿದೆ.

ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!