ಕೃಷಿ ಕಾಯ್ದೆ ವಿರುದ್ಧ ರಾಹುಲ್ ‘ಟ್ರ್ಯಾಕ್ಟರ್ ರಾರಯಲಿ’| 6 ಕಿ.ಮೀ ದೂರದವರೆಗೆ ಟ್ರ್ಯಾಕ್ಟರ್ ಹೊಡೆದ ರಾಹುಲ್| ಈ ಹಿಂದೆ ಮೋದಿಗೆ ನರೇಗಾ ಮಹತ್ವವೂ ತಿಳಿದಿರಲಿಲ್ಲ| ಪ್ರಧಾನಿಗೆ ನರೇಗಾ ಮಹತ್ವ ಅರ್ಥೈಸಿದ ಕೊರೋನಾ ಸಂಕಷ್ಟ
ವಯನಾಡ್(ಫೆ.23): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ಕೇರಳದ ವಯನಾಡಿನಲ್ಲಿ ರೈತರೊಂದಿಗೆ ಟ್ರ್ಯಾಕ್ಟರ್ ರಾರಯಲಿ ನಡೆಸಿದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2 ದಿನಗಳ ಪ್ರವಾಸಕ್ಕಾಗಿ ಕ್ಷೇತ್ರಕ್ಕೆ ಬಂದಿರುವ ರಾಹುಲ್ ಅವರು 6 ಕಿ. ಮೀ ದೂರದ ರಾರಯಲಿ ವೇಳೆ ತಾವೇ ಟ್ರ್ಯಾಕ್ಟರ್ ಅನ್ನು ಚಾಲನೆ ಮಾಡಿದ್ದು ಗಮನ ಸೆಳೆಯಿತು.
ಬಳಿಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ‘ಈ ದೇಶದ ಕೃಷಿ ವಲಯವು ಭಾರತ ಮಾತೆಗೆ ಸೇರಿದ್ದಾಗಿದ್ದು, ನೂತನ 3 ಕಾಯ್ದೆಗಳ ಹಿಂಪಡೆತಕ್ಕಾಗಿ ಕೇಂದ್ರ ಸರ್ಕಾರಕ್ಕೆ ಜನ ಸಾಮಾನ್ಯರು ಒತ್ತಾಯಿಸಬೇಕು’ ಎಂದು ಕರೆ ನೀಡಿದರು.
2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದ ಮೋದಿ ಗ್ರಾಮೀಣ ಜನತೆಗೆ ಉದ್ಯೋಗ ಕಲ್ಪಿಸಲು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆ ಟೀಕಿಸಿದ್ದರು. ಆದರೆ ಕೊರೋನಾ ಅವಧಿಯಲ್ಲಿ ನರೇಗಾ ಯೋಜನೆಯ ಮಹತ್ವವನ್ನು ಮೋದಿ ಅವರು ಮನಗಂಡರು. ಭಾರತದ ರೈತರ ಸಂಕಷ್ಟಗಳ ಕುರಿತಾಗಿ ಪಾಪ್ ಗಾಯಕಿ(ರಿಹಾನಾ) ಸೇರಿದಂತೆ ಇಡೀ ವಿಶ್ವಕ್ಕೆ ಅರ್ಥವಾಗಿದೆ. ಆದರೆ ದಿಲ್ಲಿಯಲ್ಲಿರುವ ನಮ್ಮ ಸರ್ಕಾರಕ್ಕೆ ಈ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.