ಅಯೋಧ್ಯೆ ಉತ್ಖನನ ಮಾಡಿದ ಕೆ.ಕೆ.ಮೊಹಮ್ಮದ್‌ಗೆ ಪಾದೂರು ರಾಷ್ಟ್ರೀಯ ಪ್ರಶಸ್ತಿ

By Kannadaprabha NewsFirst Published Feb 23, 2021, 8:10 AM IST
Highlights

ಅಯೋಧ್ಯೆಯ ಬಾಬ್ರಿ ಮಸೀದಿ ಉತ್ಖನನ ಮಾಡಿ ಅಲ್ಲಿ ರಾಮಮಂದಿರ ಇದ್ದುದನ್ನು ದೃಢಪಡಿಸಿದ್ದ ಪುರಾತತ್ವ ಸಂಶೋಧಕ ಮೊಹಮ್ಮದ್‌ ಅವರಿಗೆ ಪಾದೂರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಉಡುಪಿ (ಫೆ.23):  ಖ್ಯಾತ ಇತಿಹಾಸ ಸಂಶೋಧಕರಾಗಿದ್ದ ಪಾದೂರು ಗುರುರಾಜ ಭಟ್‌ ಸ್ಮರಣಾರ್ಥ ನೀಡಲಾಗುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಪದ್ಮಶ್ರೀ ಡಾ.ಕೆ.ಕೆ.ಮೊಹಮ್ಮದ್‌ ಅವರನ್ನು ಆಯ್ಕೆ ಮಾಡಲಾಗಿದೆ. ಮೊಹಮ್ಮದ್‌ ಅವರು ಅಯೋಧ್ಯೆಯ ಬಾಬ್ರಿ ಮಸೀದಿ ಉತ್ಖನನ ಮಾಡಿ ಅಲ್ಲಿ ರಾಮಮಂದಿರ ಇದ್ದುದನ್ನು ದೃಢಪಡಿಸಿದ್ದ ಪುರಾತತ್ವ ಸಂಶೋಧಕರಾಗಿದ್ದಾರೆ.

ಈ ಬಗ್ಗೆ  ಡಾ.ಪಾದೂರು ಗುರುರಾಜ ಭಟ್‌ ಮೆಮೋರಿಯಲ್‌ ಟ್ರಸ್ವ್‌ ಅಧ್ಯಕ್ಷ ಪ್ರೊ.ಪಿ.ಶ್ರೀಪತಿ ತಂತ್ರಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿಯು 1 ಲಕ್ಷ ರು.ನಗದು ಪುರಸ್ಕಾರವನ್ನು ಹೊಂದಿದೆ. ಫೆ.28ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವಿದ್ಯೋದಯ ಪಬ್ಲಿಕ್‌ ಸ್ಕೂಲಿನ ಸಭಾಭವನದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್‌ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರಾಗಲಿರುವ ಕೆ.ಕೆ.ಮೊಹಮ್ಮದ್‌ ಅವರು, ಅಯೋಧ್ಯೆ ಉತ್ಖನನ ಮತ್ತು ಮಧ್ಯಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ಉತ್ಖನನ ಎಂಬ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಒಂದು ತಿಂಗಳಲ್ಲಿ ರಾಮಮಂದಿರಕ್ಕೆ 1511 ಕೋಟಿ ರೂ. ದೇಣಿಗೆ ಸಂಗ್ರಹ! ..

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ.ಕೆ.ಭೈರಪ್ಪ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿನ ಕೋಶಾಧಿಕಾರಿ ಪರಶುರಾಮ ಭಟ್‌, ಸದಸ್ಯರಾದ ಪಿ.ವೆಂಕಟೇಶ ಭಟ್‌, ಯು.ರಘುಪತಿ ಭಟ್‌, ಎಸ್‌.ವಿ.ಭಟ, ವಾಸುದೇವ ಭಟ್‌ ಉಪಸ್ಥಿತರಿದ್ದರು.

ಕೆ.ಕೆ.ಮೊಹಮ್ಮದ್‌ ಅವರ ಬಗ್ಗೆ

ಆಲಿಘರ್‌ ಮುಸ್ಲಿಂ ವಿವಿಯ ವಿದ್ಯಾರ್ಥಿಯಾಗಿರುವ ಮೊಹಮ್ಮದ್‌ ಅವರು ಆರ್ಕಿಯಾಲಜಿ ಸರ್ವೇ ಆಫ್‌ ಇಂಡಿಯಾದ ಪುರಾತತ್ವ ಅಧೀಕ್ಷಕರಾಗಿ ಮದ್ರಾಸ್‌, ಗೋವಾ, ಬಿಹಾರ್‌, ಉತ್ತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ಅನೇಕ ಕಡೆಗಳಲ್ಲಿ ಉತ್ಖನನ ನಡೆಸಿದ್ದರು.

1996ರಲ್ಲಿ ಬಾಬ್ರಿ ಮಸೀದಿಯ ಉತ್ಖನನ ಮಾಡಿದ ಡಾ.ಬಿ.ಬಿ.ಲಾಲ್‌ ಅವರ ತಂಡದಲ್ಲಿ ಕೆಲಸ ಮಾಡಿದ ಮೊಹಮ್ಮದ್‌, ತಮ್ಮ ಮಧ್ಯಂತರ ವರದಿಯಲ್ಲಿ ಅಲ್ಲಿ ಹಿಂದೂ ದೇವಾಲಯದ 12 ಸ್ತಂಭಗಳನ್ನು, ಅಷ್ಟಮಂಗಲ ಚಿಹ್ನೆ, ಕೂರ್ಮ, ಮಕರ, ಅಮಲಕ ಇತ್ಯಾದಿಗಳನ್ನು ಪತ್ತೆ ಮಾಡಿ, ಮಸೀದಿಯ ನೆಲವು ಮೊದಲು ಹಿಂದೂ ದೇವಾಲಯವಾಗಿತ್ತು ಎಂದು ಹೇಳಿದ್ದರು. ಆದರೆ ಅಂದಿನ ಕೇಂದ್ರ ಸರ್ಕಾರ ಈ ಉತ್ಖನನ ಕಾರ್ಯವನ್ನೇ ಸ್ಥಗಿತಗೊಳಿಸಿತ್ತು.

ಭಾರತಕ್ಕೆ ಪಾಕಿಸ್ತಾನದ ಪ್ರಧಾನಿ ಮುಷರಫ್‌ ಮತ್ತು ಅಮೆರಿಕ ಅಧ್ಯಕ್ಷ ಒಬಾಮ ಬಂದಿದ್ದಾಗ ಅವರಿಗೆ ಮೊಹಮ್ಮದ್‌ ಅವರು ಪ್ರವಾಸಿ ಗೈಡ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮೊಹಮ್ಮದ್‌, ನಾನೊಬ್ಬ ಭಾರತೀಯ ಎಂಬ ಕೃತಿಯನ್ನು ರಚಿಸಿದ್ದಾರೆ.

click me!