ಅಮರೀಂದರ್‌ಗೆ ಪಾಕಿಸ್ತಾನದ ಐಎಸ್‌ಐ ನಂಟು? ತನಿಖೆಗೆ ನಿರ್ಧಾರ!

By Kannadaprabha NewsFirst Published Oct 23, 2021, 8:22 AM IST
Highlights

* ಅಮರೀಂದರ್‌ಗೆ ಐಎಸ್‌ಐ ಕಂಟಕ

* ಅಮರೀಂದರ್‌ ಸ್ನೇಹಿತೆಯ ಐಎಸ್‌ಐ ನಂಟಿನ ತನಿಖೆ

* ಪಂಜಾಬ್‌ ಉಪಮುಖ್ಯಮಂತ್ರಿ ರಂಧಾವಾ ಘೋಷಣೆ

* ಇದು ಸೇಡಿನ ರಾಜಕಾರಣ: ಅಮರೀಂದರ್‌ ಆಕ್ರೋಶ

* 2004ರಿಂದಲೂ ಸಿಂಗ್‌ ನಿವಾಸಕ್ಕೆ ಬರುತ್ತಿದ್ದ ಪಾಕ್‌ ಪತ್ರಕರ್ತೆ

ಚಂಡೀಗಢ(ಅ.23): ಪಂಜಾಬ್‌(Punjab) ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್‌ ಸಿಂಗ್‌(Amarinder Singh) ಅವರ ಸ್ನೇಹಿತೆಯಾದ ಪತ್ರಕರ್ತೆ(Journalist) ಅರೂಸಾ ಅಲಂ ಅವರಿಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐನೊಂದಿಗೆ(ISI) ನಂಟು ಇರಬಹುದು ಎಂದು ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೆ, ‘ಈ ಕುರಿತಾಗಿ ತನಿಖೆ ನಡೆಸಿ, ಸತ್ಯವನ್ನು ಬಯಲು ಮಾಡುತ್ತೇವೆ’ ಎಂದು ಪಂಜಾಬ್‌ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸುಖ್‌ಜಿಂದರ್‌ ರಂಧಾವಾ(Sukhjinder Randhawa) ಹೇಳಿದ್ದಾರೆ.

ಅಮರೀಂದರ್‌ ಕಾಂಗ್ರೆಸ್‌ ತೊರೆದು ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡುತ್ತಿದ್ದಂತೆಯೇ ಈ ವಿದ್ಯಮಾನ ನಡೆದಿರುವುದು ಗಮನಾರ್ಹವಾಗಿದೆ. ‘16 ವರ್ಷದಿಂದ ನನಗೆ ಅರೂಸಾ ಗೊತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನೀವು ನನ್ನ ಸಂಪುಟದಲ್ಲೇ ಮಂತ್ರಿ ಆಗಿದ್ದಿರಿ. ಆಗ ಸುಮ್ಮನಿದ್ದ ನೀವು ಈಗೇಕೆ ಈ ವಿಷಯ ಕೆದಕುತ್ತಿದ್ದೀರಿ. ಇದು ಸೇಡಿನ ರಾಜಕಾರಣ’ ಎಂದು ಅಮರೀಂದರ್‌ ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ರಂಧಾವಾ, ‘ಪಾಕಿಸ್ತಾನದ ಭದ್ರತಾ ವರದಿಗಾರ್ತಿ ಆಗಿರುವ ಅರೂಸಾ ಅಲಂ ಅವರು ಕ್ಯಾ. ಅಮರೀಂದರ್‌ ಸಿಂಗ್‌ ಅವರ ಸ್ನೇಹಿತೆಯಾಗಿದ್ದು, ಅವರು 2004ರಿಂದಲೂ ಸಿಂಗ್‌ ಅವರ ಮನೆಗೆ ಸಾಮಾನ್ಯವಾಗಿ ಆಗ್ಗಾಗ್ಗೆ ಭೇಟಿ ನೀಡುತ್ತಿದ್ದರು. ಜತೆಗೆ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ಅರೂಸಾ ಅಲಂ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಆಕೆಗೆ ಐಎಸ್‌ಐನೊಂದಿಗೆ ನಂಟು ಇರಬಹುದು. ಈ ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಪಂಜಾಬ್‌ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

 ಅಮರೀಂದರ್‌ ಜೊತೆ ಮೈತ್ರಿಗೆ ಸಿದ್ಧ: ಬಿಜೆಪಿ

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾ| ಅಮರಿಂದರ್‌ ಸಿಂಗ್‌ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ ಬೆನ್ನಲ್ಲೇ, ‘ಅವರೊಂದಿಗೆ ಮೈತ್ರಿ ಮಾಡಿಕೊಳ್ಳು ಸಿದ್ಧ’ ಎಂದು ಬಿಜೆಪಿ ಹೇಳಿದೆ ಹಾಗೂ ಅವರನ್ನು ‘ದೇಶಭಕ್ತ’ ಎಂದು ಹೊಗಳಿದೆ.

ಕ್ಯಾಪ್ಟನ್‌ ಘೋಷಣೆ ಬಗ್ಗೆ ಬುಧವಾರ ಮಾತನಾಡಿದ ಪಂಜಾಬ್‌ ಬಿಜೆಪಿ ಉಸ್ತಿವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌, ‘ಅಮರೀಂದರ್‌ ಸಿಂಗ್‌ ದೇಶಭಕ್ತರಾಗಿದ್ದು, ದೇಶ ಮೊದಲು ಎನ್ನುವ ಎಲ್ಲರನ್ನೂ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಿದೆ’ ಎಂದರು.

ಇನ್ನು ರೈತರ ಸಮಸ್ಯೆಗಳನ್ನು ಬಿಜೆಪಿ ಪರಿಹರಿಸಿದರೆ ಬಿಜೆಪಿ ಜೊತೆ ಸೇರುವುದಾಗಿ ಅಮರೀಂದರ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌತಮ್‌, ‘ಅವರು ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಳಿದ್ದಾರೆ. ಇದಕ್ಕಾಗಿ ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು. ಅಮರಿಂದರ್‌ ಮುಖ್ಯ ಮಂತ್ರಿಯಾಗುವ ಮೊದಲು ಸೈನಿಕರಾಗಿದ್ದರು ಹಾಗಾಗಿ ಅವರು ದೇಶ ಮೊದಲು ಎನ್ನುವ ಭಾವನೆಯನ್ನು ಹೊಂದಿದ್ದಾರೆ. ಬಿಜೆಪಿಯು ಸಹ ದೇಶ ಮೊದಲು ಎನ್ನುವ ತತ್ವದ ಮೇಲೆ ಕೆಲಸ ಮಾಡುತ್ತದೆ. ಹಾಗಾಗಿ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.

click me!