
ಹೈದರಾಬಾದ್: ತೆಲಂಗಾಣದಲ್ಲಿ ಆರಂಭಿಸಲಾಗಿರುವ ಜಾತಿ ಗಣನೆಯು ಗಣತಿದಾರರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಅವರು ಜನಾಕ್ರೋಶ ಎದುರಿಸಬೇಕಾಗಿದೆ ಎಂದು ತೆಲಂಗಾಣದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಗಣತಿದಾರಿಗೆ ಜನರು ವೈಯಕ್ತಿಕ ವಿವರಗಳು, ಜಾತಿಯ ಮಾಹಿತಿ ಹಾಗೂ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಮಾಹಿತಿಗಳನ್ನು ನಿಜವಾಗಿಯೂ ಸರ್ಕಾರ ಸದುದ್ದೇಶಕ್ಕೆ ಬಳಸಿಕೊಳ್ಳುತ್ತದೆಯೆ? ಮುಂದೆ ನಮ್ಮ ವೈಯಕ್ತಿಕ ಮಾಹಿತಿಗಳು ದುರ್ಬಳಕೆ ಆಗಬಹುದೆ? ಎಂದು ಕೆಲವು ಜನರು ಸಂದೇಹ ಪಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಗಣತಿದಾರರಿಗೆ ಪೇಚು:
ಮನೆಗಳಿಗೆ ಗಣತಿಗೆಂದು ಹೋದಾಗ ಕೆಲವರು ಅವರನ್ನು ಈ ಮೇಲಿನ ವಿಚಾರಗಳನ್ನು ಮುಂದಿಟ್ಟುಕೊಂಡು ದಬಾಯಿಸುತ್ತಿರುವ ಘಟನೆಗಳೂ ನಡೆದಿವೆ ಎನ್ನಲಾಗಿದೆ. ಈ ಸಂಬಂಧ ಕೆಲವು ವಿಡಿಯೋಗಳು ವೈರಲ್ ಆಗಿದ್ದು, ಗಣತಿದಾರರ ಮೇಲೆ ಜನ ಆಕ್ರೋಶ ವ್ಯಕ್ತಪಡಿಸುವುದು ಕಾಣಿಸುತ್ತದೆ. 'ನೀವು ಏಕೆ ನಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಿದ್ದೀರಿ? ಅವುಗಳು ದುರ್ಬಳಕೆ ಆಗಲ್ಲ ಎಂಬ ಗ್ಯಾರಂಟಿ ಏನು? ಈ ಮಾಹಿತಿಗಳನ್ನು ಇಟ್ಟುಕೊಂಡು ನಮಗೆ ಸರ್ಕಾರಿ ಯೋಜನೆಗಳನ್ನು ಕಡಿತಗೊಳಿಸಿದರೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.
ಇದಲ್ಲದೆ ಕೆಲವರು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಸರ್ಕಾರದ ವಿರುದ್ಧವೂ ತಮ್ಮ ಸಿಟ್ಟನ್ನು ಗಣತಿದಾರರ ಮುಂದೆ ತೀರಿಸಿಕೊಳ್ಳುತ್ತಿದ್ದಾರೆ. 'ಸರ್ಕಾರ ನೀಡಿದ ಗ್ಯಾರಂಟಿ ಭರವಸೆಗಳು ಈಡೇರಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವು ಗಣತಿದಾರರನ್ನು ಹೈರಾಣಾಗಿಸಿವೆ ಎಂದು ವರದಿಗಳು ಹೇಳಿವೆ.
ತೆಲಂಗಾಣದಲ್ಲಿ ಜಾತಿ ಗಣತಿ ಹೇಗೆ ನಡೆದಿದೆ?
ತೆಲಂಗಾಣದಾದ್ಯಂತ 1 ತಿಂಗಳ ಮಟ್ಟಿಗೆ ನಡೆಸಲಾಗುವ ಜಾತಿ ಸಮೀಕ್ಷೆಗಾಗಿ ಸರ್ಕಾರ 50,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರತಿಯೊಬ್ಬ ಮೇಲ್ವಿಚಾರಕರು 150 ಮನೆಗಳಿಂದ ಮಾಹಿತಿ ಸಂಗ್ರಹಣೆ ಮಾಡುತ್ತಾರೆ. ಸಮೀಕ್ಷೆಯನ್ನು 2 ಭಾಗಗಳಲ್ಲಿ ನಡೆಸಲಾಗುತ್ತದೆ, ಇದರಲ್ಲಿ 75 ಪ್ರಶ್ನೆಗಳು - 56 ಮುಖ್ಯ ಪ್ರಶ್ನೆಗಳು ಮತ್ತು 19 ಪೂರಕ ಪ್ರಶ್ನೆಗಳು. ಈ ಪ್ರಶ್ನೆಗಳು ವೈಯಕ್ತಿಕ ವಿವರಗಳು, ಕುಟುಂಬದ ಮಾಹಿತಿ, ಶಿಕ್ಷಣ, ಉದ್ಯೋಗ, ಸ್ವತ್ತುಗಳು, ಜಾತಿ ಸ್ಥಿತಿ ಮತ್ತು ಇತ್ಯಾದಿಗಳನ್ನು ಒಳಗೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ