
ಕೋಲ್ಕತ್ತಾ(ಮೇ.02): ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರ ಬೀಳಲಾರಂಭಿಸಿದ್ದು, ಮತ ಎಣಿಕೆ ಕಾರ್ಯ ಮುಂದುವರೆದಿದೆ. ಅದರಲ್ಲೂ ವಿಶೇಷವಾಗಿ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 200ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅತ್ತ ಬಿಜೆಪಿ ಮುನ್ನಡೆ ಕಾಯ್ದುಕೊಂಡ ಕ್ಷೇತ್ರಗಳು 100ಕ್ಕಿಂತ ಕಡಿಮೆ ಇವೆ. ಹೀಗಿರುವಾಗ ಮಮತಾ ಬ್ಯಾನರ್ಜಿಯ ಟಿಎಂಸಿ ಪರ ಚುನಾವಣಾ ತಂತ್ರ ಹೆಣೆದಿದ್ದ ಪ್ರಶಾಂತ್ ಕಿಶೋರ್ ಈ ಫಲಿತಾಂಶ ಬಹಿರಂಗಗೊಂಡ ಬೆನ್ನಲ್ಲೇ ಮಹತ್ವದ ಘೋಷಣೆ ಮಾಡಿದ್ದು, ತಾನಿನ್ನು ಚುನಾವಣಾ ತಂತ್ರಗಾರನಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದಿದ್ದಾರೆ.
'ಪ.ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದ್ರೆ ಸ್ಥಾನ ಬಿಡುವೆ'
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಾನು ಈ ಸ್ಥಾನವನ್ನು ಖಾಲಿ ಮಾಡುತ್ತಿದ್ದೇನೆ ಎಂದಿದ್ದಾರೆ. ಭವಿಷ್ಯದಲ್ಲಿ ತಾನು ಯಾವತ್ತೂ ಚುನಾವಣಾ ತಂತ್ರ ಹೆಣೆಯುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ. 'ನಾನು ಮಾಡುತ್ತಿರುವ ಕೆಲಸವನ್ನು ಇನ್ಮುಂದೆ ಮಾಡಲು ಇಚ್ಛಿಸುವುದಿಲ್ಲ. ನಾನು ಬಹಳಷ್ಟು ಮಾಡಿದ್ದೇನೆ. ಈಗ ನಾನು ವಿಶ್ರಾಂತಿ ಪಡೆಯಬೇಕಾದ ಹಾಗೂ ಜೀವನದಲ್ಲಿ ಬೇರೆ ಏನಾದರೂ ಸಾಧನೆ ಮಾಡಬೇಕಾದ ಸಮಯ ಬಂದಿದೆ. ನಾನಿನ್ನು ಈ ಜಾಗ ಖಾಲಿ ಮಾಡಲು ಇಚ್ಛಿಸುತ್ತೇನೆ' ಎಂದಿದ್ದಾರೆ.
ಬಿಜೆಪಿಗೆ ಚಾಲೆಂಜ್ ಹಾಕಿದ್ದ ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪರ ರಣತಂತ್ರ ಹೆಣೆದಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮಮತಾ ಬ್ಯಾನರ್ಜಿಯ ಸಮಾವೆಶಗಳಿಗೆ ಭಾರೀ ಪ್ರಮನಾಣದಲ್ಲಿ ಜನ ಸೇರುತ್ತಿದ್ದರು. ಹೀಗಿದ್ದರೂ ಅವರು 18ಸ್ಥಾನಗಳಲ್ಲಿ ಸೋಲನುಭವಿಸಿದ್ದರು. ಹೀಗಾಗಿ ಜನ ಸೇರುತ್ತಾರೆಂದರೆ ಗೆಲ್ಲುತ್ತೇವೆಂಬ ಅರ್ಥವಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೂ 40 ಸಮಾವೇಶ ಮಾಡಿತ್ತು. ಇದರರ್ಥ ಟಿಎಂಸಿ ಸೋಲುತ್ತದೆ ಎಂದಲ್ಲ ಎಂದಿದ್ದರು.
'ಚುನಾವಣಾ ತಂತ್ರಗಾರನ ಕೆಲಸ ಹೋಯ್ತು: ಇಬ್ಬರ ನೌಕರಿಗೆ ಕತ್ತರಿ'
ಇನ್ನು ಇದಕ್ಕೂ ಮುನ್ನ 2020ರ ಡಿಸೆಂಬರ್ 21ರಂದು ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಟ್ವೀಟ್ ಒಂದನ್ನು ಮಾಡಿದ್ದರು. ಇದರಲ್ಲಿ ಬಿಜೆಪಿ ರಾಜ್ಯದಲ್ಲಿ ಡಬಲ್ ಡಿಜಿಟ್ ಕ್ರಾಸ್ ಮಾಡುವಲ್ಲಿ ಯಶಸ್ವಿಯಾದರೆ ತಾನು ನಿವೃತ್ತಿ ಘೋಷಿಸುತ್ತೇನೆ. ಈ ಟ್ವೀಟ್ ಸೇವ್ ಮಾಡಿಟ್ಟುಕೊಳ್ಳಿ ಎಂದಿದ್ದರು.
ಪಶ್ಚಿಮ ಬಂಗಾಳ: ಮೋದಿ VS ದೀದಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸದ್ಯ ಕಳೆದ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಎಂಭತ್ತರಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯ ಈ ಸಾಧನೆಯಿಂದಾಗಿಯೇ ಪ್ರಶಾಂತ್ ಕಿಸೋರ್ ತಾವು ಹೇಳಿದ ಮಾತಿನಂತೆ ನಿವೃತ್ತಿ ಘೋಷಿಸಿದ್ದಾರೆ ಎಂಬುವುದು ಸೋಶಿಯಲ್ ಮಿಡಿಯಾದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ