G20 Summit: ಜಗತ್ತಿನ ಅಭಿವೃದ್ಧಿಗೆ ಭಾರತವೇ ಮುಖ್ಯ ಎಂದ ಪ್ರಧಾನಿ ಮೋದಿ!

By Santosh NaikFirst Published Nov 15, 2022, 1:18 PM IST
Highlights

ಜಗತ್ತು ಅಭಿವೃದ್ಧಿ ಕಾಣಬೇಕಾದಲ್ಲಿ, ಭಾರತವೇ ಮುಖ್ಯ. ಎಲ್ಲಾ ವಿಭಾಗಗಳಲ್ಲಿ ಭಾರತದ ಭದ್ರತೆಯೇ ಜಗತ್ತಿನ ಅಭಿವೃದ್ಧಿಯ ಮೂಲ ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾದ ಬಾಲಿಯಲ್ಲಿ ಮಂಗಳವಾರ ಆರಂಭವಾದ ಜಿ20 ಶೃಂಗಸಭೆಯ ಭಾಷಣದ ವೇಳೆ ಹೇಳಿದ್ದಾರೆ. ಅದರೊಂದಿಗೆ ರಷ್ಯಾ ಉಕ್ರೇನ್‌ ಯುದ್ಧ, ಆಹಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
 

ಬಾಲಿ (ನ.15): ಜಗತ್ತಿನ ಅಭಿವೃದ್ಧಿಯ ಕನಸಿನಲ್ಲಿ ಭಾರತವೇ ಪ್ರಮುಖ ಪಾತ್ರ ವಹಿಸಿದೆ. ಯಾಕೆಂದರೆ, ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು. ಇಂಧನ ಪೂರೈಕೆಗಳ ಮೇಲೆ ಯಾವುದೇ ರೀತಿಯ ನಿರ್ಬಂಧಗಳನ್ನು ನಾವು ಉತ್ತೇಜನ ಮಾಡುವುದಿಲ್ಲ. ಇಂಧನ ಕ್ಷೇತ್ರದ ಮಾರುಕಟ್ಟೆ ಅತ್ಯಂತ ಸ್ಥಿರವಾಗಿರುವುದು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ 2030ರ ವೇಳೆ ಭಾರತವು ತನ್ನ ಅಗತ್ಯದ ಅರ್ಧದಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದದ ಮೂಲಗಳಿಂದ ಉತ್ಪಾದನೆ ಮಾಡಲಿದೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.ಇದಲ್ಲದೆ, ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ, ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ ಮತ್ತು ರಾಗಿಗಳಂತಹ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮರು-ಜನಪ್ರಿಯಗೊಳಿಸುತ್ತಿದ್ದೇವೆ. ರಾಗಿ ಜಾಗತಿಕ ಅಪೌಷ್ಟಿಕತೆ ಮತ್ತು ಹಸಿವನ್ನು ಸಹ ಪರಿಹರಿಸಬಹುದು ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹವಾಮಾನ ಬದಲಾವಣೆ, ಕೋವಿಡ್ ಸಾಂಕ್ರಾಮಿಕ ಮತ್ತು ಭಾರತವು ಇಂಧನ ಸುರಕ್ಷತೆಯ ಪ್ರಾಮುಖ್ಯತೆಯಿಂದ ಪ್ರಸ್ತುತಪಡಿಸುವ ಸವಾಲುಗಳ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಆಹಾರ ಬಿಕ್ಕಟ್ಟಿಗೆ ಜಗತ್ತಿನಲ್ಲಿ ಪರಿಹಾರವಿಲ್ಲ: ಇಂದು ರಸಗೊಬ್ಬರಗಳ ಕೊರತೆ ಆಗುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಖಂಡಿತಾ ಮುಂದೆ ಆಹಾರ ಬಿಕ್ಕಟ್ಟು ಉದ್ಭವವಾಗುತ್ತದೆ. ಆಹಾರ ಬಿಕ್ಕಟ್ಟು ಎದುರಾದಲ್ಲಿ ವಿಶ್ವದ ಮುಂದೆ ಯಾವುದೇ ಪರಿಹಾರಗಳೂ ಇರುವುದಿಲ್ಲ.ರಸಗೊಬ್ಬರಗಳು ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪಳಿ ಸ್ಥಿರವಾಗಿರಬೇಕು ಯಾವುದೇ ಸಮಸ್ಯೆ ಎದುರಾದರೂ ಇವುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ನಾವು ಪರಸ್ಪರ ಒಪ್ಪಂದವನ್ನು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನು ಉಕ್ರೇನ್‌ ಹಾಗೂ ರಷ್ಯಾದ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದು ಹೇಗೆ, ಕದನ ವಿರಾಮ ಮಾಡುವುದು ಹೇಗೆ ಎನ್ನುವುದರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಈ ವಿಚಾರದಲ್ಲಿ ರಾಜತಾಂತ್ರಿಕತೆಯ ಹಾದಿಗೆ ಮರಳಬೇಕು ಎಂದು ಭಾರತ ಮೊದಲಿನಿಂದಲೂ ಹೇಳುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಕಳೆದ ಶತಮಾನದಲ್ಲಿ, ಎರಡನೆಯ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನು ಉಂಟುಮಾಡಿತು, ನಂತರ ಅಂದಿನ ನಾಯಕರು ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳಲು ಗಂಭೀರ ಪ್ರಯತ್ನವನ್ನು ಮಾಡಿದರು. ಈಗ ನಮ್ಮ ಸರದಿಯಾಗಿದೆ ಈ ಕುರಿತಾಗಿ ನಾವು ಗಮನ ನೀಡಬೇಕಿದೆ ಎಂದರು.
 
ಉಕ್ರೇನ್‌ ಯುದ್ಧದಿಂದ ಭೀಕರ ಪರಿಸ್ಥಿತಿ: ಜಿ-20 ಶೃಂಗಸಭೆಯ ನಡುವೆ ಆಹಾರ ಇಂಧನ ಭದ್ರತಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಕರೋನಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಪ್ರಪಂಚದ ಪೂರೈಕೆ ಸರಪಳಿಯು ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಇದು ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಯುಎನ್‌ನಂತಹ ಸಂಸ್ಥೆಗಳು ಈ ವಿಷಯಗಳಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಮಾರ್ಗವನ್ನು ಕಂಡುಹಿಡಿಯಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

G20 Summit : ಮೋದಿ ಇಂಡೋನೇಷ್ಯಾಕ್ಕೆ: ಇಂದು, ನಾಳೆ ಜಿ20 ಶೃಂಗ

ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿಶ್ವಸಂಸ್ಥೆ ವಿಫಲ: ವಿಶ್ವಸಂಸ್ಥೆ ಮತ್ತು ಜಿ20ಯಂಥ ಸಂಸ್ಥೆಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ವಿಶ್ವಸಂಸ್ಥೆಯಂತಹ ಬಹುಪಕ್ಷೀಯ ಸಂಸ್ಥೆಗಳು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಗಿವೆ ಎಂಬುದನ್ನು ಒಪ್ಪಿಕೊಳ್ಳಲು ನಾವು ಹಿಂಜರಿಯಬಾರದು." ಎಂದರು ಇಂದು ಪ್ರಪಂಚವು G-20 ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಮತ್ತು ನಮ್ಮ ಗುಂಪಿನ ಪ್ರಸ್ತುತತೆ ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಜಿ20  ಬಗ್ಗೆ ಹೇಳಿದರು.

G-20 Summit: ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡಲು ಓಡೋಡಿ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌: ವಿಡಿಯೋ ನೋಡಿ..

ಪ್ರಧಾನಿ ಮೋದಿ ಅವರದಲ್ಲದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌, ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಚಿವ ಎಸ್.ಜೈಶಂಕರ್‌ ಕೂಡ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗದಲ್ಲಿ ಭಾಗವಹಿಸಿದ್ದಾರೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಿ20 ಶೃಂಗಸಭೆಯಿಂದ ದೂರ ಉಳಿದಿದ್ದಾರೆ. ಆದಾಗ್ಯೂ, ಈ ಸಭೆಯಲ್ಲಿ ಪಾಲ್ಗೊಳ್ಳಲು ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ತಮ್ಮ ಪ್ರತಿನಿಧಿಯಾಗಿ ಕಳುಹಿಸಿದ್ದಾರೆ.

click me!